ಟಿಪ್ಪು ಜಯಂತಿ: ಗುಪ್ತಚರ ಇಲಾಖೆಯಿಂದ ಸರಕಾರಕ್ಕೆ ಸ್ಪೋಟಕ ವರದಿ
ಬೆಂಗಳೂರು, ನ 9: ಟಿಪ್ಪು ಜಯಂತಿ ಆಚರಿಸುತ್ತೇವೆ ಎನ್ನುವುದು ಸರಕಾರದ ಅಚಲ ನಿರ್ಧಾರವಾದರೆ, ಪ್ರತಿಭಟನೆ ಮಾಡಿಯೇ ಮಾಡುತ್ತೇವೆ ಎನ್ನುವುದು ಬಿಜೆಪಿಯ ನಿಲುವು. ಈವೆರಡರ ನಡುವೆ ಗುಪ್ತಚರ ಇಲಾಖೆ ಸರಕಾರಕ್ಕೆ ಸ್ಪೋಟಕ ವರದಿ ನೀಡಿದೆ.
ನವೆಂಬರ್ ಹತ್ತರಂದು ಬೆಂಗಳೂರು ಸೇರಿದಂತೆ ಉಡುಪಿ, ದಕ್ಷಿಣಕನ್ನಡ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಗಲಭೆಗಳಾಗುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಸರಕಾರಕ್ಕೆ ಎಚ್ಚರಿಕೆ ನೀಡಿದೆ. (#BanTippuJayanthi ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್)
ಇಲಾಖೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಮುಂಜಾಗೃತಾ ಕ್ರಮವಾಗಿ ಭಾರೀ ಬಂದೋಬಸ್ತ್ ನೀಡಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಸೂಕ್ಷ ಪ್ರದೇಶಗಳಲ್ಲಿ ಮೆರವಣಿಗೆಗೆ ಅನುಮತಿ ನೀಡಬಾರದೆಂದು ಈಗಾಗಲೇ ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ.
ಗುರುವಾರ (ನ 10) ರಾಜ್ಯಾದ್ಯಂತ ಕರಾಳ ದಿನ ಆಚರಣೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡುವುದಾಗಿ ಹೇಳಿದ್ದಾರೆ.
ಬಿಎಸ್ವೈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕೆಜೆಪಿಯಲ್ಲಿದ್ದಾಗ ಟಿಪ್ಪುವಿನ ವೇಷ ಹಾಕಿಕೊಂಡು ಕತ್ತಿ ಹಿಡಿದಿದ್ದ ಯಡಿಯೂರಪ್ಪನವರಿಗೆ ಈ ವಿಚಾರದಲ್ಲಿ ಮಾತನಾಡಲು ನೈತಿಕತೆ ಇದೆಯೇ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
ಟಿಪ್ಪು ಜಯಂತಿಯ ಬಗ್ಗೆ ಮೊದಲ ಬಾರಿಗೆ ಕುಮಾರಸ್ವಾಮಿ ಹೇಳಿಕೆ, ಮುಂದಿ ಓದಿ..

ಗುಪ್ತಚರ ಇಲಾಖೆ
ಐದು ಜಿಲ್ಲೆಗಳಲ್ಲಿ ಗಲಭೆ ಸಂಭವಿಸುವ ಸಾಧ್ಯತೆಯಿದೆ. ಉಡುಪಿ, ದಕ್ಷಿಣಕನ್ನಡ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಗಲಭೆಗಳಾಗುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಸಿವಿಲ್ ಪೊಲೀಸರ ಜೊತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲು ಸರಕಾರ ನಿರ್ಧರಿಸಿದೆ.

ಆರ್ ಎ ಎಫ್ ತುಕುಡಿ
ಸಿವಿಲ್ ಪೊಲೀಸರ ಜೊತೆ ಗೃಹರಕ್ಷಕ ಸಿಬ್ಬಂದಿ ಮತ್ತು ಕ್ಷಿಪ್ರಪಡೆಗಳನ್ನು ನಿಯೋಜಿಸಲು ಗೃಹ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಆರ್ ಎ ಎಫ್ ತುಕುಡಿಯನ್ನು ನಿಯೋಜಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ.

ಕುಮಾರಸ್ವಾಮಿ
ಟಿಪ್ಪು ಜಯಂತಿಯ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ರೈತರ ಸಾವಿರಾರು ಸಮಸ್ಯೆಗಳಿವೆ. ಇದನ್ನು ಪರಿಹರಿಸುವುದು ಬಿಟ್ಟು ಸರಕಾರಕ್ಕೆ ಟಿಪ್ಪು ಜಯಂತಿ ಆಚರಿಸುವ ಅಗತ್ಯ ಏನಿದೆ? ಬಿಜೆಪಿಯವರಿಗೂ ಮಾಡಲು ಬೇರೇನೂ ಕೆಲಸವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಯಡಿಯೂರಪ್ಪ ಹೇಳಿಕೆ
ರುದ್ರೇಶ್ ಸಾವಿನ ವಿಚಾರದಲ್ಲಿ ಶೋಭಾ ವಿರುದ್ದ ಕಾಂಗ್ರೆಸ್ ಮಾನನಷ್ಟ ಮೊಕದ್ದಮೆ ಹೂಡಲಿ, ಬೇಕಾದರೆ ನಮ್ಮ ಮೇಲೂ ಮೊಕದ್ದಮೆ ದಾಖಲಿಸಲಿ. ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುತ್ತೇವೆ - ಯಡಿಯೂರಪ್ಪ.

ಸಿದ್ದರಾಮಯ್ಯ ಗರಂ
ಸರಕಾರದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಸರಕಾರವನ್ನು ಹೈಜಾಕ್ ಮಾಡಲು ನಾವು ಬಿಡುವುದಿಲ್ಲ, ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾದರೆ, ಎಷ್ಟೇ ದೊಡ್ಡವರಾದರೂ ಸರಕಾರ ಸುಮ್ಮನೆ ಬಿಡುವುದಿಲ್ಲ.












Click it and Unblock the Notifications