ಯಡಿಯೂರಪ್ಪ ಪುತ್ರನ ಮೇಲೆ ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್?
Recommended Video

ಯಡಿಯೂರಪ್ಪನವರು ತಮ್ಮ ಅವಿಶ್ವಾಸ ಗೊತ್ತುವಳಿ ಮಂಡಿಸುವ ವೇಳೆ, ನಮ್ಮ ಹೋರಾಟ ಏನಿದ್ದರೂ ಅಪ್ಪಮಕ್ಕಳ ಮೇಲೆ, ಇಂತಹ ಅಧಿಕಾರದಾಹಿಗಳನ್ನು ಮಟ್ಟಹಾಕಬೇಕಿದೆ ಎಂದು ಕುಮಾರಸ್ವಾಮಿ - ದೇವೇಗೌಡರ ವಿರುದ್ದ ಗುಡುಗಿದ್ದರು. ಇದಾದ ನಂತರವೂ ಇಬ್ಬರ ನಡುವೆ ವಾಕ್ಸಮರ ನಡೆಯುತ್ತಲೇ ಇದ್ದವು.
ಆದರೆ, ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ವಿರುದ್ದ ಬಿಜೆಪಿಯದ್ದು 'ಸಾಫ್ಟ್ ಕಾರ್ನರ್ ರಾಜಕಾರಣ' ಎನ್ನುವ ರೀತಿಯಲ್ಲಿ, ವಿರೋಧ ಪಕ್ಷದದಲ್ಲಿ ಇರುವ ಕಾರಣಕ್ಕಾಗಿ ಕಾಟಾಚಾರಕ್ಕೆ ಆರೋಪ, ಪ್ರತಿಭಟನೆ ಬಿಜೆಪಿಯಿಂದ ನಡೆಯುತ್ತಿತ್ತೇ ಹೊರತು, ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು ಕಮ್ಮಿ.
ಈಗ, ಸಿಎಂ ಕುಮಾರಸ್ವಾಮಿ ಹೊಸ ಹೇಳಿಕೆಯೊಂದನ್ನು ನೀಡಿದ್ದು, ಇದು ಮತ್ತೆ ಎಚ್ಡಿಕೆ ಮತ್ತು ಬಿಎಸ್ವೈ ವಾಕ್ಸಮರಕ್ಕೆ ಕಾರಣವಾಗಿದೆ. ಎಂದಿನಂತೆ ತಾನು ನೀಡಿರುವ ಹೇಳಿಕೆಗೆ ದಾಖಲೆ ನೀಡಲು ಸಿದ್ದ ಎನ್ನುವ ಮಾತನ್ನು ಕುಮಾರಸ್ವಾಮಿ ಆಡಿದ್ದಾರೆ.
ಯಡಿಯೂರಪ್ಪನವರ ಮೊದಲ ಪುತ್ರ ಬಿ ವೈ ವಿಜಯೇಂದ್ರ ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಯಡಿಯೂರಪ್ಪ ಸಿಡಿಮಿಡಿಗೊಂಡಿದ್ದಾರೆ, ಅಲ್ಲದೇ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ್ದಾರೆ.
ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆ, ಇಬ್ಬರ ನಡುವೆ ಇನ್ನೊಂದು ಸುತ್ತಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಏನಿದು, ಬಿಎಸ್ವೈ ಪುತ್ರನ ಮೇಲೆ ಕುಮಾರಸ್ವಾಮಿ ನೀಡಿದ ಹೇಳಿಕೆ, ಮುಂದೆ ಓದಿ..

ವಿಜಯೇಂದ್ರನನ್ನು ಯಡಿಯೂರಪ್ಪ ಬಳಸಿಕೊಳ್ಳುತ್ತಿದ್ದಾರೆ
ಸಮ್ಮಿಶ್ರ ಸರಕಾರ ಬಂದಾಗಿನಿಂದ ಯಡಿಯೂರಪ್ಪನವರು ಸರಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಆದಾಯ ತೆರಿಗೆ ಇಲಾಖೆಯೂ ಸೇರಿದಂತೆ, ಕೇಂದ್ರದ ಸುಪರ್ದಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳ ಮೂಲಕ, ಸರಕಾರವನ್ನು ಪತನಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಕೆಲಸಕ್ಕೆ ಅವರ ಪುತ್ರ ವಿಜಯೇಂದ್ರನನ್ನು ಯಡಿಯೂರಪ್ಪ ಬಳಸಿಕೊಳ್ಳುತ್ತಿದ್ದಾರೆಂದು, ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.

ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ
ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಈ ಸಂಬಂಧ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಾನು ಯಾವುದನ್ನೂ ಕಲ್ಪಿಸಿಕೊಂಡು ಹೇಳುವುದಿಲ್ಲ. ಸರಿಯಾದ ಮಾಹಿತಿಯಿಂದಲೇ ಹೇಳಿಕೆ ನೀಡುತ್ತಿದ್ದೇನೆ ಎಂದು ಕುಮಾರಸ್ವಾಮಿ, ಬುಧವಾರ (ಸೆ 5) ಹೇಳಿಕೆ ನೀಡಿದ್ದರು. ಇದಕ್ಕೆ ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತೇನೆ
ನನ್ನ ಪುತ್ರ ಹಿರಿಯ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದನ್ನು ಕುಮಾರಸ್ವಾಮಿ ರುಜುವಾತು ಪಡಿಸಿದರೆ, ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತೇನೆ. ವಿಜಯೇಂದ್ರ ಐಟಿ ಅಧಿಕಾರಿಗಳನ್ನು ಭೇಟಿಯಾಗಿದ್ದಕ್ಕೆ ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ, ಇಲ್ಲದಿದ್ದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಜಬಾಬ್ದಾರಿಯುತವಾಗಿ ಕುಮಾರಸ್ವಾಮಿ ಮಾತನಾಡಬೇಕು
ರಾಜ್ಯದ ಮುಖ್ಯಮಂತ್ರಿಯಾಗಿ ಜಬಾಬ್ದಾರಿಯುತವಾಗಿ ಕುಮಾರಸ್ವಾಮಿ ಮಾತನಾಡಬೇಕು. ನಮಗೂ, ಅದಕ್ಕೂ ಏನು ಸಂಬಂಧ ವಿಲ್ಲ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ನಮ್ಮ ಕೇಸುಗಳಿವೆ, ಅದಕ್ಕಾಗಿ ನಾವು ಓಡಾಡುತ್ತಿದ್ದೇವೆ. ಸುಖಾಸುಮ್ಮನೆ ಏನೋ ಹೇಳಿಕೆ ನೀಡಿ, ನನ್ನ ಮಗನನ್ನು ಬಲಿಪಶು ಮಾಡಬೇಡಿ. ಮುಖ್ಯಮಂತ್ರಿಗಳ ಘನತೆಗೆ ತಕ್ಕಂತೆ ವರ್ತಿಸಿ ಎಂದು ಯಡಿಯೂರಪ್ಪ ಹೇಳಿದ್ದರು.

ಮಾನನಷ್ಟ ಮೊಕದ್ದಮೆಗೆ ನಾನು ಹೆದರುವವನಲ್ಲ
ಯಡಿಯೂರಪ್ಪ ಹೇಳಿಕೆಗೆ ಮತ್ತೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಮಾನನಷ್ಟ ಮೊಕದ್ದಮೆಗೆ ನಾನು ಹೆದರುವವನಲ್ಲ. ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ. ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳನ್ನು ಭೇಟಿಯಾಗಿದ್ದು ಹೌದು ಎನ್ನುವುದನ್ನು ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆಂದು ಸಿಎಂ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಯವರ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ (ಸಿಎ) ಎಚ್ ಬಿ ಸುನಿಲ್ ಮನೆಯ ಮೇಲೆ, ಆದಾಯ ತೆರಿಗೆ ದಾಳಿ ನಡೆದಿತ್ತು, ಆದರೆ ಇದನ್ನು ಸಿಎಂ ನಿರಾಕರಿಸಿದ್ದರು.












Click it and Unblock the Notifications