ಗಡಿ ವಿವಾದ: ಗಡಿಭಾಗದಲ್ಲಿ ಹೆಚ್ಚು ಮರಾಠಿ ಶಾಲೆ ತೆರೆಯಲು ನಡೆದಿತ್ತು ಸಂಚು: ಸಿ. ಸೋಮಶೇಖರ್
ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಮರಾಠಿ ಶಾಲೆಗಳನ್ನು ತೆರೆಯಲು ಎಂಇಎಸ್ ಸಂಘಟನೆ ಹಾಗೂ ಮಹಾರಾಷ್ಟ್ರದ ನಿಯೋಗವೊಂದು ಸಂಚು ನಡೆಸಿತ್ತು. ಈ ಸಂಚನ್ನು ನಮ್ಮ ಪ್ರಾಧಿಕಾರದಿಂದ ತಡೆದಿದ್ದೇವೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ.ಸಿ ಸೋಮಶೇಖರ್ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಸಿ. ಸೋಮಶೇಖರ ಅವರ ಅಧ್ಯಕ್ಷ ಅವಧಿಯ ಎರಡು ವರ್ಷಗಳ ಪ್ರಾಧಿಕಾರದ ಸಾಧನೆಯ "ಸಾಧನಾ ದರ್ಶನ " ಕಿರು ಹೊತ್ತಿಗೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.
ನಂತರ ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡಿಗ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಕುಮ್ಮಕ್ಕು ಕೊಡುವ ಸಂಚು ನಡೆದಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಹಲವು ಗಡಿ ಗ್ರಾಮಗಳಲ್ಲಿ ಪ್ರೌಢಶಾಲೆಗಳಿಗೆ ಮಕ್ಕಳು ಸೇರುತ್ತಿಲ್ಲ. ಈ ನಿಟ್ಟಿನಲ್ಲಿ ಒಂದೇ ಶಾಲೆಯಲ್ಲಿ ಪ್ರೌಢಶಾಲೆ ಮುಗಿಸುವ ಮಕ್ಕಳಿಗೆ ಪ್ರೋತ್ಸಾಹಿಸಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಪ್ರತೀ ಮಗುವಿನ ಹೆಸರಿನಲ್ಲಿ ತಲಾ ಐದು ಸಾವಿರ ರೂ ಠೇವಣಿ ಇಡಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ 2.50 ಕೋಟಿಯ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

2010 ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. 6 ರಾಜ್ಯಗಳ ಜತೆ ನಮ್ಮ ಗಡಿ ಹೊಂದಿಕೊಂಡಿದೆ. 19 ಜಿಲ್ಲೆಗಳು,63 ತಾಲ್ಲೂಕುಗಳು,980 ಕ್ಕೂ ಹೆಚ್ಚು ಹಳ್ಳಿಗಳು ಗಡಿ ಭಾಗದಲ್ಲಿವೆ. ಕನ್ನಡದ ಭದ್ರತೆ ಒದಗಿಸುವುದು ಪ್ರಾಧಿಕಾರದ ಆಶಯವಾಗಿದೆ ಎಂದರು.
ಡಿಸಿಗಳೇ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅನುದಾನ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಅನ್ನೋದನ್ನ ಪರಿಶೀಲನೆ ಮಾಡಲು ಒಂದು ಕಮಿಟಿ ರಚನೆ ಮಾಡಿದ್ದೇವೆ.
ಜಿಲ್ಲಾಧಿಕಾರಿ ಒಂದು ದಿನವಾದ್ರೂ ಗಡಿ ಭಾಗದ ಜಿಲ್ಲೆಗಳಿಗೆ ಹೋಗಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಗ್ರಾಮ ವಾಸ್ತವ್ಯದ ಮೂಲಕ ಇದನ್ನ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಕೇರಳದ ಗಡಿಯಲ್ಲಿ ಇರುವ ಹಳ್ಳಿಗಳಿಗೆ ಹೆಸರು ಬದಲಾವಣೆ ಮಾಡುವ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅಲ್ಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇವೆ.ಹೆಸರುಗಳ ಬದಲಾವಣೆ ಮಾಡದಂತೆ ಸೂಚಿಸಿದ್ದೇವೆ. ಗಡಿ ಬಾಗದ ಜನರ ಆರ್ಥಿಕ,ಸಾಮಾಜಿಕ, ಶಿಕ್ಷಣ ಬಗ್ಗೆ ಅಧ್ಯಯನ ಬಗ್ಗೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ 8 ವಿವಿ ಗಳನ್ನ ಸಂಪರ್ಕ ಮಾಡಿದ್ದೇವೆ. ಹಾಗೂ ವರದಿ ಕೊಡುವಂತೆ ಮನವಿ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ವರದಿ ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಲಿದ್ದಾರೆ ಎಂದರು.
ಕಾಸರಗೋಡು ಗೋವಾ ಮತ್ತು ಅಕ್ಕಲಕೋಟೆಯಲ್ಲಿ ಕನ್ನಡ ಭವನ ನಿರ್ಮಾಣದ ಚಿಂತನೆ ಇದೆ. ಈಗಾಗಲೇ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಚರ್ಚೆಯೂ ನಡೆಸಿದ್ದೇವೆ. ಸೊಲ್ಲಾಪುರ, ಜತ್ತ್ ನಲ್ಲೂ ಕನ್ನಡ ಭವನ ನಿರ್ಮಾಣವಾಗಬೇಕಿದೆ. ಅದರ ಬಗ್ಗೆಯೂ ಚಿಂತನೆ ಇದೆ. ನಮ್ಮ ರಾಜ್ಯದಲ್ಲಿ ಕೊಂಕಣಿ ಭವನಕ್ಕೆ ಜಾಗ ಕೊಟ್ಟಿದ್ದೇವೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.












Click it and Unblock the Notifications