ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ ಗೆ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಆಯ್ಕೆ
ಬೆಂಗಳೂರು, ಸೆಪ್ಟೆಂಬರ್ 25: ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ 2018ನೇ ಸಾಲಿಗೆ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ಅಧ್ಯಕ್ಷತೆಯ ಸಮಿತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹುಣಸವಾಡಿ ರಾಜನ್, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ ಈ ಸಮಿತಿಯ ಸದಸ್ಯರಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸದಸ್ಯ ಕಾರ್ಯದರ್ಶಿಗಳಾಗಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಲಾಗುವ ಈ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದ್ದು, ಗಾಂಧೀ ಜಯಂತಿ ದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕರ್ನಾಟಕದ ಪ್ರಮುಖ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರು, ನಾಟಕದ ಹೊರತಾಗಿ ಅಂಕಣಕಾರನಾಗಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. 'ಸಮುದಾಯ' ಪ್ರಾರಂಭಿಸಿ ಕನ್ನಡ ನಾಟಕ ರಂಗಕ್ಕೆ ಹೊಸ ದಿಕ್ಕು ಪ್ರಧಾನ ಮಾಡಿದ ಹೆಗ್ಗಳಿಕೆ ಪ್ರಸನ್ನ ಅವರದ್ದು.
ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕತೆ, ಹದ್ದು ಮೀರಿದ ಹಾದಿ, ಮಹಿಮಾಪುರ, ಜಂಗಮದ ಬದುಕು ಇನ್ನೂ ಕೆಲವು ನಾಟಕಗಳನ್ನು ಅವರು ರಚಿಸಿದ್ದಾರೆ. ಕಾರ್ನಾಡರ ತುಘಲಕ್, ಮ್ಯಾಕ್ಸಿಂಗಾರ್ಕಿಯ ತಾಯಿ (ಮದರ್), ಕದಡಿದ ನೀರು ಇನ್ನೂ ಹಲವು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ.
ಈ ವರೆಗೆ ಈ ಪ್ರಶಸ್ತಿಗೆ ಹಿರಿಯ ಗಾಂಧೀವಾದಿಗಳಾದ ಎಸ್.ಎನ್. ಸುಬ್ಬರಾವ್, ಹೋ. ಶ್ರೀನಿವಾಸಯ್ಯ, ಚನ್ನಮ್ಮ ಹಳ್ಳಿಕೇರಿ ಹಾಗೂ ಹೆಚ್.ಎಸ್. ದೊರೆಸ್ವಾಮಿ ಅವರು ಆಯ್ಕೆಯಾಗಿದ್ದರು.












Click it and Unblock the Notifications