ಪುನರ್ವಸು ಮಳೆಗೆ ತತ್ತರಿಸಿದ ಮಲೆನಾಡು: ಮನೆಗಳ ಗೋಡೆ ಕುಸಿತ
ಚಿಕ್ಕಮಗಳೂರು, ಜುಲೈ.12: ಜಿಲ್ಲೆಯಾದ್ಯಂತ ಇಂದು ಗುರುವಾರ ಕೂಡ ಧಾರಕಾರ ಮಳೆ ಸುರಿಯುತ್ತಿದ್ದು, ತರೀಕೆರೆ ಪಟ್ಟಣದಲ್ಲಿ ಎರಡು ಮನೆಗಳ ಗೋಡೆ ಕುಸಿದಿದೆ. ಒಂದೇ ರಸ್ತೆಯಲ್ಲಿರುವ ಅಕ್ಕಪಕ್ಕದ ಎರಡು ಮನೆಗಳ ಗೋಡೆ ಕುಸಿದಿದೆ.
ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದ್ದು, ಪರಮೇಶಪ್ಪ, ನಿಂಗಣ್ಣ ಎಂಬುವರಿಗೆ ಸೇರಿದ ಮನೆಯ ಗೋಡೆಗಳು ಕುಸಿದಿವೆ.
ಬೆಂಗಳೂರಲ್ಲಿ ಇನ್ನೆರೆಡು ದಿನ ಮಳೆ ಸಾಧ್ಯತೆ:ಇಲಾಖೆ ಮುನ್ಸೂಚನೆ
ಗೋಡೆ ಕುಸಿತದಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಕಳೆದ ನಾಲ್ಕು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆ ಕಳೆದ ರಾತ್ರಿಯೂ ಮುಂದುವರೆದಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ಇಡೀ ರಾತ್ರಿ ಮಳೆಯಾಗಿದೆ.
ಶೃಂಗೇರಿಯಲ್ಲಿ ಕಳೆದ ಮೂರು ದಿನಗಳಿಂದಲೂ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶೃಂಗೇರಿ ತಾಲೂಕಿನ ನದಿಪಾತ್ರ, ತಗ್ಗುಪ್ರದೇಶ ಹಾಗೂ ಪ್ರವಾಹ ಪೀಡಿತ ಪ್ರದೇಶದ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಬಿಇಓ ಉಮೇಶ್ ಶಾಲೆಯ ಆಡಳಿತ ಮಂಡಳಿಗೆ ವಹಿಸಿದ್ದಾರೆ.
ಉಳಿದಂತೆ ಕೊಪ್ಪ, ಎನ್.ಆರ್.ಪುರದಲ್ಲೂ ಮಳೆಯಾಗುತ್ತಿದ್ದು, ಬಿಟ್ಟು-ಬಿಟ್ಟು ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮೂಡಿಗೆರೆ, ಕಳಸ ಭಾಗದಲ್ಲೂ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ಕಳಸ, ಶೃಂಗೇರಿ, ಬಾಳೆಹೊನ್ನೂರು ಭಾಗ ಪುನರ್ವಸು ಹಾಗೂ ಕುಂಭದ್ರೋಣ ಮಳೆಯಿಂದ ಕಂಗಾಲಾಗಿದೆ.
ಮಲೆನಾಡಲ್ಲಿ ರಾತ್ರಿ ವೇಳೆಯಲ್ಲೇ ಹೆಚ್ಚು ಮಳೆಯಾಗುತ್ತಿದ್ದು, ಹಗಲಲ್ಲಿ ಬಿಟ್ಟು-ಬಿಟ್ಟು ಮಳೆ ಸುರಿಯುತ್ತಿದೆ. ತುಂಗಾ-ಭದ್ರಾ-ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡಿನಾದ್ಯಂತ ಅಲ್ಲಲ್ಲೇ ರಸ್ತೆ, ಸೇತುವೆ, ಹಳ್ಳ-ಕೊಳ್ಳ-ಹೊಲಗದ್ದೆಗಳು ಜಲಾವೃತಗೊಂಡಿವೆ.
ಕಳಸಾದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗುವ ಭೀತಿ ಎದುರಾಗಿದ್ದು, ಮತ್ತೆ ಮುಳುಗಿದರೆ, ಕಳೆದೊಂದು ತಿಂಗಳಲ್ಲಿ ಐದನೇ ಬಾರಿ ಮುಳುಗಿದಂತಾಗಲಿದೆ.