ಸಿನೆಮಾ ಇಲ್ಲ, ಟಿವಿ ಸಿರಿಯಲ್ ಚಿತ್ರೀಕರಣ ಮಾಡಬಹುದು ಎಂದ ಸರ್ಕಾರ
ಬೆಂಗಳೂರು, ಮೇ 05: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ನಿಂತಿರುವ ಟಿವಿ ದಾರಾವಾಹಿಗಳ ಶೂಟಿಂಗ್ ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸಾವಿರಾರು ಕಾರ್ಮಿಕರು ಟಿವಿ ಸಿರಿಯಲ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮಾಡಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದ್ದು, ಟಿವಿ ಸಿರಿಯಲ್ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಅನುಮತಿ ಕೊಡಲಾಗಿದೆ. ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಮೇಲೆ ಅವಲಂಬಿತರಾಗಿದ್ದಾರೆ.
ಸೀರಿಯಲ್ ಶೂಟಿಂಗ್ ಮನೆ ಒಳಗೆ ಮಾತ್ರ ನಡೆಯುತ್ತವೆ. ಕೊರೋನಾ ಸಂಬಂಧ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಬಹುದು. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಹಾಗೆಯೆ ಚಲನ ಚಿತ್ರಗಳ ಶೂಟಿಂಗ್ಗೂ ಅವಕಾಶವಿಲ್ಲ. ರಿಯಾಲಿಟಿ ಶೋಗಳ ಶೂಟಿಂಗ್ಗೂ ಅವಕಾಶವಿಲ್ಲ. ಮನೆ ಒಳಭಾಗದಲ್ಲಿ ನಡೆಸಲಾಗುವ ಸೀರಿಯಲ್ ಶೂಟಿಂಗ್ಗೆ ಮಾತ್ರ ಅನುಮತಿ ಕೊಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.