ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಖತಂ ಆಗುತ್ತೆ: ಭವಿಷ್ಯ ನುಡಿದ ಸಂಸದ
ಕೋಲಾರ, ಡಿಸೆಂಬರ್ 01: ರಾಜ್ಯದಲ್ಲಿ ಅಭಿವೃದ್ಧಿಗೆ ಹಣವಿಲ್ಲದೇ ತನ್ನ ಶಾಸಕರಿಂದಲೇ ತೀವ್ರ ವಿರೋಧ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಯುಷ್ಯ ಇರುವುದು ಇನ್ನು ಬರೀ ಮೂರು ತಿಂಗಳು ಅಷ್ಟೆ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಈಗಾಗಲೇ ಒಬ್ಬೊಬ್ಬರೇ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. 40ಕ್ಕೂ ಹೆಚ್ಚು ಶಾಸಕರು ಸಿಎಂ ಮತ್ತು ಡಿಸಿಎಂ ವಿರುದ್ದ ಹೈಕಮಾಂಡ್ಗೆ ದೂರು ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದ್ದು, ಶೇ.60 ಕಮಿಷನ್ ಸರ್ಕಾರವಾಗಿದೆ ಎಂದು ಲೇವಡಿ ಮಾಡಿದರು.

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ನೂರಾರು ಕೋಟಿ ಗುಳುಂ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಇಂತಹ ಆರೋಪಗಳು ಪ್ರತಿ ಸಚಿವರ ವಿರುದ್ದವೂ ಕೇಳಿ ಬರುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪಡಿತರದಾರರಿಗೆ 10 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಹೀಗಾಗಿ ಕೇಂದ್ರ ಕೊಡುತ್ತಿರುವ ಅಕ್ಕಿ ಎಷ್ಟು, ರಾಜ್ಯ ಕೊಡುತ್ತಿರುವ ಅಕ್ಕಿ ಎಷ್ಟು ಎಂದು ಇನ್ನು ಮುಂದೆ ಪಡಿತರ ಕೇಂದ್ರಗಳಲ್ಲಿ ಬಿಲ್ ಮೂಲಕ ನೀಡಲಾಗುತ್ತಿದೆ ಎಂದರು. ಇನ್ಮುಂದೆ ಕಾಂಗ್ರೆಸ್ ನವರ ಆಟ ನಡೆಯೋದಿಲ್ಲ. ಮೂರೇ ತಿಂಗಳಲ್ಲಿ ಖತಂ ಆಗುತ್ತದೆ, ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಿಗೆ 28 ಸ್ಥಾನಗಳನ್ನ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸಂಸದ ಮುನಿಸ್ವಾಮಿ ಯಾರು ಎಂದು ಪ್ರಶ್ನಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಕಿಡಿಕಾರಿದ ಸಂಸದರು, ನಾನು ಯಾರೆಂದು ಅವರಿಗೆ ಗೊತ್ತಾಗುವ ಅಗತ್ಯವಿಲ್ಲ. ನನಗೆ ಮತ ನೀಡಿದ ಕ್ಷೇತ್ರದ ಮತದಾರರಿಗೆ ಗೊತ್ತಿದ್ದರೆ ಸಾಕು ಎಂದರು. ಹಳೆಕಾಲದವರು ಎಂದು ಟೀಕಿಸಿರುವ ಕುರಿತು ವ್ಯಂಗ್ಯವಾಡಿದ ಸಂಸದರು, ನಾನು ಭಾರತದ ಸಂಸ್ಕೃತಿ, ಹಿಂದು ಧರ್ಮದವನು. ಕಾಂಗ್ರೆಸ್ಸಿಗರಂತೆ ಇಟಲಿ ಸಂಸ್ಕೃತಿ ನನ್ನದಲ್ಲ ಪ್ರಿಯಾಂಕ ವಾದ್ರ ಸಂಸ್ಕೃತಿಯೂ ಅಲ್ಲ ಎಂದರು. ಹಾಗೇ ಡಿಕೆಶಿ ಪ್ರಕರಣವನ್ನು ಸಿಬಿಐನಿಂದ ಇವರು ವಾಪಸ್ಸು ಪಡೆಯಲು ಇವರೇನು ಕಾನೂನಿನ ಮುಂದೆ ಸುಪ್ರೀಂ ಅಲ್ಲ, ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಅವರು ತನಿಖೆ ನಡೆಸೇ ನಡೆಸುತ್ತಾರೆ ಎಂದರು.












Click it and Unblock the Notifications