ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ- ಬಿ.ವೈ ವಿಜಯೇಂದ್ರ
ಹುಬ್ಬಳ್ಳಿ, ನವೆಂಬರ್ 21: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪೇಚಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಅಸಮರ್ಥ ಮುಖ್ಯಮಂತ್ರಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರ ಬಂದ ದಿನದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. 15 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರ ಈಗಿನ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಯಾವ ಮಾನದಂಡದ ಆಧಾರದಲ್ಲಿ ಬಿಪಿಎಲ್ ರದ್ದು..?
ಒಂದೆಡೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಹುನ್ನಾರ ಸಿಎಂ ಮಾಡಿದ್ದಾರೆ. ಸುಮಾರು 25 ಲಕ್ಷ ಕಾರ್ಡ್ ರದ್ದುಪಡಿಸುವ ಉದ್ದೇಶ ಅವರಿಗಿದೆ. ಇದರಿಂದ ಗ್ಯಾರಂಟಿ ಯೋಜನೆ ಮೇಲಿನ ಹೊರೆ ಕಡಿಮೆ ಮಾಡಿ, ಹಣ ಉಳಿಸುವ ಸಂಚು ಮಾಡಿದ್ದಾರೆ.
ಆದರೆ, ನೋಡಿದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ 92.5ರಷ್ಟು ಸಹಾಯವನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ. ಉಳಿದ ಶೇ.7.5 ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ. ಹೀಗಿದ್ದರೂ ಬಡವರ ಬಿಪಿಎಲ್ ರದ್ದು ಮಾಡಿ ಅವರನ್ನು ಬೀದಿಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಮಾನದಂಡದ ಆಧಾರದಲ್ಲಿ ಬಿಪಿಎಲ್ ರದ್ದು ಮಾಡುತ್ತೀರಿ? ಬೀದಿ ಬದಿ ವ್ಯಾಪಾರಿ ಕೂಡ ಇಂದು ಪ್ಯಾನ್ ಕಾರ್ಡ್ ಹೊಂದಿರುತ್ತಾನೆ. ಅಧಿಕಾರಿಗಳು ಕಂಪ್ಯೂಟರ್ ಮುಂದೆ ಕುಳಿತು ಕಾರ್ಡ್ ರದ್ದತಿಗೆ ಮುಂದಾಗಬಾರದು. ಫೀಲ್ಡಿಗಿಳಿದು ಸರ್ವೆ ಮಾರಿ ನಂತರ ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಅವಧಿಯಲ್ಲೂ ಅನೇಕರ ಬಿಪಿಎಲ್ ಕಾರ್ಡ್ ರದ್ದಾಗಿವೆ. ಆದರೆ ಯಾರೂ ಆಕ್ಷೇಪಣೆ ಮಾಡದ ರೀತಿಯಲ್ಲಿ ಅಳೆದು ತೂಗಿ ಕ್ರಮ ಕೈಗೊಳ್ಳಲಾಗಿತ್ತು. ಹೀಹಾಗಿಯೇ ಆಕ್ಷೇಪಣೆಗಳು ಬಂದಿರಲಿಲ್ಲ ವಿವರಿಸಿದರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ರದ್ದು ವಿವಾದ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ರದ್ದು ವಿಚಾರ ಭಾರೀ ಸದ್ದು ಮಾಡುತ್ತಿದೆ. ಲಕ್ಷಾಂತರ ಜನರ ಬಿಪಿಲ್ ಕಾರ್ಡ್ಗಳನ್ನು ಎಪಿಎಲ್ಗೆ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಬಡಜನರು ಕಂಗಾಲಾಗಿದ್ದಾರೆ. ಹೀಗಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.
ಬಡವರಿಗಾಗಿ ಮೀಸಲಿರುವ ಯೋಜನೆಯ ಲಾಭ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಕಾರ್ಡ್ಗಳ ರದ್ದಿಗೆ ಸರ್ಕಾರ ಮುಂದಾಗಿದ್ದರೂ ಕೂಡ ಅನೇಕ ಬಡವರು ಕಾರ್ಡ್ಗಳನ್ನು ಕಳೆದುಕೊಂಡು ಕಳೆದ ಒಂದು ತಿಂಗಳಿನಿಂದ ಯಾವುದೇ ಸವಲತ್ತು ಸರಿಯಾಗಿ ಸಿಗದೇ ಕಂಗಾಲಾಗಿದ್ದಾರೆ.












Click it and Unblock the Notifications