ಕೊರೊನಾದಿಂದ ಶಿಕ್ಷಕರ ಸಾವು; ಸರ್ಕಾರಕ್ಕೆ ಹೈಕೋರ್ಟ್ನಿಂದ ನೋಟಿಸ್
ಬೆಂಗಳೂರು, ಮೇ. 20: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಗೆ ನಿಯೋಜನೆಗೊಂಡು ಕೊರೊನಾಗೆ ಸಾವನ್ನಪ್ಪಿದ ಶಿಕ್ಷಕರಿಗೆ ಪರಿಹಾರ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 55 ಶಿಕ್ಷಕರು ಕೊರೊನಾ ಸೊಂಕಿಗೆ ಬಲಿಯಾಗಿದ್ದರು. ಅನೇಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡು ಕೊರೊನಾ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ ನ್ಯಾಯ ಕೊಡಿ ಎಂದು ಬೀದರ್ ಮೂಲದ ಅಂಬರೀಶ್ ಕೆಂಚ ಎಂಬಾತ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನಾಗಪ್ರಸನ್ನ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ. ಉಪ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡು ಕೊರೊನಾ ಸೋಂಕಿಗೆ ಬಲಿಯಾಗಿರುವ ಶಿಕ್ಷಕರಿಗೆ ತಲಾ 1 ಕೋಟಿ ರೂ. ಪರಿಹಾರ ಕೋರಿ ಮನವಿ ಮಾಡಲಾಗಿದೆ.
Recommended Video
ನಿನ್ನೆಯಷ್ಟೆ ಸರ್ಕಾರದ ವಿರುದ್ಧ ಕಿಡಿ: ರಾಜ್ಯದ ರೈತರಿಗೆ, ಬೀದಿ ವ್ಯಾಪಾರಿಗಳಿಗೆ ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರಲಿಲ್ಲ. ಚುನಾವಣೆ ಕರ್ತವ್ಯ, ಸಮೀಕ್ಷೆ, ಜನಗಣತಿ ಕಾರ್ಯಗಳಿಗೆ ನಿಯೋಜನೆ ಮಾಡುವ ಸರ್ಕಾರ ಶಿಕ್ಷಕರಿಗೆ ಕೋವಿಡ್ ಕಾಲದಲ್ಲಿ ಮೋಸ ಮಾಡಿದೆ. ವಿಶೇಷ ಆರ್ಥಿಕ ಪ್ಯಾಕೇಜ್ ಕೊಡದೇ ಅನ್ಯಾಯ ಮಾಡಿದ್ದು, ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟಗಳು ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ಕೊರೊನಾ ಸೋಂಕಿಗೆ ಬಲಿಯಾದ ಶಿಕ್ಷಕರ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿರುವುದು ಗಮನಾರ್ಹ.