ತಮಿಳುನಾಡಿನ 7ನೇ ತರಗತಿ ಪುಸ್ತಕದಲ್ಲೇ ಇದೆ ತಮಿಳು ಕನ್ನಡದ ತಾಯಿ ಅಂತ!
ಕನ್ನಡದ ತಾಯಿ ತಮಿಳು ಅಂತ ಹೇಳಿ ವಿವಾದಕ್ಕೆ ಕಾರಣವಾಗಿದ್ದ ನಟ ಕಮಲ್ ಹಾಸನ್ ಅವರು ಹೇಳಿರುವುದರ ಹಿಂದೆ ತಮಿಳುನಾಡಿನಲ್ಲಿ ದಶಕಗಳಿಂದ ಹೇಳಿಕೊಂಡು ಬರುತ್ತಿರುವ ಸುಳ್ಳೊಂದು ಇದೆ ಅಂತ ಹೇಳಲಾಗುತ್ತಿದೆ. ಅದು ಇದೀಗ ಕನ್ನಡಿಗರ ಕಣ್ಣಿಗೆ ಬಿದ್ದಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಪಠ್ಯ - ಪುಸ್ತಕಗಳಲ್ಲಿಯೇ ತಮಿಳಿನಿಂದ ಕನ್ನಡ ಭಾಷೆ ಬಂದಿದೆ ಎಂದು ಹೇಳಿಕೊಡಲಾಗುತ್ತಿದೆ. ಹೌದು ತಮಿಳು ಭಾಷೆಯಿಂದಲೇ ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬಂದಿವೆ ಎಂದು ಹೇಳಲಾಗಿದೆ. ಇಲ್ಲವೇ ಈ ಭಾಷೆಗಳು ತಮಿಳಿನಿಂದಲೇ ಕವಲೊಡೆದಿವೆ ಎಂದು ತಮಿಳು ಪಠ್ಯದಲ್ಲಿ ಇದೆ ಎನ್ನಲಾಗಿರುವ ಅಂಶವು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತೀಯರಿಗೆ ಹಲವು ದಶಕಗಳಿಂದ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೊಂಡು ಬರಲಾಗಿತ್ತು. ಇದು ಸುಳ್ಳು ಅಂತ ಸಾಬೀತು ಮಾಡುವುದಕ್ಕೆ ದಶಕಗಳೇ ಆಗಿವೆ. ಅಂದಿನಿಂದಲೂ ಭಾರತದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ಸುಳ್ಳನ್ನು ಹೇಳಿಕೊಂಡೇ ಬರಲಾಗುತ್ತಿದೆ. ಅಲ್ಲದೇ ಇದೀಗ ತಮಿಳುನಾಡಿನಲ್ಲಿ ಕನ್ನಡ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿರುವುದು ಬಹಿರಂಗವಾಗಿದೆ.

ಹೌದು ಉತ್ತರ ಭಾರತೀಯರು ದಶಕಗಳಿಂದ ಹಿಂದಿ ರಾಷ್ಟ್ರೀಯ ಭಾಷೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದರು. ಇದೀಗ ತಮಿಳುನಾಡಿನಲ್ಲೂ ಸುಳ್ಳು ಅಥವಾ ತಿರುಚಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲೇ ತಮಿಳು ಭಾಷೆಯಿಂದಲೇ ದಕ್ಷಿಣ ಭಾರತದ ವಿವಿಧ ಭಾಷೆಗಳ ಉದಯವಾಯಿತು ಎನ್ನುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವೈರಲ್ ಆಗುತ್ತಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಕನ್ನಡಿಗ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಅವರು ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲಗು ಹಾಗೂ ಮಲಯಾಳಂಗಳ ತಾಯಿ ತಮಿಳು ಎಂಬ ಸುಳ್ಳು ದ್ರಾವಿಡ ಪ್ರಪಗಾಂಡ ಇದೆ (ಪಾಕಿಸ್ತಾನದ ಪಠ್ಯದಲ್ಲಿ 5,000 ವರ್ಷಗಳ ಇತಿಹಾಸ ಇದ್ದಂತೆ). ಕರ್ನಾಟಕ ರಾಜ್ಯ ಪಠ್ಯದ ಪ್ರತಿ ತರಗತಿಯಲ್ಲೂ ಶಿವಾಜಿಯ ಕಥೆಗಳಿವೆ (ಶಾಖೆಗಳಲ್ಲಿ ಹೇಳಿಕೊಡುವಂತೆ). ಕನ್ನಡಿಗರು ಕನ್ನಡಿಗರಾಗಿರದೆ "ನಾವು ದ್ರಾವಿಡರು," "ನಾವು ಹಿಂದಿ ದೇಶದ ರಕ್ಷಕರು," ಆಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕನ್ನಡಿಗರು ಹೇಳಿದ್ದೇನು ?
ಈ ಸುಳ್ಳಿಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡಿಗರು ಮಾತ್ರವಲ್ಲ ಈ ವಿಚಾರವಾಗಿ ತೆಲುಗು ಭಾಷಿಕರು ಹಾಗೂ ಮಲಯಾಳಿಗಳೂ ಒಂದಾಗಬೇಕು ಅಥವಾ ವಿರೋಧಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನ 7ನೇ ತರಗತಿ ಪಠ್ಯದಲ್ಲಿ ಏನಿದೆ ?
ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲಿ ಒಂದೇ ಭಾಷೆಯನ್ನು ಮಾತನಾಡುವ ಜನರು ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಾರೆ. ಅವರು ವಾಸಿಸುವ ಸ್ಥಳದ ಸ್ಥಳ ಮತ್ತು ನೈಸರ್ಗಿಕ ಅಡೆತಡೆಗಳು ಇತ್ಯಾದಿಗಳಿಂದಾಗಿ ಅವರು ಮಾತನಾಡುವ ಭಾಷೆಯಲ್ಲಿ ಸ್ವಲ್ಪ ಬದಲಾವಣೆಗಳಿವೆ. ಅವುಗಳ ನಡುವಿನ ಸಂಪರ್ಕ ಕಡಿಮೆಯಾದಾಗ ಈ ಬದಲಾವಣೆಗಳು ಹೆಚ್ಚಾಗುತ್ತವೆ. ಅವು ಹೊಸ ಭಾಷೆಯಾಗಿ ವಿಭಜನೆಯಾಗುತ್ತವೆ. ಈ ರೀತಿಯಲ್ಲಿ ರೂಪುಗೊಂಡ ಹೊಸ ಭಾಷೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಕನ್ನಡ, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳು ತಮಿಳಿನಿಂದ ಬೇರ್ಪಟ್ಟ ಉಪಭಾಷೆಗಳಾಗಿವೆ ಎಂದು ಮುದ್ರಿಸಲಾಗಿದೆ.












Click it and Unblock the Notifications