ಸಿದ್ದರಾಮಯ್ಯನವರ 3 ವರ್ಷದ ರಾಜಕೀಯವನ್ನು ಅಕ್ಷರಶಃ ಜಾಲಾಡಿಸಿದ ಕುಮಾರಸ್ವಾಮಿ
ರಾಮನಗರ, ಅ 14: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಇನ್ನೊಂದು ಮಜಲಿಗೆ ಹೋಗಿದೆ. ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪುಟ್ಕೋಸಿಗೆ ಹೋಲಿಸಿದ್ದ ಎಚ್ಡಿಕೆ, ಸಿದ್ದರಾಮಯ್ಯನವರ ಮೂರು ವರ್ಷದ ರಾಜಕೀಯವನ್ನು ಅಕ್ಷರಶಃ ಜಾಲಾಡಿಸಿದ್ದಾರೆ. ಅವರು ಮಾಧ್ಯಮಕ್ಕೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಯಥಾವತ್ ಕಾಪಿ ಹೀಗಿದೆ:
"ಸಿದ್ದರಾಮಯ್ಯನವರೇ ಇಷ್ಟು ದಿನ ನನ್ನ ಬಗ್ಗೆ ಮತ್ತು ನನ್ನ ಪಕ್ಷದ ಬಗ್ಗೆ ಮಾತನಾಡಿದ್ದು ಸಾಕು. ಎಲ್ಲವನ್ನೂ ಇಲ್ಲಿಗೆ ನಿಲ್ಲಿಸಿ. ನೀವು ನಿಲ್ಲಿಸದಿದ್ದರೆ ನಾನೂ ಮಾತನಾಡುವುದನ್ನು ಮುಂದುವರಿಸಬೇಕಾಗುತ್ತದೆ. ಸಿದ್ದರಾಮಯ್ಯ ವಿಶ್ವಾಸಕ್ಕೆ ಅರ್ಹವಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಸರಣಿ ಹೇಳಿಕೆಗಳನ್ನು ನೀಡುತ್ತಿರುವುದು ಒಂದೆಡೆ ಆಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಕುತಂತ್ರದಿಂದ ಅವರೇ ಮತ್ತಷ್ಟು ಮುಳುಗಿಸುತ್ತಿದ್ದಾರೆ".
"ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಲು ನೇರ ಕಾರಣ ಸಿದ್ದರಾಮಯ್ಯ ಅವರೇ. ಅವರೇ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು. ಸಮ್ಮಿಶ್ರ ಸರಕಾರ ಬಂದ ಒಂದೇ ತಿಂಗಳಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ (ಸಿದ್ದವನ) ಕೂತುಕೊಂಡು ಸಿದ್ದ ಸೂತ್ರ ರೂಪಿಸಿದ್ದು ಯಾರು? ತಮ್ಮ ಬೆಂಬಲಿಗರನ್ನು ಅಲ್ಲಿಗೆ ಕರೆಸಿಕೊಂಡು ಇನ್ನೊಂದು ವರ್ಷ ಈ ಸರಕಾರ ಇರುತ್ತೆ, ಆಮೇಲೆ ನೋಡೋಣ ಅಂದಿದ್ದು ಯಾರು? ಒಂದು ವಿಡಿಯೋ ವೈರಲ್ ಆಗಿತ್ತಲ್ಲ ಸಿದ್ದರಾಮಯ್ಯನವರೇ".
"ನನ್ನ ಸರಕಾರವನ್ನು ತೆಗೆಯಲು ಸಿದ್ಧಸೂತ್ರ ಸಿದ್ಧಪಡಿಸಿದ್ದೇ ನೀವು. ಸರಕಾರ ಇನ್ನೂ ಟೇಕಾಫ್ ಆಗುವ ಮುನ್ನವೇ ಅದನ್ನು ಉರುಳಿಸಲು ಪ್ಲಾನ್ ಮಾಡಿದ ನೀವು ಈಗ ನನ್ನ ಬಗ್ಗೆ ಹೇಳಿಕೆ ನೀಡುತ್ತಿದ್ದೀರಿ. ಇದಕ್ಕಿಂತ ದೊಡ್ಡ ವಿಕೃತಿ ಇನ್ನೇನಿದೆ?. ನಿಮ್ಮ ಶಾಸಕರ ವಿಚಾರದಲ್ಲಿ ನಾನು ಯಾವ ರೀತಿ ನಡೆದುಕೊಂಡೆ ಎಂಬುದು ನನಗೆ ಮಾತ್ರ ಗೊತ್ತು. ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ ನನಗೆ ನೀವು ಅಧಿಕೃತ ನಿವಾಸ ಬಿಟ್ಟುಕೊಡಲಿಲ್ಲ".

ವೆಸ್ಟ್ ಎಂಡ್ ಹೋಟೆಲ್ ಗೆ ಮಧ್ಯಾಹ್ನದ ಊಟಕ್ಕೆ ಹೋಗಬೇಕಾಯಿತು
"ಜೆ ಪಿ ನಗರದಿಂದ ದಿನವೂ ನಾನು ಓಡಾಡುವುದು ತೊಂದರೆ ಆಗುತ್ತಿತ್ತು. ಆ ಕಾರಣಕ್ಕೆ ನಾನು ವೆಸ್ಟ್ ಎಂಡ್ ಹೋಟೆಲ್ ಗೆ ಮಧ್ಯಾಹ್ನದ ಊಟಕ್ಕೆ ಹೋಗಬೇಕಾಯಿತು. ಅಲ್ಲಿ ನಾನು ಮೋಜು ಮಾಸ್ತಿ ಮಾಡಲು ಹೋಗಲಿಲ್ಲ. ಉಳಿಯಲೂ ಇಲ್ಲ. ಬೆಳಗ್ಗೆ 9 ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 12 ಗಂಟೆವರೆಗೂ ಕೃಷ್ಣ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೆ. ಎಲ್ಲದಕ್ಕೂ ದಾಖಲೆ ಇರುತ್ತದೆ, ಪರಿಶೀಲನೆ ಮಾಡಿಕೊಳ್ಳಿ ಸಿದ್ದರಾಮಯ್ಯನವರೇ"- ಎಚ್.ಡಿ.ಕುಮಾರಸ್ವಾಮಿ.

ಅಮೆರಿಕದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ
"ನೀವೆಲ್ಲಾ ಸೇರಿ ಸರಕಾರವನ್ನು ಕೆಡವಲು ಸ್ಕೆಚ್ ಹಾಕಿದಾಗ ನಾನು ಅಮೆರಿಕದಲ್ಲಿ ಇದ್ದೆ, ನಿಜ. ಅಂದು ಆದಿಚುಂಚನಗಿರಿ ಶ್ರೀಗಳು ಅಮೆರಿಕದಲ್ಲಿ ಶ್ರೀಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಸ್ವಾಮೀಜಿ ಅವರು ಕರೆದ ಕಾರಣ ನಾನು ಅಮೆರಿಕಕ್ಕೆ ಹೋಗಬೇಕಾಯಿತು.
ಆಗ ನಾನು ಅಮೆರಿಕದಲ್ಲಿ ಇದ್ದ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ, ಬೇಗ ವಾಪಸ್ ಬನ್ನಿ ಕುಮಾರಸ್ವಾಮಿ. ಇಲ್ಲಿ ಆಪರೇಷನ್ ಕಮಲ ನಡೀತಿದೆ ಎಂದು ಕರೆ ಮಾಡಿದ್ದೆ ಎಂದು ಹೇಳಿದ್ದೀರಿ. ಯಾರಿಗೆ ಕರೆ ಮಾಡಿದ್ದೀರಿ? ಯಾವ ನಂಬರ್ ಗೆ ಕರೆ ಮಾಡಿದ್ದೀರಿ? ಸ್ವಲ್ಪ ಆ ನಂಬರ್ ಇದ್ದರೆ ಕೊಡುತ್ತೀರಾ?" - ಎಚ್.ಡಿ.ಕುಮಾರಸ್ವಾಮಿ.

ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಮಾಹಿತಿ ನಂಗೆ ಇರಲ್ಲ ಎನ್ನುವ ಹುಂಬತನವೇ
"ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ. ಇಂತ ಹಸಿಸುಳ್ಳು ಯಾಕೆ ಹೇಳುತ್ತೀರಿ? ನಿಮ್ಮ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ದವರು ಮಾತ್ರ ಕರೆ ಮಾಡಿ, ಇಲ್ಲಿ ಅಂತದ್ದೇನು ಆಗುತ್ತಿಲ್ಲ ಕುಮಾರಸ್ವಾಮಿ ಅವರೇ. ನೀವು ಆರಾಮವಾಗಿ ಬನ್ನಿ ಎಂದು ಹೇಳಿದ್ದರು. ಆದರೆ, ನಿಮ್ಮ ಕ್ಯಾಂಪಿನಲ್ಲಿ ಬೇರೆಯದ್ದೇ ನಡೆಯುತ್ತಿತ್ತು. ಅಷ್ಟೂ ಮಾಹಿತಿ ನಂಗೆ ಇರಲ್ಲ ಎನ್ನುವಷ್ಟು ಹುಂಬತನವೇ ನಿಮಗೆ? ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ? ಯಾವಾಗ ಅಧಿಕೃತ ನಿವಾಸ ಸಿಗದೇ ಇದ್ದಾಗಲೇ ಇವರು ನನ್ನ ಸರಕಾರ ತೆಗೀತಾರೆ ಎನ್ನುವ ಅನುಮಾನ ನನಗಿತ್ತು. ಅದಕ್ಕೆ ನಾನು ಸರಕಾರದ ಕಾರನ್ನು ಕೂಡ ಬಳಕೆ ಮಾಡಿಕೊಳ್ಳಲಿಲ್ಲ. ಕೊನೆಪಕ್ಷ ಭತ್ಯೆಗಳನ್ನು ಕೂಡ ಪಡೆಯಲಿಲ್ಲ" - ಎಚ್.ಡಿ.ಕುಮಾರಸ್ವಾಮಿ.

ಎಂಟಿಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ
"ನಿಮ್ಮ ಶಾಸಕರು ನನ್ನ ಬಳಿ ಬಂದು ಪತ್ರಗಳನ್ನು ಹೇಗೆ ಕೊಡುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಒಬ್ಬ ಮುಖ್ಯಮಂತ್ರಿ ಮುಂದೆ ಮನವಿ ಪತ್ರಗಳನ್ನು ಬಿಸಾಡುತ್ತಿದ್ದರು. ಅದಕ್ಕೆಲ್ಲಾ ಕುಮ್ಮಕು ನೀಡಿದ್ದು ಯಾರು?
ಎಂ.ಟಿ.ಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು. ಅಂತ ವ್ಯಕ್ತಿ ಬಿಜೆಪಿಗೆ ಹೋಗಿದ್ದು ಹೇಗೆ? ನಿಮಗೆ ಏನೂ ಗೊತ್ತಿಲ್ಲವೆ ಸಿದ್ದರಾಮಯ್ಯ? ನಮ್ಮ ಪಕ್ಷದ ಶಾಸಕರು 3 ಜನ ಪಕ್ಷ ಬಿಟ್ಟು ಹೋದರು ನಿಜ. ಅದಕ್ಕೆ ಮೂಲ ಕಾರಣರು, ಅದಕ್ಕೆ ಸಿದ್ಧಸೂತ್ರಗಳನ್ನು ರೂಪಿಸಿದವರು ಯಾರು ಎನ್ನುವುದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು" - ಎಚ್.ಡಿ.ಕುಮಾರಸ್ವಾಮಿ.

ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು
"ನಮ್ಮ ಪಕ್ಷದ ಕೋಟದಲ್ಲೇ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದಾಗ ನೀವು ಮಾಡಿದ್ದೇನು ಎನ್ನುವುದು ನನಗೆ ಗೊತ್ತಿದೆ. ಅವರಿಬ್ಬರಿಗೆ ಅಡ್ಡಿ ಮಾಡಿದವರು ಯಾರು? ಧರಮ್ ಸಿಂಗ್ ಅವರ ಸರಕಾರ ಬೀಳಲು ಕಾರಣ ಯಾರು? ಆ ಸರಕಾರದಲ್ಲಿ ಡಿಸಿಎಂ ಆಗಿದ್ದುಕೊಂಡು ರಾಜಕೀಯ ಬದುಕು ಕೊಟ್ಟ ಮಾತೃಪಕ್ಷಕ್ಕೆ ಹಳ್ಳ ಅಗೆಯುವುದು ಎಷ್ಟು ಸರಿ. ಆಗ ನನಗೆ ಪಕ್ಷ ಉಳಿಸುವುದು ಮುಖ್ಯವಾಗಿತ್ತು. ನಿಮ್ಮ ನಡವಳಿಕೆಯಿಂದಲೆ ಆ ಸರ್ಕಾರ ಹೋಯಿತು ಸಿದ್ದರಾಮಯ್ಯನವರೇ" - ಎಚ್.ಡಿ.ಕುಮಾರಸ್ವಾಮಿ.

ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ
"ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೀನಿ. ನಿಮ್ಮ ಪಕ್ಷ ಮುಗಿಸೋಕೆ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡ್ತಾ ಇದ್ದಾರೆ. ಬಿಎಸ್ವೈ ಸಿಎಂ ಆಗಿದ್ದಾಗ ನಾನು ಒಂದೇ ಬಾರಿ ಭೇಟಿ ಮಾಡಿದ್ದು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ ಸಿದ್ದರಾಮಯ್ಯ. ಎಲ್ಲಾ ವಿಚಾರವೂ ಗೊತ್ತಿದೆ. ಇದು ನಾನು ಹೇಳ್ತಿಲ್ಲ. ನಿಮ್ಮ ಪಕ್ಕದಲ್ಲಿ ಇದ್ದವ್ರೆ ಹೇಳಿರುವ ಮಾತು.
ಕಾಂಗ್ರೆಸ್ ನೆರಳಲ್ಲಿ ಇದ್ದೀರಾ, ಸರಿಯಾಗಿ ಪಕ್ಷ ಕಟ್ಟಿ. ಇದೀಗ, ಡಿಕೆ ಶಿವಕುಮಾರ್ ಪಕ್ಷ ಕಟ್ಟೋಕೆ ಹೋಗಿದ್ದಾರೆ. ನಿನ್ನೆ ಒಂದು ವಿಡಿಯೋ ಬಂದಿದೆ. ವಿಡಿಯೋ ನೀವೇ ಬಿಟ್ರಾ ಅಥವಾ ಅವರೇ ಹೇಳಿದ್ರಾ ಗೊತ್ತಿಲ್ಲ. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀರಾ ನೀವು? ಈವಾಗ ಹೇಳಿರೋರು ಯಾರು? ನಿಮ್ಮ ಪಟಾಲಂಗಳೇ ಅಲ್ಲವೇ? - ಎಚ್.ಡಿ.ಕುಮಾರಸ್ವಾಮಿ.












Click it and Unblock the Notifications