ಮಠಕ್ಕೆ ಎರಡು ಕೋಟಿ ಕೊಡ್ರೀ.. ಏನ್ರೀ ನೀವು ಸಿಎಂಗೆ ಸ್ವಾಮೀಜಿ ಆವಾಜ್!
ಮಠಕ್ಕೆ ಎರಡು ಕೋಟಿ ಅನುದಾನ ನೀಡಿ, ಇಲ್ಲಾಂದ್ರೆ ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೀನಿ, ಹಡಪ ಮಠದ ಸ್ವಾಮೀಜಿಯವರ ಬೇಡಿಕೆ.
ಬೆಂಗಳೂರು, ಮಾ 10: ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ನನ್ನ ಮಠಕ್ಕೆ ಎರಡು ಕೋಟಿ ನೀಡ್ರೀ ಎಂದು ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಗಳಿಗೆ ಆವಾಜ್ ಹಾಕುವ ಮೂಲಕ ಬೇಡಿಕೆ ಇಟ್ಟಿದ್ದಾರೆ.
ಶುಕ್ರವಾರ (ಮಾ 10) ಶಕ್ತಿಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ, ಹಡಪ ಅಪ್ಪಣ್ಣ ಮಠದ ಅನ್ನದಾನ ಭಾರತಿ ಸ್ವಾಮೀಜಿಯವರು ಮಠಕ್ಕೆ ಅನುದಾನ ನೀಡುವಂತೆ ಖಡಕ್ಕಾಗಿ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ನಮ್ಮ ತಂಗಡಿಗೆಯ ಶಾಖಾ ಮಠಕ್ಕೆ ಎರಡು ಕೋಟಿ ಅನುದಾನ ನೀಡಿ.. ಇಲ್ಲಾಂದ್ರೆ ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೀನಿ, ಹುಷಾರ್ ಎಂದು ಅನ್ನದಾನ ಸ್ವಾಮೀಜಿ ಸಿಎಂಗೆ ಬೆದರಿಕೆಯೊಡ್ಡಿದ್ದಾರೆ.

ಸ್ವಾಮೀಜಿಯವರ ಖಡಕ್ ಬೇಡಿಕೆಗೆ ಒಂದು ಕ್ಷಣ ವಿಚಲಿತರಾದ ಸಿದ್ದರಾಮಯ್ಯ, ನೀವು ಹೇಳಿದಂಗೆ ಕೊಡೊಕ್ಕೆ ಬರೋಲ್ಲ. ಪ್ರತಿಭಟನೆ ಮಾಡ್ತೀನಿ ಎನ್ನುವ ನಿಮ್ಮ ಧಮ್ಕಿಗೆ ನಾನು ಕ್ಯಾರ್ ಮಾಡಲ್ಲ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಆದರೂ ಪಟ್ಟ ಬಿಡದ ಸ್ವಾಮೀಜಿ, ಏನ್ರೀ ನೀವು.. ಹೋದ್ಸಲ ಕೊಡ್ತೀನಿ ಅಂದ್ರಿ, ಕೊಟ್ಟಿಲ್ಲಾ.. ಈ ಸಲ ಆದರೂ ಬಜೆಟ್ ನಲ್ಲಿ ಕೊಡಿ ಎಂದು ಮರು ಬೇಡಿಕೆ ಇಟ್ಟರು. ಆಗ ಸಿಎಂ ಇವರನ್ನು ಒಳಗೆ ಬಿಡ್ರೀ ಎಂದು ಭದ್ರತಾ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಂದ ಅನ್ನದಾನ ಸ್ವಾಮೀಜಿ, ಮಠಕ್ಕೆಅನುದಾನದ ರೂಪದಲ್ಲಿ ಎರಡು ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಅವರ ಮಾತಿನ ಮೇಲೆ ನಂಬಿಕೆಯಿಟ್ಟು ಹೋಗುತ್ತಿದ್ದೇನೆಂದು ಮಾಧ್ಯಮದವರ ಮುಂದೆ ಅನ್ನದಾನ ಸ್ವಾಮೀಜಿ ಹೇಳಿದ್ದಾರೆ. (ಚಿತ್ರ: ಪಬ್ಲಿಕ್ ಟಿವಿ)












Click it and Unblock the Notifications