ಜಾತ್ಯಾತೀತ ಸರಕಾರಕ್ಕಾಗಿ ಕಹಿ ಗುಳಿಗೆ ನುಂಗಿದ್ದೇನೆ: ಡಿಕೆ ಶಿವಕುಮಾರ್
ಬೆಂಗಳೂರು, ಮೇ 21: ಕರ್ನಾಟಕದಲ್ಲಿ ಜಾತ್ಯಾತೀತ ಸರಕಾರ ರಚನೆಯಾಗಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ನಡುವಿನ ಭಿನ್ನಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲೇಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎಎನ್ಐ ಜೊತೆಗೆ ಮಾತನಾಡಿರುವ ಅವರು, "ರಾಜಕೀಯದಲ್ಲಿ 1985ರಿಂದ ಗೌಡರ ವಿರುದ್ಧ ನಾನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಕಳೆದ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾನು ಅವರ ಮಗ ಮತ್ತು ಸೊಸೆ ವಿರುದ್ಧ ಗೆದ್ದಿದ್ದೆ. ಹಲವು ರಾಜಕೀಯ ಆಟಗಳು ನಡೆದಿವೆ. ಹಲವು ಪ್ರಕರಣಗಳೂ ದಾಖಲಾಗಿವೆ. ಆದರೆ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ನಮಗೆ ಜಾತ್ಯಾತೀತ ಸರಕಾರ ಬೇಕಾಗಿದೆ," ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಡಿ.ಕೆ.ಶಿವಕುಮಾರ್ಗೆ ಯಾವ ಹುದ್ದೆ?
"ಇಲ್ಲಿ ಜಾತ್ಯಾತೀತ ಸರಕಾರ ಇರಬೇಕು ಎಂದು ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಂಡರು. ಇಡೀ ದೇಶಕ್ಕೆ ಇದು ಬೇಕಾಗಿದೆ, ಅದಕ್ಕೆ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಇದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಎಲ್ಲಾ ಕಹಿಯನ್ನೂ ನುಂಗಿಕೊಂಡಿದ್ದೇನೆ," ಎಂದು ಅವರು ತಿಳಿಸಿದರು.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಖುಷಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಕೆಲವೊಮ್ಮೆ ವ್ಯಕ್ತಿಗಳು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ವ್ಯಕ್ತಿಗಳು ಮುಖ್ಯವಲ್ಲ. ಯಾವುದೇ ನಿರ್ಧಾರಗಳನ್ನು ಒಗ್ಗಟ್ಟಾಗಿ ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಾಗ, ಅದನ್ನು ಒಬ್ಬರು ಇಷ್ಟಪಡಬಹುದು, ಇನ್ನೊಬ್ಬರು ಇಷ್ಟಪಡದೇ ಇರಬಹುದು. ನಾನು ಸಹ ಈ ಸರಕಾರದ ರಚನೆಗೆ ಒಪ್ಪಿಗೆ ನೀಡಿದ್ದೇನೆ," ಎಂದರು.
ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!
ಸಂಪುಟ ರಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ನಾವು ಸೋನಿಯಾ ಮತ್ತು ರಾಹುಲ್ ಗಾಂದಿಯವರ ಜೊತೆ ಈ ಬಗ್ಗೆ ಚರ್ಚಿಸುವುದಿಲ್ಲ. ಅವರ ತಂದೆ (ರಾಜೀವ್ ಗಾಂಧಿ) ಗೆ ಗೌರವ ಸಲ್ಲಿಸಲು ನಾವು ದೆಹಲಿಗೆ ಹೋಗುತ್ತಿದ್ದೇವೆ. ಅಧಿಕಾರ ಹಂಚಿಕೆ ಸಂಬಂಧ ಎಐಸಿಸಿಯೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ," ಎಂದು ಮಾಹಿತಿ ನೀಡಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಹಾಮೈತ್ರಿ ನಡೆಸುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಜಾತ್ಯಾತೀತ ಪಕ್ಷಗಳ ಮಹಾಮೈತ್ರಗೆ ಇದು ಆರಂಭ ಎಂದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 5 ವರ್ಷ ಪೂರ್ಣಗೊಳಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು, "ಸಮಯವೇ ಇದಕ್ಕೆ ಉತ್ತರ ನೀಡುತ್ತದೆ. ನಾನು ಇದಕ್ಕೆ ಈಗ ಉತ್ತರಿಸಲು ಇಚ್ಚಿಸುವುದಿಲ್ಲ. ನಮ್ಮ ನಡುವೆ ಹಲವು ವಿಷಯಗಳಿವೆ, ಮುಂದೆ ಹಲವು ಆಯ್ಕೆಗಳಿವೆ, ಅದನ್ನೆಲ್ಲಾ ಈಗ ಹೇಳುವುದಿಲ್ಲ," ಎಂದಿದ್ದಾರೆ.