ಕರ್ತವ್ಯ ಲೋಪ; ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಆರ್ಡಿಪಿಆರ್ ಇಲಾಖೆ ಅಧಿಕಾರಿಗಳು ಅಮಾನತು
ಬೆಂಗಳೂರು, ಜೂನ್ 09: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದ್ದು, ಕೆಲವೆಡೆ ಅಮಾನತು ಶಿಕ್ಷೆಯೂ ನೀಡಲಾಗುತ್ತಿದೆ.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳನ್ನ ಅಮಾನತು ಮಾಡಿದ್ದು, ಇದೀಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಕಾರ್ಯನಿರ್ವಾಹಕ ಇಂಜಿನಿಯರ್ ಗಳ ಅಮಾನತು ಮಾಡಲಾಗಿದೆ.

ಇನ್ನೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗುವಂತೆ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದು, ತುಮಕೂರಿನ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ವಿಳಂಬ ಧೋರಣೆ ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷತೆಯಿಂದ ಸುಮಾರು ₹2.76 ಕೋಟಿ ರೂ. ನಷ್ಟಕ್ಕೆ ನೇರಾ ಕಾರಣವಾಗಿದ್ದ ಕಾರ್ಯಪಾಲಕ ಇಂಜಿನಿಯರ್ ಎಸ್.ಆರ್ ಹರೀಶ್ ಸೇವೆಯಿಂದ ಅಮಾನತು ಮಾಡಲಾಗಿದೆ.
ಅಲ್ಲದೇ ಯಾದಗಿರಿಯ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ 41 ವಿವಿಧ ಕಾಮಗಾರಿಗಳಲ್ಲಿ ಕರ್ತವ್ಯಲೋಪವೆಸಗಿ ಸರ್ಕಾರಕ್ಕೆ ಒಟ್ಟು ₹1.3 ಕೋಟಿ ರೂ. ನಷ್ಟ ಮಾಡಿದ್ದ ಕಾರ್ಯಪಾಲಕ ಇಂಜಿನಿಯರ್ ಬಸವರಾಜ. ಕೆ .ಹಲಚೇರ ಅವರನ್ನು ಸಹ ಸೇವೆಯಿಂದ ಅಮಾನತು ಮಾಡಲಾಗಿದ್ದು, ಭ್ರಷ್ಟರಿಗೆ ಹಾಗೂ ಕರ್ತವ್ಯ ಲೋಪವೆಸಾಗುವವರಿಗೆ ತಮ್ಮ ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಖಡಕ್ ಸಂದೇಶವನ್ನ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲೆ ತನಿಖೆ
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO)ಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಸುಧೀರ್ಘ ಗಂಟೆಗಳ ಕಾಲ ಇಲಾಖೆಯನ್ನ ಜನಸ್ನೇಹಿಗೊಳಿಸಲು ಬ್ರೈನ್ ಸ್ಟಾರ್ಮಿಂಗ್ ಅಧಿವೇಶನವಾಗಿ ಬದಲಾಗಿತ್ತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಗಳಲ್ಲಿ ಕಾರ್ಯಗತಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ಜನರಿಗೆ ಸಮರ್ಥವಾಗಿ ಮುಟ್ಟಿಸಲು ಸರ್ಕಾರ ಕೈಗೊಳ್ಳಬೇಕಾಗಿರುವ ಕ್ರಮಗಳು, ಜನಸ್ನೇಹಿ ಆಡಳಿತಕ್ಕೆ ಕಂಟಕವಾಗಿರುವ ಭ್ರಷ್ಟ PDOಗಳು ಹಾಗೂ ಅಧಿಕಾರಿಗಳ ವಿರುದ್ಧ ಜರುಗಿಸಬೇಕಾದ ಕ್ರಮಗಳು, ತಳಮಟ್ಟದಲ್ಲಿ ಜನರಿಗೆ ಸುಸ್ಥಿರ ಆಡಳಿತ ನೀಡಬೇಕಾದ PDO ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಉತ್ತರದಾಯಿಯಾಗಿಸಲು ಹಾಗೂ ಗ್ರಾಮ ಮಟ್ಟದಲ್ಲಿ ಆಡಳಿತ ಚುರುಕುಗೊಳಿಸಲು ನೀತಿ ರೂಪಿಸಲು ಎಲ್ಲಾ ಜಿಲ್ಲಾ ಪಂಚಾಯತಿ CEOಗಳಿಂದ ಸಲಹೆ ಸ್ವೀಕರಿಸಿ ವಿಸ್ತ್ರತವಾಗಿ ಸಚಿವರು ಚರ್ಚಿಸಿದರು.
ಜಿಲ್ಲಾ ಪಂಚಾಯತಿ CEOಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ನಡುವಿನ ಸಮನ್ವಯತೆ ಹೆಚ್ಚಿಸಲು ಇಲಾಖಾ ವತಿಯಿಂದಲೇ ಪ್ರತಿ ಹದಿನೈದು ದಿನಕ್ಕೊಮ್ಮೆ ಸಮನ್ವಯ ಸಭೆಗಳನ್ನು ನಡೆಸಲು ನಿರ್ದೇಶನ ನೀಡಿ ಇದನ್ನು ಸಾರ್ವಕಾಲಿಕ ಕಾರ್ಯಕ್ರಮವಾಗಿಸಲು ಕ್ರಮ ಕೈಗೊಳ್ಳುವಂತೆಯೂ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.
ಜೊತೆಗೆ CEOಗಳು ಗ್ರಾಮ ಮಟ್ಟದಲ್ಲಿ ಕಡ್ಡಾಯ ವೈಯಕ್ತಿಕ ಪರಿಶೀಲನೆ, ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ತೀವ್ರಗೊಳಿಸಿ ಅಂತಹವರ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ಜರುಗಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೇರ ನಿರ್ದೇಶನ ನೀಡಿದರು.












Click it and Unblock the Notifications