ಕಾರವಾರ ಮೀನುಗಾರರ ಬಲೆಗೆ ಭರ್ಜರಿ ಮೀನು; ದಸರೆಯ ಕೊಡುಗೆ!
ಕಾರವಾರ, ಸೆಪ್ಟೆಂಬರ್ 29 : ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ದಸರೆಯ ಬೋನಸ್ ಸಿಕ್ಕಿದೆ. ದಸರೆ, ದೀಪಾವಳಿಯ ಕೊಡುಗೆ ಎಂಬಂತೆ ಇಲ್ಲಿನ ಸಾಂಪ್ರದಾಯಿಕ ಏಂಡಿ ಬಲೆಗೆ ಭರಪೂರ ಮೀನುಗಳು ಬಿದ್ದಿವೆ.
ಕಳೆದ ಎರಡು ದಿನಗಳಿಂದ ಕಾರವಾರದ ಕಡಲತೀರದಲ್ಲಿ ಏಂಡಿ ಬಲೆ ಹಾಕುತ್ತಿರುವ ಸಾಂಪ್ರದಾಯಿಕ ಮೀನುಗಾರರಿಗೆ ಪಾಪ್ಲೇಟ್, ಬಣಗು, ಸೌಂದಳೆ, ಕೊಕ್ಕರೆ, ಶೆಟ್ಲಿ, ಏಡಿ, ಲೆಪ್ಪೆ ಮೀನುಗಳು ದೊರೆತಿವೆ.
ಕಾರವಾರ ಕಡಲತೀರದಲ್ಲಿ ತಾಪಮಾನ ಇಳಿಕೆ
ಕಾರವಾರದ ಕಡಲತೀರದಲ್ಲಿ ತಾಪಮಾನ ಇಳಿಕೆಯಾಗಿದೆ. ಇಲ್ಲಿಂದ ಹೊರಗಿನ ಕಡಲಿನಲ್ಲಿ ಬಿಸಿಯ ಹವೆ ಇರುವುದರಿಂದ ಮೀನುಗಳು ಇಲ್ಲಿನ ಕಡಲತೀರಕ್ಕೆ ಮೊಟ್ಟೆ ಇಡಲು ಹಾಗೂ ಮರಿ ಮಾಡಲು ಬಂದಿವೆ.

ಪ್ರತೀ ವರ್ಷ ದಸರೆ ಹಾಗೂ ದೀಪಾವಳಿಯ ಸಮಯದ ಮಾಘ ಮಳೆಗೆ ಈ ರೀತಿ ಭಾರೀ ಮೀನುಗಳು ಬಲೆಗೆ ಬೀಳುತ್ತವೆ ಅಂತ ಕಡಲ ಜೀವಶಾಸ್ತ್ರದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ತಿಳಿಸಿದರು. ಇನ್ನೊಂದು ಮೂರ್ನಾಲ್ಕು ದಿನ ಹೀಗೆ ಮುಂದುವರಿಯಲಿದೆ ಅಂತಲೂ ಕೂಡ ತಿಳಿಸಿದರು.
ಒಟ್ಟಾರೆ ದಸರೆ ಮೀನುಗಾರರಿಗೆ ಕೊಡುಗೆ ನೀಡಿದ್ದು, ಏಂಡಿ ಬಲೆಗೆ ಸಿಕ್ಕ ಮೀನುಗಳನ್ನು ನೋಡಿ ಮೀನುಗಾರರು ಸಂತಸ ಪಟ್ಟಿದ್ದಾರೆ. ಇದರಿಂದ ನಗರ ಮೀನು ಮಾರುಕಟ್ಟೆಯಲ್ಲಿಯೂ ಮೀನುಗಳ ದರ ಕೂಡ ಇಳಿಕೆಯಾಗಲಿದೆ.












Click it and Unblock the Notifications