ಕುಮಾರಸ್ವಾಮಿ, ಯಡಿಯೂರಪ್ಪ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ!
ಬೆಂಗಳೂರು, ಸೆ. 12: ಶತ್ರುವಿನ ಶತ್ರು ಮಿತ್ರ ಎಂಬಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ನಿನ್ನೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದರು. ಪ್ರಭಾವಿ ಶಾಸಕರೊಬ್ಬರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದಿದ್ದು ಹಾಗೂ ಅದೇ ಸಂದರ್ಭದಲ್ಲಿ ಸಿಎಂ, ಮಾಜಿ ಸಿಎಂ ಭೇಟಿಯಾಗಿ ಚರ್ಚೆ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. ನಿನ್ನೆ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಭೇಟಿ ಬಳಿಕ ಹಲವು ಬೆಳವಣಿಗೆಗಳಾಗುತ್ತಿವೆ.
ಮೈತ್ರಿ ಸರ್ಕಾರದ ಪತನವಾಗಿ ಬಿಜೆಪಿ ಸರ್ಕಾರ ಬಂದ ಬಳಿಕ ಇಬ್ಬರೂ ನಾಯಕರು ಹಲವು ಬಾರಿ ಮೊದಲ ಬಾರಿಗೆ ಭೇಟಿಯಾಗಿ ಚರ್ಚೆ ನಡೆಸಿದ್ದರು. ಭೇಟಿಯ ಹಿಂದೆ ಹಲವು ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೂ ಮಾತನಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದ ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಡ್ರಗ್ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಅದಕ್ಕೆ ಅವರು ಕಾರಣವನ್ನು ಕೊಟ್ಟಿದ್ದರು.
ಡ್ರಗ್ಸ್ ದಂಧೆ; ರಾಜಕಾರಣ ಬೇಡ
ಡ್ರಗ್ ದಂಧೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಚಾಮರಾಜನಗರದಲ್ಲಿ ಸುರೇಶ್ ಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಡ್ರಗ್ ಮಾಫಿಯಾ ವಿಚಾರವನ್ನು ಸರ್ಕಾರ ತಂದಿದೆ. ನಿಷ್ಪಕ್ಷಪಾತದ ತನಿಖೆ ನಡೆಸುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ವಿಪಕ್ಷ ನಾಯಕರ ಆರೋಪಕ್ಕೆ ಸುರೇಶ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯರಿಗೆ ನಾನು ಸಂಪೂರ್ಣ ವಿಶ್ವಾಸ ಕೊಡುತ್ತೇನೆ. ಸರ್ಕಾರ ಬಹಳ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ದಂಧೆಯ ಆಳಕ್ಕೆ ಹೋಗಿ ತನಿಖೆ ಮಾಡಲು ಸೂಚಿಸಲಾಗಿದೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಲಾಗಿದೆ ಎಂದು ವಿವರಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಸಮಿತಿ
ಡ್ರಗ್ ಪಿಡುಗಿನ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಡೀ ಯುವ ಜನಾಂಗವನ್ನೇ ನಾಶ ಮಾಡುವ ದರಿದ್ರ ದಂಧೆ ಇದು.
ಪಕ್ಷಗಳು, ರಾಜಕೀಯ ಮೀರಿ ನಾವೆಲ್ಲರೂ ಕೈ ಜೋಡಿಸಬೇಕಿದೆ. ಒಂದು ಮನಸ್ಸಿನಿಂದ ಎದುರಿಸದಿದ್ದರೆ, ಭಸ್ಮಾಸುರನಾಗಿ ಎಲ್ಲರನ್ನೂ ಈ ಮಾಫಿಯಾ ಸುಡಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.
ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಶಿಕ್ಷಣ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಾಲಾ ಮಕ್ಕಳು ಡ್ರಗ್ ಮಾಫಿಯಾಕ್ಕೆ ಬಲಿಯಾಗಬಾರದೆಂದು ಅರಿವು ಮೂಡಿಸುವ ಪ್ರಯತ್ನ ಆರಂಭಿಸಿದ್ದೇವೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸಮಿತಿ ಮಾಡಲಾಗಿದೆ. ಸಮಿತಿಯು ಮಕ್ಕಳು ಮಾಫಿಯಾಕ್ಕೆ ಬಲಿಯಾಗುವುದನ್ನು ತಡೆಯಲಿದೆ. ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆ ಸಮನ್ವಯತೆ ಸಾಧಿಸಿದ್ದು ಪ್ರತಿ ಬಿಇಒ, ಸಂಬಂಧಪಟ್ಟ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದರು.
ರಾಜಕೀಯ ಅರ್ಥ ಬೇಡ
ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ ಮಳೆಯಿಂದ ಬಹಳಷ್ಟು ಹಾನಿಯಾಗಿದ್ದು, ತುರ್ತಾಗಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಎಚ್ಡಿಕೆ ಭೇಟಿ ಮಾಡಿದ್ದಾರೆ. ಅದನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಬೇಡ. ತಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸುವಂತೆ ಮಾಜಿ ಸಿಎಂ ಎಚ್ಡಿಕೆ ಜೊತೆಗೆ ಅಲ್ಲಿನ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರಷ್ಟೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
Recommended Video
ಪಠ್ಯ ಕಡಿತದ ನಿರ್ಧಾರ
ಕೊರೊನಾ ವೈರಸ್ ಸಂಕಷ್ಟದಿಂದ ಶಾಲಾ ಮಕ್ಕಳ ಪಠ್ಯದಲ್ಲಿ ಕಡಿತ ಮಾಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಹೀಗಾಗಿ ಬೋಧನಾ ಅವಧಿ ನೋಡಿಕೊಂಡು ಪಠ್ಯ ಕಡಿತ ಮಾಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ SOP ಬಂದಿದೆ, ರಾಜ್ಯದ SOP ಕೂಡ ತಯಾರಾಗಿದೆ. ಶೀಘ್ರವೇ ವಿವರವಾದ SOP ಬಿಡುಗಡೆ ಮಾಡುತ್ತೇವೆ. ಶಾಲಾ ಮಕ್ಕಳಿಗೆ ಬೋಧನೆಗೆ ನಮಗೆ ಎಷ್ಟು ದಿನ ಸಿಗಲಿದೆ ಎಂಬುದರ ಆಧಾರದ ಮೇಲೆ ಪಠ್ಯ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಸಚಿವ ಸುರೇಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ.