ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಬಿಗ್ ರಿಲೀಫ್ : ಬ್ರಿಜೇಶ್ ಕಾಳಪ್ಪ
ನವದೆಹಲಿ, ಫೆಬ್ರವರಿ 16: ತಮಿಳುನಾಡಿಗೆ ಕರ್ನಾಟಕ ಹರಿಸಬೇಕಿರುವ ನೀರಿನ ಪ್ರಮಾಣದಲ್ಲಿ 14.75 ಟಿಎಂಸಿ ಕಡಿತ ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶದಿಂದ ಕರ್ನಾಟಕಕ್ಕೆ ದೊಡ್ಡ ಸಮಾಧಾನ ಸಿಕ್ಕಿದೆ ಎಂದು ಕರ್ನಾಟಕ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿರುವ ಅವರು, "ತಮಿಳುನಾಡಿಗೆ 14.75 ಟಿಎಂಸಿ ನೀರು ನೀಡುವುದು ಕಡಿಮೆಯಾಗಿದೆ. ಇದು ಕರ್ನಾಟಕಕ್ಕೆ ದೊಡ್ಡ ರಿಲೀಫ್ ನೀಡಿದೆ. ಕರ್ನಾಟಕದ ವಾದವನ್ನು ಭಾಗಶಃ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ," ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಅಂತರ್ಜಲವನ್ನು ಪರಿಗಣಿಸಿ ಕರ್ನಾಟಕ ಬಿಡುಗಡೆ ಮಾಡಬೇಕಾದ ನೀರಿನಲ್ಲಿ 10 ಟಿಎಂಸಿ ಕಡಿತಗೊಳಿಸಿದೆ. ಜತೆಗೆ ಸುಪ್ರೀಂ ಕೋರ್ಟ್ ಬೆಂಗಳೂರಿಗೂ 4.75 ಟಿಎಂಸಿ ನೀರನ್ನು ನೀಡಿದೆ ಎಂದು ಅವರು ವಿವರಿಸಿದ್ದಾರೆ.

ಬಿಬಿಸಿಯೂ ಬೆಂಗಳೂರಿಗೆ ನೀರಾವರಿ ಸಮಸ್ಯೆ ತಲೆದೋರಲಿದೆ ಎಂದು ಹೇಳಿತ್ತು. ಇದೀಗ 4.75 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಿರುವುದರಿಂದ ನೀರಾವರಿ ಸಮಸ್ಯೆ ದೊಡ್ಡ ಮಟ್ಟಕ್ಕೆ ಕಡಿಮೆಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇನ್ನು ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆಯೂ ತೀರ್ಪಿನಲ್ಲಿ ಹೇಳಲಾಗಿದೆ. ಅದರ ಬಗ್ಗೆ ತೀರ್ಪು ಓದಿದ ನಂತರ ಈ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ಬ್ರಿಜೇಶ್ ಕಾಳಪ್ಪ ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಪರ ವಕೀಲ ಮೋಹನ್ ಕಾತರಕಿ, "ಕರ್ನಾಟಕದ ನೀರಾವರಿ ಪ್ರದೇಶವನ್ನು ವಿಸ್ತರಣೆ ಮಾಡಲು ಸುಪ್ರಿಂ ಕೋರ್ಟ್ ಅನುಮತಿ ನೀಡಿದೆ," ಎಂದು ಮಾಹಿತಿ ನೀಡಿದ್ದಾರೆ.
ತೀರ್ಪಿನ ನಂತರ ಕರ್ನಾಟಕಕ್ಕೆ 284.75 ಟಿಎಂಸಿ ನೀರು ಸಿಗಲಿದೆ. ಕರ್ನಾಟಕ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣ 177.25 ಟಿಎಂಸಿಗೆ ಇಳಿಕೆಯಾಗಿದೆ.












Click it and Unblock the Notifications