'ಸುದ್ದಿ ವಾಹಿನಿ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಂಡಿದೆ'
ಸ್ವರಾಜ್ ನ್ಯೂಸ್ ಕನ್ನಡ ಸುದ್ದಿವಾಹಿನಿಗೆ ರಾತ್ರೋ ರಾತ್ರಿ ಬೀಗ ಜಡಿದು, 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ ಬಿದ್ದ ಘಟನೆ ಕಣ್ಮುಂದೆ ಇರುವಾಗಲೇ, ಸುದ್ದಿ ಟಿವಿ ಬಾಗಿಲ್ ಬಂದ್ ಆಗಿರುವ ಸುದ್ದಿ ಖಚಿತವಾಗಿದೆ. ಈ ಬಗ್ಗೆ ಚಾನೆಲ್ ನ ಮುಖ್ಯ ಸಂಪಾದಕರಾದ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಶಶಿಧರ್ ಭಟ್ ಅವರು ಫೇಸ್ ಬುಕ್ ಪೋಸ್ಟ್ ಇಲ್ಲಿ ನೀಡಲಾಗಿದೆ.
ಸುದ್ದಿ ವಾಹಿನಿ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಂಡಿದೆ. ಸುಮಾರು ಮೂರು ವರ್ಷಗಳ ಕಾಲ ಒಂದು ತಿಂಗಳು ತಪ್ಪದಂತೆ ಸಂಬಳ ನೀಡಿದ್ದೇನೆ. ಸಿಬ್ಬಂದಿಗಳ ಕಷ್ಟ ಕಾಲದಲ್ಲಿ ಸಂಸ್ಥೆ ಮತ್ತು ವೈಯಕ್ತಿಕವಾಗಿ ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆ. ಕಳೆದ ಜೂನ್ ತಿಂಗಳಿನಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವಾಹಿನಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿತು.
ಸಂಬಳ ನೀಡದೆ ಬೀಗ ಹಾಕಿದ ಕನ್ನಡ ಸುದ್ದಿ ವಾಹಿನಿ : 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ
ಆದರೆ, ನಾನು ವಾಹಿನಿಯನ್ನು ನಿಲ್ಲಿಸದಿರುವ ತೀರ್ಮಾನ ತೆಗೆದುಕೊಂಡೆ. ಹೊಸ ಹೂಡಿಕೆದಾರರನ್ನು ಕರೆ ತರಲು ಯತ್ನ ನಡೆಸಿದೆ. ಸುಮಾರು ನಾಲ್ವರು ಹೂಡಿಕೆದಾರರ ನಡುವೆ ಒಪ್ಪಂದವಾಗುವ ಸಂದರ್ಭದಲ್ಲಿ ಅದು ತಪ್ಪಿ ಹೋಯಿತು. ಕೆಲವರು ಕುತಂತ್ರ ನಡೆಸಿ ಹೊಸ ಹೂಡಿಕೆದಾರರು ಬರದಂತೆ ನೋಡಿಕೊಂಡರು.
ನಮ್ಮ ಕೆಲವು ಸಹೋದ್ಯೋಗಿಗಳು ಹಳೆಯ ಹೂಡಿಕೆದಾರರಿಗೆ ಇಲ್ಲಿನ ಪ್ರತಿ ನಿಮಿಷದ ಮಾಹಿತಿಯನ್ನು ನೀಡಿ ಹೊಸದಾಗಿ ಹೂಡಿಕೆದಾರರು ಬರದಂತೆ ನೋಡಿಕೊಂಡರು. ಇವೆಲ್ಲವುದರ ನಡುವೆ ಮತ್ತೊಬ್ಬರನ್ನು ಕರೆದುಕೊಂಡು ಬಂದು 30 ಸಾವಿರದ ಒಳಗಿನ ಸಹೋದ್ಯೋಗಿಗಳಿಗೆ ಸಂಬಳ ಕೊಡಿಸಿದೆ. ಇನ್ನು ಉಳಿದಿರುವ 25 ಲಕ್ಷ ರೂಪಾಯಿ ಕೊಡಿಸುವುದಕ್ಕೆ ವ್ಯವಸ್ಥೆ ಮಾಡಿದ್ದೆ.
ಅಷ್ಟರಲ್ಲಿ ಹಳೆಯ ಹೂಡಿಕೆದಾರರು ಸ್ಟುಡಿಯೋ ನಮ್ಮದು ನಾವು ಬೀಗ ಹಾಕುತ್ತೇವೆ ಎಂದು ತಿಳಿಸಿದರು. ಅವರಿಗೆ ಸ್ಟೂಡಿಯೋಕ್ಕೆ ಹಣ ನೀಡುವುದಾಗಿ ಹೇಳಿದರೂ ಕೇಳಲಿಲ್ಲ.
ಕನ್ನಡದ 'ಅರ್ನಬ್' ಚಂದನ್ ಶರ್ಮ ಬ್ಯಾಕ್ ವಿತ್ 'ಪವರ್'
ಸ್ಟುಡಿಯೋ ಉಳಿಸಿಕೊಳ್ಳಲು ನಾನು ಯತ್ನ ನಡೆಸುತ್ತಿದ್ದಾಗ ನನ್ನ ಸಹೋದ್ಯೋಗಿಗಳು ಸುದ್ದಿ ಮಾಡುವುದನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡರು. ನಾನು ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಈಗ ಅವರೆಲ್ಲ ಭಟ್ಟ ವಿಶ್ವಾಸದ್ರೋಹಿ ಎನ್ನುತ್ತಿದ್ದಾರೆ. ಅವರನ್ನು ನಂಬಿ ಕೆಟ್ಟೆವು ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಹೊಸದಾಗಿ ಬಂಡವಾಳ ಹೂಡಿಕೆ ಮಾಡಲು ಬಂದವರಿಗೆ ದೂರವಾಣಿ ಕರೆ ಮಾಡಿ, ಭಟ್ಟ ವಿಶ್ವಾಸದ್ರೋಹ ಮಾಡಿದ ಎನ್ನತೊಡಗಿದ್ದಾರೆ. ವಿಶ್ವಾಸ ಎನ್ನುವುದು ಹೆಸರಿನಲ್ಲಿಲ್ಲ, ನಡವಳಿಕೆಯಲ್ಲಿದೆ ಎಂಬ ಅರಿವೂ ಅವರಿಗಿಲ್ಲ.
ಸುಮಾರು ಮೂರು ವರ್ಷಗಳ ಕಾಲ ಎಲ್ಲ ವಾಹಿನಿಗಳಿಗಿಂತ ಹೆಚ್ಚಿನ ಸಂಬಳ ಕೊಟ್ಟಿದ್ದೇನೆ. ಟ್ರೇನಿಯಾಗಿ ಬಂದವರಿಗೆ 15 ಸಾವಿರ ಸಂಬಳ ನೀಡಿದ್ದೇನೆ. ಇಷ್ಟು ಹಣವನ್ನು ಯಾವುದೇ ವಾಹಿನಿ ನೀಡುವುದಿಲ್ಲ. ಹಿರಿಯ ಹುದ್ದೆಗಳಿಗೆ 50 ಸಾವಿರ ಮೀರಿ ಸಂಬಳ ಕೊಟ್ಟಿದ್ದೇನೆ. ಚೆನ್ನಾಗಿ ಕೆಲಸ ಮಾಡುವವರಿಗೆ ವರ್ಷದಲ್ಲಿ ಮೂರು ಬಾರಿ ಸಂಬಳ ಹೆಚ್ಚಳ ಮಾಡಿದ್ದೇನೆ. ಪ್ರತಿ ವರ್ಷದ ಇನ್ಕ್ರೀಮೆಂಟ್ ನೀಡಿದ್ದೇನೆ.
ಹೀಗಿದ್ದರೂ ಭಟ್ಟ ವಿಶ್ವಾಸದ್ರೋಹಿ. ಭಟ್ಟನನ್ನು ನಂಬಿ ಕೆಟ್ಟೆವು... ಭಟ್ಟ ಹೋದರೆ ವಾಹಿನಿ ಉಳಿಯುತ್ತದೆ, ಭಟ್ಟನೇ ವಾಹಿನಿ ನಾಶ ಮಾಡಿದ ಎಂದು ಹುಡುಗರು ಹೇಳತೊಡಗಿದ್ದಾರೆ.
ಮೂರು ವರ್ಷ ಚಾಚೂ ತಪ್ಪದೇ ಸಂಬಳ ಕೊಟ್ಟು ಅವರ ಕಷ್ಟ ಸುಖಕ್ಕೆ ಆದವನು ಕೇವಲ ಎರಡು ತಿಂಗಳ ಅವಧಿಯಲ್ಲಿ ಹೀಗಾಗಲು ಸಾಧ್ಯವೇ? ಗೊತ್ತಿಲ್ಲ. ಈಗ ನನ್ನ ವಿರುದ್ಧ ಮಾತನಾಡುವವರ ಎಲ್ಲ ವಿವರಗಳೂ ನನ್ನ ಬಳಿ ಇವೆ. ಬೇರೆ ಬೇರೆಯವರ ಜೊತೆ ಅವರು ಮಾತನಾಡಿದ ದೂರವಾಣಿ ಕರೆಗಳ ಧ್ವನಿ ಮುದ್ರಣವನ್ನು ನಾನು ಇಟ್ಟುಕೊಂಡಿದ್ದೇನೆ. ಅವರ ಪಿತೂರಿಯನ್ನು ಅವರ ಮಾತುಗಳೇ ಸಾಬೀತು ಪಡೆಸುತ್ತವೆ. ಇವೆಲ್ಲವನ್ನೂ ಸುದ್ದಿ ಟೀವಿಯ ಎಲ್ಲ ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳುತ್ತೇನೆ. ಆಗ ಯಾರು ವಿಶ್ವಾಸಿಕರು ಯಾರು ವಿಶ್ವಾಸಶ್ರೋಹಿಗಳು. ಯಾರು ನಂಬಿಕೆಗೆ ಅರ್ಹರು ಎಂಬುದು ಗೊತ್ತಾಗುತ್ತದೆ.