ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಚಿಕನ್ ಸಾಂಬಾರ್!
ಬೆಂಗಳೂರು, ಏ. 30: ಭೀಮನು ದುರ್ಯೋಧನನ್ನು ಹೇಗೆ ಕೊಂದನು? ಎಂಬುದಕ್ಕೆ 100 ವಾಕ್ಯಗಳಿಗೆ ಮೀರದಂತೆ ಉತ್ತರ ಬರೆಯಿರಿ ಎಂಬ ಪ್ರಶ್ನೆಗೆ ಭೀಮನು ದುರ್ಯೋಧನನ್ನು ಗುದ್ದಿ, ಗುದ್ದಿ, ಗುದ್ದಿ.................ಗುದ್ದಿ ಕೊಂದನು ಎಂದು ಬರೆಯುವರು ಇದ್ದಾರೆ(ಇದ್ದರು) ಎಂದು ನಮ್ಮ ಪ್ರೌಢಶಾಲೆಯ ಮೇಸ್ಟ್ರು ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಚಿಕನ್ ಸಾಂಬಾರ್ ಸಹ ಮಾಡಲಾಗುತ್ತದೆ!
ಇಂಥದ್ದೇ ಉತ್ತರದ ಪ್ರತಿಯೊಂದು ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಮೇಧಾವಿಗಳ ಉತ್ತರದ ಚಾಕಚಕ್ಯತೆಯನ್ನು ಸರಿಯಾಗಿ ಓದಿಯೇ ಅರ್ಥ ಮಾಡಿಕೊಳ್ಳಬೇಕು.[ಎಸ್ಸೆಸ್ಸೆಲ್ಸಿ, ಪಿಯೂ ಫಲಿತಾಂಶ ದಿನಾಂಕ ದೇವರಿಗ್ಗೊತ್ತು]
ಗಣಿತದ ಪ್ರಶ್ನೆಯೊಂದಕ್ಕೆ 'ಮೇಧಾವಿ'ಯೊಬ್ಬ ಬರೆದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಪುಣ್ಯಾತ್ಮ ಬರೆದಿದ್ದನ್ನು ಹಾಗೇ ಒಮ್ಮೆ ಓದುಕೊಂಡು ಬನ್ನಿ. 'ನಾನು ಭಾನುವಾರು ನಾಮ್ಮ ಮನೆಯಲ್ಲಿ 1 ಕೆಜಿ ಚಿಕನ್ ತಂದು ಸಂಬಾರ್ ಮಾಡಿದರು. ಆ ಚಿಕನ್ ಸಂಬಾರ್ ತುಂಬಾ ರುಚಿಯಾಗಿತು ಚಿಕನ್ ಮಾಂಸ ತುಂಬಾ ಚೆನ್ನಾಗಿತ್ತು ಚಿಕನ್ ಬೇಕಾಗಿರು ಪದಾರ್ಥಗಳು ಮೊದಲು ಶುಂಠಿ, ಲವಂಗ, ಮೈತ್ಯಾ ಚಿಕನ್ ಮಾಸಲ ಮತ್ತು ಈರುಳ್ಳಿ ಇವುಗಳನ್ನು ಮಿಸ್ಕಿಗೆ ಹಾಕ್ಕಿ ಚೆನ್ನಾಗಿ ರುಂಬಿಕೊಳ್ಳಬೇಕು ಆನಂತರ ಪತ್ರೆಗೆ, ಹೆಣ್ಣೆ ಈರುಳ್ಳಿ. ರುಂಬಿ ಕೊಂಡ್ಡ ಮಾಸಲ ಹಾಕ್ಕಿ ಚೆನ್ನಾ ಮಿಕ್ಸ್ ಮಾಡಿಕೊಳ್ಳ ಬೇಕು. ಆನಂತರ ಚಿಕ್ಕನನ್ನು ಪತ್ರೆಗೆ ಹಾಕ್ಕಿ ಚೆನ್ನಾ ಬೇಹಿಸಿಕೋಳ್ಳ ಬೇಕು. ಆನಂತರ ಸಂಬಾರ್ ತುಂಬು ರುಚಿಯಾಗಿದೆ!!!
ಈ ಬಗೆಯ ತಲೆಹರೆಟೆ, ಅಸಂಬದ್ಧ ಉತ್ತರಗಳಿಗೆ ಕೊನೆಯಿಲ್ಲ. ಕನ್ನಡದ ಅನುವಾದ ಬರೆಯಿರಿ ಎಂದು ಇಂಗ್ಲಿಷ್ ನ ಕಿಂಗ್ ಶಬ್ದವನ್ನು ನೀಡಿದರೆ ಅದಕ್ಕೆ 'ಸಿಗರೇಟ್' ಎಂದು ಉತ್ತರ ನೀಡಿದವರು ಇದ್ದಾರೆ. ಮೌಲ್ಯಮಾಪಕರು ಕೊಂಚ ಗಡಿಬಿಡಿಯಲ್ಲಿ ಇದ್ದರೆ ಅಂಕಗಳು ಚಿಕನ್ ಸಾಂಬಾರ್ ರೀತಿಯಲ್ಲೇ ಬೀಳುತ್ತವೆ.[ಎಸ್ಎಸ್ಎಲ್ಸಿ ಗಣಿತ ಪತ್ರಿಕೆಗೆ 4 ಗ್ರೇಸ್ ಅಂಕ]
ಅವಾಂತರಗಳು ಇಷ್ಟಕ್ಕೇ ನಿಲ್ಲಲ್ಲ. ನೂರು ರೂಪಾಯಿ ನೋಟು ಇಡುವವರು, ಐ ಲವ್ ಯು ಎಂದು ಬರೆಯುವವರು ಇದ್ದಾರೆ. ಯಾಕೆ ಹೀಗೆ ಮಾಡುತ್ತಾರೆ? ಅವರಿಗೆ ಉತ್ತರ ಗೊತ್ತಿಲ್ಲದಿದ್ದರೂ ಈ ಬಗೆಯ ಅಸಂಬದ್ಧ ಹೇಳಿಕೆಗಳನ್ನು ಯಾಕೆ ಬರೆಯುತ್ತಾರೆ? ಉತ್ತರ ಕೇಳಲು ನಮ್ಮ ಬಳಿ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹೆಸರನ್ನು ಬಹಿರಂಗ ಮಾಡಬಾರದು ಎಂದು ಪ್ರೌಢ ಶಿಕ್ಷಣ ಮಂಡಳಿ ಹೇಳುತ್ತದೆ.
ಒಟ್ಟಿನಲ್ಲಿ ಇಂಥ ಉತ್ತರಗಳು ನಮ್ಮ ಸದ್ಯದ ಶಿಕ್ಷಣ ವ್ಯವಸ್ಥೆಯ ಪ್ರತಿಬಿಂಬ ಅಷ್ಟೇ. ಬದಲಾವಣೆ ಎಲ್ಲಿ ಆಗಬೇಕು ಎಂಬುದನ್ನು ಶಿಕ್ಷಣ ಮಂಡಳಿಗಳೇ ಗುರುತಿಸಿಕೊಳ್ಳಬೇಕು.