ಸಾರಿಗೆ ನೌಕರರ ಮುಷ್ಕರ; ಸಂಧಾನ ಸಭೆ ಕರೆದ ಕಾರ್ಮಿಕ ಇಲಾಖೆ
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆ ಮಾರ್ಚ್ 20ರಂದು ಸಂಧಾನ ಸಭೆ ಕರೆದಿದೆ.
ಬೆಂಗಳೂರು, ಮಾರ್ಚ್ 17; ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ನೀಡಿದೆ. ನೌಕರರ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21ರಿಂದಲೇ ಮುಷ್ಕರ ನಡೆಸುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಯುಗಾದಿ ಹಬ್ಬಕ್ಕೆ ಬಸ್ ಸೌಕರ್ಯ ಇರುವುದೋ?, ಇಲ್ಲವೋ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು ರಾಜೀ ಸಂಧಾನ ಸಭೆಯನ್ನು ಆಯೋಜನೆ ಮಾಡಿದ್ದಾರೆ.
ಕಾರ್ಮಿಕ ಇಲಾಖೆ ಆಯುಕ್ತರು ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ., ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ ಇವರು ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ದಿನಾಂಕ 24/3/2023ರಂದು ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಬೆಂಗಳೂರು ಇವರು ಈ ಕುರಿತು ದಿನಾಂಕ 8/3/2023ರಂದು ಮುಷ್ಕರ ನೋಟೀಸ್ ನೀಡಿರುತ್ತಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರುಗಳು ಕೆ.ಎಸ್.ಆರ್.ಟಿ.ಸಿ, ಬೆಂಗಳೂರು ಇವರು ಪತ್ರದಲ್ಲಿ ಕೋರಿರುತ್ತಾರೆ ಎಂದು ಆಯುಕ್ತರು ಪತ್ರದಲ್ಲಿ ವಿಚಾರ ಪ್ರಸ್ತಾಪಿಸಿದ್ದಾರೆ.
ಕಾರ್ಮಿಕ ಸಂಘದವರು ಮುಷ್ಕರ ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘದವರ ನಡವೆ ವಿವಾದ ಉದ್ಭವಿಸಿದೆ ಎಂದು ಪರಿಗಣಿಸಿ, ಈ ಸಂಬಂಧ ಮಧ್ಯೆ ಪ್ರವೇಶಿಸುವುದು ಅವಶ್ಯವೆಂದು ಭಾವಿಸಿ ದಿನಾಂಕ 20/3/2023 ರಂದು ಮಧ್ಯಾಹ್ನ 2.30ಗಂಟೆಗೆ ರಾಜೀ ಸಂಧಾನ ಸಭೆಯನ್ನು ನಿಗದಿಪಡಿಸಿದೆ. ಸದರಿ ಸಂಧಾನ ಸಭೆಗೆ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಿರಬೇಕೆಂದು ಈ ಮೂಲಕ ಸೂಚಿಸಿದೆ ಎಂದು ತಿಳಿಸಲಾಗಿದೆ.

ಮಾತುಕತೆ ವಿಫಲ; ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ನೌಕರರ ಜಂಟಿ ಕ್ರಿಯಾ ಸಮಿತಿ ಎರಡೂ ಬಣಗಳು ಪ್ರತ್ಯೇಕವಾಗಿ ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಮುಷ್ಕರಕ್ಕೆ ಕರೆ ನೀಡಿರುವ ನೌಕರರ ಜೊತೆ ಸಾರಿಗೆ ಸಚಿವರು ನಡೆಸಿದ ಸಭೆ ಈಗಾಗಲೇ ವಿಫಲವಾಗಿದೆ. ಶೇಕಡ 20ರಷ್ಟು ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತಾಗಿ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.
ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೇ. 15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘದವರು ಇದನ್ನು ಒಪ್ಪುತ್ತಿಲ್ಲ. 2020ರಿಂದ ವೇತನ ಪರಿಷ್ಕರಣೆ ಆಗಿಯೇ ಇಲ್ಲ. ಈಗ ಶೇ. 15ರಷ್ಟು ಹೆಚ್ಚಳ ಮಾಡಿದರೆ ಪ್ರಯೋಜನವಿಲ್ಲ. ವಿದ್ಯುತ್ ಕಂಪನಿ ನೌಕರರಿಗೆ ಶೇ. 20ರಷ್ಟು ಹೆಚ್ಚಳ ಮಾಡಿದ್ದಾರೆ. ನಮಗೇಕೆ ಕಡಿಮೆ ಹೆಚ್ಚಳ ಮಾಡುತ್ತಿರುವುದು? ಎಂದು ಪ್ರಶ್ನೆ ಮಾಡುತ್ತಿದ್ದಾರೆ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಮುಷ್ಕರದ ಬಗ್ಗೆ ಮಾತನಾಡಿರುವ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್, "ಮಾರ್ಚ್ 21ರಂದು ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದೇವೆ, ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಮುಂದುವರಿಯಲಿದೆ. ಇದು ನೌಕರರ ಹೋರಾಟ, ಈ ಮೂಲಕ ಜನರಿಗೆ ತೊಂದರೆ ಮಾಡುವ ಉದ್ದೇಶವಿಲ್ಲ. ನೌಕರರ ವೇತನ ಹೆಚ್ಚಳದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ನಾವು ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ" ಎಂದು ಸ್ಪಷ್ಟಪಡಿಸಿದರು.
2020ರಲ್ಲಿ ಸುಮಾರು 5 ದಿನಗಳ ಕಾಲ ಸಾರಿಗೆ ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಬಸ್ ಸಂಚಾರ ಸ್ಥಗಿತವಾಗಿ ಜನರು ಪರದಾಟ ನಡೆಸುವಂತಾಗಿತ್ತು. ಆಗ ಹಲವು ನೌಕರರು ವಜಾಗೊಂಡು ತೊಂದರೆ ಅನುಭವಿಸುವಂತೆ ಆಯಿತು, ನೂರಕ್ಕೂ ಹೆಚ್ಚು ಮಂದಿ ಈಗಲೂ ಸಹ ಕೆಲಸಕ್ಕೆ ಮರಳಲು ಸಾಧ್ಯವಾಗಿಲ್ಲ. ಈಗ ಮತ್ತೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ವಜಾಗೊಂಡರೆ ಮುಂದೇನು? ಎಂಬ ಚಿಂತೆ ನೌಕರರನ್ನು ಕಾಡುತ್ತಿದೆ.












Click it and Unblock the Notifications