ಪಾಟೀಲರ ಬಾಯಲ್ಲಿ ಇದೆಂಥ ಅವಾಚ್ಯ ಶಬ್ದ, ಶಿವಶಿವ!
ಬೆಂಗಳೂರು, ಜೂನ್ 03 : ಟೈಮ್ಸ್ ನೌ ಮತ್ತು ಇಂಡಿಯಾ ಟುಡೇ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ತಮ್ಮ ಹೆಸರು ಬಹಿರಂಗವಾಗುತ್ತಿದ್ದಂತೆ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ, ಕಾಂಗ್ರೆಸ್ ನಾಯಕ ಬಿಆರ್ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಆವೇಶಭರಿತರಾಗಿ ಮಾತನಾಡುವ ಭರದಲ್ಲಿ, ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬೋ... ಮಕ್ಕಳು, ಸೂ... ಮಕ್ಕಳು ಇತ್ಯಾದಿ ಪದಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ಬಳಸಿ, ಅವರನ್ನು ಕೂಡ ಮುಜುಗರಕ್ಕೆ ಈಡು ಮಾಡಿದರು.
"ಇದು ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ. ಈ ಬೋ... ಮಕ್ಕಳು, ಸೂ... ಮಕ್ಕಳು ನನ್ನನ್ನು ಸಿಲುಕಿಸುವ ಉದ್ದೇಶದಿಂದ ಸಂಚು ಮಾಡಿದ್ದಾರೆ. ಇದರ ವಿರುದ್ಧ ತನಿಖೆಯಾಗಬೇಕು. ಇಂಥ ಸುದ್ದಿ ಹೊರಬಿದ್ದು ನನ್ನ ಕುಟುಂಬದವರಿಗೆ ಏನಾದರೂ ಆದರೆ ಯಾರು ಜವಾಬ್ದಾರರು" ಎಂದು ಬಿಆರ್ ಪಾಟೀಲ ರೇಗಾಡಿದ್ದಾರೆ. [ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ರೀ ಪಾಟೀಲರೆ ಇಂಥಾ ಶಬ್ದ ಬಳಸ್ತಾರೇನ್ರೀ ಎಂದು ಸಿದ್ದರಾಮಯ್ಯ ಅವರೇ ಪಾಟೀಲರನ್ನು ಗದರಿಸಿ ಸುಮ್ಮನಾಗಿಸಬೇಕಾಯಿತು. ಪತ್ರಕರ್ತರು ಸ್ಟಿಂಗ್ ಆಪರೇಷನ್ ಬಗ್ಗೆ ಕೇಳಿದ ಪ್ರಶ್ನೆಗೆ, ಇದಕ್ಕೆಲ್ಲಾ ಯಾರು ಉತ್ತರ ಕೊಡ್ತಾರೆ ಎಂದು ಜಾರಿಕೊಂಡು ಸಿದ್ದರಾಮಯ್ಯ ಹೊರಟುಬಿಟ್ಟರು.
ಸ್ಟಿಂಗ್ ಆಪರೇಷನ್ ಬಹಿರಂಗವಾಗುತ್ತಿದ್ದಂತೆ ಬಿಆರ್ ಪಾಟೀಲರು ಆಳಂದದಲ್ಲಿ ಉದ್ದೇಶಪೂರ್ವಕವಾಗಿ ಕೇಬಲ್ ಟಿವಿ ಸಂಪರ್ಕವನ್ನು ಕಟ್ ಮಾಡಿಸಿದರು ಎಂಬ ಮಾತು ಕೂಡ ಕೇಳಿಬರುತ್ತಿದೆ. ಮಾತಿನ ಹಾರಾಟ ನಡೆಸಿದ ನಂತರ ಮೌನಕ್ಕೆ ಜಾರಿರುವ ಪಾಟೀಲರು ತನಿಖೆಗಾಗಿ ಪಟ್ಟುಹಿಡಿದು ಧರಣಿ ಕುಳಿತಿದ್ದಾರೆ. [ವೋಟಿಗಾಗಿ ನೋಟು : 'ತಪ್ಪೇನಿದೆ, ಎಲ್ಲ ಕಡೆ ಇದು ಕಾಮನ್'!]
ರಾಜ್ಯಸಭೆ ಚುನಾವಣೆಯಲ್ಲಿ ಮತಹಾಕಲು ಕೋಟಿಕೋಟಿ ರುಪಾಯಿ ಡೀಲ್ ನಡೆಯುತ್ತಿದೆ ಎಂದು ಟೈಮ್ಸ್ ನೌ ಮತ್ತು ಇಂಡಿಯಾ ಟುಡೇ ನಡೆಸಿದ ಕುಟುಕು ಕಾರ್ಯಾಚರಣೆಯ ವಿವರ ಬಹಿರಂಗವಾಗುತ್ತಿದ್ದಂತೆ ಕರ್ನಾಟಕ ರಾಜಕೀಯ ಅಂಗಳ ಕಲ್ಲು ಹೊಡೆಸಿಕೊಂಡ ಜೇನುಗೂಡಿನಂತಾಗಿದೆ.
ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಒಬ್ಬರಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಒಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿಯೊಬ್ಬ ಗೆಲ್ಲಬೇಕಾದರೆ ಕನಿಷ್ಠ 45 ಮತಗಳು ಬೇಕಾಗಿವೆ. ಆದರೆ, ಕಾಂಗ್ರೆಸ್ (30) ಮತ್ತು ಜೆಡಿಎಸ್ (35) ಮತಗಳನ್ನು ಮಾತ್ರ ಹೊಂದಿದ್ದರಿಂದ ಸಹಜವಾಗಿ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಸಾಧ್ಯತೆಯಿದೆ. [ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಗಾಳ : ಗುಪ್ತಚರ ವರದಿ]