ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ಭಾರೀ ವಿರೋಧ, ಸಡ್ಡು ಹೊಡೆದ ಕೇರಳ
ಕೇಂದ್ರ ಸರಕಾರವು ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಮುಂದಾಗಿದೆ ಎಂದು ಆರೋಪಿಸಿ, ವಿವಿಧ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸಿವೆ. ಕೇರಳ ಸರಕಾರ ಈ ತೀರ್ಮಾನದ ವಿರುದ್ಧ ಸಡ್ಡು ಹೊಡೆದು ನಿಂತಿದೆ
ಬೆಂಗಳೂರು, ಏಪ್ರಿಲ್ 20: ಸಿಬಿಎಸ್ ಇ ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಕಡ್ಡಾಯಗೊಳಿಸುವುದಕ್ಕೆ ರಾಷ್ಟ್ರಪತಿಯಿಂದ ಒಪ್ಪಿಗೆ ಸಿಕ್ಕ ಮೇಲೆ ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರಕಾರವು ಸ್ಥಳೀಯ ಭಾಷೆಗಳನ್ನು ದಮನ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಹಿಂದಿ, ಹಿಂದೂ ಹಾಗೂ ಹಿಂದೂಸ್ತಾನಿ ಎಂಬ ಬಿಜೆಪಿಯ ಘೋಷವಾಕ್ಯವನ್ನು ಜಾರಿಗೆ ತರಲು ಹೊರಟಿದೆ ಎಂದು ತೃಣಮೂಲ ಕಾಂಗ್ರೆಸ್ ನ ಮುಖಂಡರಾದ ಸೌಗತ ರಾಯ್ ಆರೋಪಿಸಿದ್ದಾರೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಇಂಥ ತೀರ್ಮಾನಗಳನ್ನು ಜಾರಿಗೆ ತರುವ ಮುಂಚೆ ಕೇಂದ್ರ ಸರಕಾರ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಕೂಡ ಅವರು ಹೇಳಿದ್ದಾರೆ.[ಹಿಂದಿಯಲ್ಲೇ ಭಾಷಣ: ರಾಷ್ಟ್ರಪತಿ ಆದೇಶ ಹುಟ್ಟುಹಾಕಿದ ಚರ್ಚೆ]

ಮಾರ್ಚ್ 31ರಂದು ರಾಷ್ಟ್ರಪತಿ ಹೊರಡಿಸಿದ ಆದೇಶದಲ್ಲಿ, ಹಿಂದಿ ಕಡ್ಡಾಯಗೊಳಿಸಲು ಎಲ್ಲ ಗಂಭೀರ ಪ್ರಯತ್ನವನ್ನೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾಡಬೇಕು ಎಂದು ತಿಳಿಸಲಾಗಿದೆ. "ಮೊದಲ ಹೆಜ್ಜೆಯಾಗಿ ಎಲ್ಲ ಸಿಬಿಎಸ್ ಇ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಹಿಂದಿ ಕಡ್ಡಾಯ ಮಾಡಬೇಕು" ಎನ್ನಲಾಗಿದೆ. ಭಾರತದಲ್ಲಿ 18,546 ಹಾಗೂ ಇತರ 25 ದೇಶಗಳಲ್ಲಿ 210 ಸಿಬಿಎಸ್ ಇ ಶಾಲೆಗಳಿವೆ.[ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸ್ಟಾಲಿನ್]
"ಮೊದಲಿಗೆ ಕೇಂದ್ರ ಸರಕಾರ ಹೆದ್ದಾರಿಗಳ ಮೈಲುಗಲ್ಲುಗಳ ಮೇಲೆ ಹಾಗೂ ಪತ್ರಿಕಾ ಜಾಹೀರಾತುಗಳಲ್ಲಿ ಹಿಂದಿ ತಂದಿತು. ಶಿಕ್ಷಕರ ದಿನವನ್ನು 'ಗುರು ಪೂರ್ಣಿಮಾ' ಎಂದಿತು. ಮತ್ತೊಂದು ಹಿಂದಿ ವಿರೋಧಿ ಚಳವಳಿಗೆ ಬೀಜ ಬಿತ್ತಬೇಡಿ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದೇನೆ" ಎಂದು ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಕೇಂದ್ರ ಸರಕಾರದ ತೀರ್ಮಾನಕ್ಕೆ ಸವಾಲೆಸೆಯುವಂತೆ ಕೇರಳದಲ್ಲಿ ಏಪ್ರಿಲ್ 11ರಂದು ಸುಗ್ರೀವಾಜ್ಞೆಯನ್ನೇ ಹೊರಡಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೆ ಮಲಯಾಳಂ ಕಲಿಸುವುದು ಕಡ್ಡಾಯ ಮಾಡಲಾಗಿದೆ. ಇದೀಗ ಸಿಬಿಎಸ್ ಇ ಶಾಲೆಗಳು ಇಂಗ್ಲಿಷ್ ಸೇರಿದಂತೆ ಮೂರು ಭಾಷೆಯನ್ನು ಕಲಿಸುವುದಕ್ಕೆ ಪಠ್ಯ ಸಿದ್ಧಪಡಿಸಿಕೊಳ್ಳಬೇಕು.[ರೈಲ್ವೆ ಟಿಕೆಟ್ ಕಾಯ್ದಿರಿಸಲು ಕನ್ನಡದಲ್ಲಿ ಅರ್ಜಿ ಏಕಿಲ್ಲ?]
ಉತ್ತರ ಭಾರತೀಯರು ದಕ್ಷಿಣದ ಯಾವುದಾದರೂ ಒಂದು ಭಾಷೆ ಕಲಿಯುವುದಕ್ಕೆ ಕೂಡ ಪ್ರಯತ್ನಿಸುವುದಿಲ್ಲ. ಅಂಥದರಲ್ಲಿ ಮಕ್ಕಳನ್ನು ಒಂದು ನಿರ್ದಿಷ್ಟ ಭಾಷೆ ಕಲಿಯಲು ಏಕೆ ಒತ್ತಾಯಿಸಬೇಕು ಎಂದು ತೆಲಂಗಾಣ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.












Click it and Unblock the Notifications