ನೈಟ್ ಕರ್ಫ್ಯೂ ಗೊಂದಲಕ್ಕೆ ಟ್ವಿಸ್ಟ್: ಅದು ರಾಜಕೀಯ ನಿರ್ಧಾರವಾಗಿತ್ತಾ?
ಬೆಂಗಳೂರು, ಡಿ. 25: ನೈಟ್ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ತೀವ್ರ ಲೇವಡಿಗೆ ಗುರಿಯಾಗಿದೆ. ಜೊತೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂನಿಂದ ಹಿಂದೆ ಸರಿದಿರುವುದು ಆರೋಗ್ಯ ಇಲಾಖೆ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳ ಮೇಲೆ ಡಾ. ಸುಧಾಕರ್ ಅವರು ಹರಿಹಾಯ್ದಿದ್ದಾರೆ.
ನೈಟ್ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಾಗೂ ಸರ್ಕಾರದ ಮಧ್ಯೆ ದ್ವಂದ್ವ ಇದ್ದಿದ್ದು ಸರ್ಕಾರದ ನಿರ್ಧಾರಗಳಿಂದ ಬಹಿರಂಗವಾಗಿತ್ತು. ಡಿಸೆಂಬರ್ 22ರಂದು ಬೆಂಗಳೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ನೈಟ್ ಕರ್ಫ್ಯೂ ಹಾಕುವುದಿಲ್ಲ ಎಂದಿದ್ದರು. ಅದೇ ದಿನ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ನೈಟ್ ಕರ್ಫ್ಯೂ ಹೇರಲಾಗುವುದು ಎಂದಿದ್ದರು.
ಬಳಿಕ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಮಾಡಿದ್ದರು. ನೈಟ್ ಕರ್ಫ್ಯೂ ವಿಚಾರವಾಗಿ ಒಂದೇ ದಿನ ಮೂರು ಆದೇಶಗಳನ್ನು ಸರ್ಕಾರ ಮಾಡಿತ್ತು. ಕೊನೆಗೆ ರಾತ್ರಿ ಮಾತ್ರ ಕೊರೊನಾ ವೈರಸ್ ಓಡಾಡುತ್ತದೆಯಾ ಎಂದು ಸಾರ್ವಜನಿಕರೇ ಆರೋಗ್ಯ ಇಲಾಖೆಯನ್ನು ಲೇವಡಿ ಮಾಡಿದ್ದರು. ಜನಾಕ್ರೋಶಕ್ಕೆ ಮಣಿದಿದ್ದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಆದೇಶವನ್ನು ಹಿಂದಕ್ಕೆ ಪಡೆದಿತ್ತು. ಇದೇ ಈಗ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಆರೋಗ್ಯ ಸಚಿವರು ಗರಂ!
ನೈಟ್ ಕರ್ಫ್ಯೂವನ್ನು ಹಿಂದಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಏನು ಹೇಳುತ್ತಿವೆ ಎಂಬುದನ್ನು ನೋಡಿದ್ದೇನೆ. ನಿನ್ನೆ ರಾತ್ರಿ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ದಸರಾ, ದೀಪಾವಳಿ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಿದ್ದೇವೆ. ಮಾಧ್ಯಮಗಳೂ ಹೊಸ ಆಚರಣೆ ಬಹಳ ಮುಖ್ಯ ಅಂತ ಹೇಳ್ತಾಯಿವೆ. ಯುವಕರು ಹೊಸ ಆಚರಣೆ ಆಚರಣೆ ಮಾಡಿ, ಮೋಜು ಮಾಸ್ತಿ ಮಾಡಬೇಕು ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಮುಂದೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ವಿರೋಧ ಪಕ್ಷದವರೇ ಹೊಣೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ತೀರ್ಮಾನವಲ್ಲ!
ನಾವು ಅವಿವೇಕತನದಿಂದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಂಗ್ಲೆಂಡ್, ಜರ್ಮನಿ ದೇಶಗಳಲ್ಲಿ ಮತ್ತೆ ಲಾಕ್ಡೌನ್ ಮಾಡಿದ್ದಾರೆ. ಅವರಿಗೆ ಬುದ್ದಿ ಇಲ್ಲವಾ? ಎಲ್ಲವೂ ಯೋಚನೆ ಮಾಡಿಯೇ ನಿರ್ಧಾರ ಮಾಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಅನುಭವ ಇರುವ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ರಾಜಕೀಯ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಡಾ. ಸುಧಾಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹತ್ತು ಜನರಲ್ಲಿ ಪಾಸಿಟಿವ್!
ಇಂಗ್ಲೆಂಡ್ನಿಂದ ರಾಜ್ಯಕ್ಕೆ ಬಂದಿರುವ ಹತ್ತು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಹತ್ತೂ ಜನರಲ್ಲಿ ರೂಪಾಂತರಿ ಕೊರೊನಾ ವೈರಸ್ ಇದೆಯಾ ಎಂಬುದು ಗೊತ್ತಾಗಲು ಜೆನೆಟಿಕ್ ಪರೀಕ್ಷೆ ಮಾಡಬೇಕು. ಜೆನೆಟಿಕ್ ಪರೀಕ್ಷೆ ಮಾಡಲು ಎರಡರಿಂದ ಮೂರು ದಿನಗಳ ಕಾಲಾವಕಾಶ ಬೇಕು. ಹೀಗಾಗಿ ಇನ್ನೆರಡು ಮೂರು ದಿನಗಳಲ್ಲಿ ರೂಪಾಂತರಿ ಕೊರೋನಾ ರಾಜ್ಯಕ್ಕೆ ಎಂಟ್ರಿ ಆಗಿದೆಯೇ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
Recommended Video
ಬೇಲ್ ಮೇಲೆ ಹೊರಗಿದ್ದವರು
ಸಂಸದ ಡಿ.ಕೆ. ಸುರೇಶ್ ಅವರ ಮೇಲೆ ಹರಿಹಾಯ್ದಿರುವ ಆರೋಗ್ಯ ಸಚಿವರು, ಡಿ.ಕೆ. ಸುರೇಶ್ ಅವರು ಸರ್ಟಿಫಿಕೇಟ್ ನನಗೆ ಬೇಕಾಗಿದೆ. ಅವರು ಕೊಡುವ ಸರ್ಟಿಫಿಕೇಟ್ಗಳನ್ನು ಒಂದೊಂದಾಗಿ ತಗೆದಿಟ್ಟುಕೊಳ್ಳುತ್ತೇನೆ. ಮುಂದೆ ಆ ಸರ್ಟಿಫಿಕೇಟ್ಗಳು ಚಿಕ್ಕಬಳ್ಳಾಪುರದಲ್ಲಿ ಗೆಲ್ಲಲು ನನಗೆ ಬೇಕಾಗುತ್ತವೆ. ಯಾರು ಬೇಲ್ ಮೇಲೆ ಹೊರಗಿದ್ದಾರಲ್ಲ? ಅವರ ಸರ್ಟಿಫಿಕೇಟ್ ನನಗೆ ಬೇಕಾಗಿದೆ. ಮೋಜು ಮಸ್ತಿ ಭ್ರಷ್ಟಾಚಾರದ ಎಲ್ಲವನ್ನೂ ಹೊತ್ತುಕೊಂಡು ಯಾರು ಬೇಲ್ ಮೇಲೆ ಹೊರಗೆ ಇದ್ದಾರೆ ಅಂತ ಇಡೀ ರಾಜ್ಯದ ಜನರಿಗೆ ಗೊತ್ತು, ದೇಶದ ಜನಕ್ಕೆ ಗೊತ್ತು ಎಂದು ಸುರೇಶ್ ಅವರ ಮೇಲೆ ಸುಧಾಕರ್ ಹರಿಹಾಯ್ದಿದ್ದಾರೆ.