ತುಟ್ಟಿಭತ್ಯೆ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಾಯ
ಬೆಂಗಳೂರು, ಸೆ 18: ಕರ್ನಾಟಕ ರಾಜ್ಯ ಸರಕಾರೀ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ (DA) ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.
ಸೋಮವಾರ, ರಾಜ್ಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ಹಣಕಾಸು) ಐಎಸ್ಎನ್ ಪ್ರಸಾದ್ ಅವರಿಗೆ ಸಂಘದ ಅಧ್ಯಕ್ಷ ಬಿ ಪಿ ಮಂಜೇಗೌಡ ಮನವಿಯನ್ನು ಸಲ್ಲಿಸಿ, ವಿಜಯದಶಮಿ ಕೊಡುಗೆಯಾಗಿ ಜುಲೈ 1, 2017ರಿಂದ ಪೂರ್ವಾನ್ವಯವಾಗುವಂತೆ ಶೇ.3ರಷ್ಟು ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡಿ ಆದೇಶಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.
SC/ST ಬಡ್ತಿ ಮೀಸಲಾತಿ: ಸುಪ್ರೀಂ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆಗೆ ಒತ್ತಾಯ
ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಮಂಜೂರು ಮಾಡುವ ದಿನದಿಂದಲೇ ರಾಜ್ಯ ಸರ್ಕಾರಿ ನೌಕರರಿಗೂ ಹೆಚ್ಚುವರಿ ತುಟ್ಟಿಭತ್ಯೆ ನೀಡುವ ಪದ್ದತಿಯಿದೆ. ಆದುದರಿಂದ ಸರಕಾರ ನಮ್ಮ ಮನವಿಯನ್ನು ಪರಿಶೀಲಿಸಬೇಕೆಂದು ಮಂಜೇಗೌಡ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಅನ್ವಯ ತುಟ್ಟಿಭತ್ಯೆಯನ್ನು ಮೂಲವೇತನಕ್ಕೆ ವಿಲೀನಗೊಳಿಸಿದ್ದು ತುಟ್ಟಿಭತ್ಯೆಯ ಹೊಸ ಸೂತ್ರವನ್ನು ಅನುಷ್ಠಾನಗೊಳಿಸಿದೆ. ಆದರೆ ರಾಜ್ಯ ಸರ್ಕಾರವು ನೌಕರರ ಮೂಲವೇತನವನ್ನು ಪರಿಷ್ಕರಿಸದೇ ಇರುವುದರಿಂದ ಶೇ.3ರಷ್ಟು ತುಟ್ಟಿಭತ್ಯೆ ಪಡೆಯಲು ರಾಜ್ಯ ಸರ್ಕಾರಿ ನೌಕರರು ಅರ್ಹರಾಗಿರುತ್ತಾರೆ.
55 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಏರಿಕೆ
ಆದ್ದರಿಂದ ವಿಜಯದಶಮಿ ಕೊಡುಗೆಯಾಗಿ ಶೇ.3ರಷ್ಟು ತುಟ್ಟಿಭತ್ಯೆ ನಗದುರೂಪದಲ್ಲಿ ಬಿಡುಗಡೆ ಮಾಡಿ ಆದೇಶಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಮಂಜೇಗೌಡ ಅವರು ಒತ್ತಾಯಿಸಿದ್ದಾರೆ.