ಹನಿಮೂನಿಗೆ ಅಪ್ಪ-ಅಮ್ಮನ ಕರ್ಕೊಂಡು ಬಂದ ಪತಿ, ಪ್ರೈವೇಸಿ ಇಲ್ಲವೆಂದು ಡಿವೋರ್ಸ್ಗೆ ಅಪ್ಲೈ ಮಾಡಿದ ಪತ್ನಿ
ಹನಿಮೂನ್ ಎಂದರೆ ಹೊಸದಾಗಿ ಮದುವೆಯಾದ ದಂಪತಿಗಳು ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಮ್ಮ ವೈವಾಹಿಕ ಜೀವನದ ಆರಂಭವನ್ನು ಸಂಭ್ರಮಿಸಲು ಕೈಗೊಳ್ಳುವ ಒಂದು ರೋಮ್ಯಾಂಟಿಕ್ ಪ್ರವಾಸವಾಗಿದೆ. ಆದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಲುವಾಗಿ ಏರ್ಪಡಿಸಿ ಪ್ರವಾಸವೇ ಇದೀಗ ಒಬ್ಬರನ್ನೊಬ್ಬರು ದೂರ ತಳ್ಳುವಂತೆ ಮಾಡಿದೆ. ಮದುವೆಯಾಗಿ ಹೊಸ ಜೀವನದ ಕನಸು ಹೊತ್ತು ಮುಂದುವರಿಯಬೇಕಾದ ನವ ಜೋಡಿ ಇದೀಗ ಒಬ್ಬರಿಗೊಬ್ಬರು ಬೆರಳು ತೋರಿಸುತ್ತಾ ಸಂಸಾರ ಮುರಿದು ಬೀಳುವ ಹಂತಕ್ಕೆ ಬಂದು ನಿಂತಿದೆ. ಅಷ್ಟಕ್ಕೂ ಇಲ್ಲಿ ಯಾರು ಸರಿ ಯಾರು ತಪ್ಪು ಎನದನುವ ನಿರ್ಧಾರಕ್ಕೆ ಬರುವುದು ಕೂಡಾ ಸ್ವಲ್ಪ ಕಷ್ಟವೇ. ಯಾಕೆಂದರೆ ಈ ಕೇಸ್ ಸ್ವಲ್ಪ ವಿಚಿತ್ರವಾಗಿದೆ.
ಹೌದು ಇಲ್ಲಿ ದಾಂಪತ್ಯ ಜೀವನದ ಆರಂಭವನ್ನು ಗುರುತಿಸುವ ನಿರೀಕ್ಷೆಯಿದ್ದ ಮಧುಚಂದ್ರವು ವೈವಾಹಿಕ ವಿವಾದದ ಕೇಂದ್ರಬಿಂದುವಾಗಿದೆ. ಹನಿಮೂನೇ ಇಲ್ಲಿ ಡಿವೋರ್ಸ್ಗೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ನವವಿವಾಹಿತ ಮಹಿಳೆಯೊಬ್ಬರು ಪತಿಯಿಂದ ವಿಚ್ಛೇದನೆ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಮ್ಮ ಹನಿಮೂನ್ ಪ್ಲಾನ್ನಲ್ಲಿ ಪತಿ ತನ್ನ ಹೆತ್ತವರು, ಸಹೋದರಿ ಮತ್ತು ಸಹೋದರನನ್ನು ಸೇರಿಸಿಕೊಂಡಿದ್ದಾರೆ ಎನ್ನುವುದೇ ಇಲ್ಲಿ ಸಮಸ್ಯೆಯ ಮೂಲ. ಹನಿಮೂನ್ ಪ್ಯಾಕೇಜ್ನಲ್ಲಿ ಇಡೀ ಕುಟುಂಬವೇ ಸೇರಿಕೊಂಡಿದೆ ಎನ್ನುವ ವಿಚಾರವೇ ಇಲ್ಲಿ ವಧುವಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ವರನಿಗೆ ಈಗಷ್ಟೇ ಮದುವೆಯಾಗಿ ಬಾಳ ಪ್ರವೇಶಿಸಿದ ಪತ್ನಿಯಂತೆಯೇ ತನ್ನ ತಂದೆ, ತಾಯಿ, ತಮ್ಮ, ತಂಗಿಯೂ ಮುಖ್ಯ. ಇಬ್ಬರ ನಡುವೆ ಮನಸ್ತಾಪ ಮೂಡಿದ್ದೇ ಇಲ್ಲಿಂದ. ಇದು ನವ ವಿವಾಹಿತ ಜೋಡಿಯ ಖಾಸಗಿ ಪ್ರವಾಸ ಎಂದು ಪತ್ನಿ ಭಾವಿಸಿದ್ದಳು. ಆದರೆ ಇದು ಫ್ಯಾಮಿಲಿ ಟ್ರಿಪ್ ಆಗಿ ಮಾರ್ಪಾಡಾಗಿರುವುದು ಆಕೆಯ ಅಸಮಾಧಾನಕ್ಕೆ ಕಾರಣ.

ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ಹಂಚಿಕೊಂಡ ವಿವರಗಳ ಪ್ರಕಾರ, ಮದುವೆಯ ಆರಂಭಿಕ ದಿನಗಳಲ್ಲಿ ತನ್ನ ಪತಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವ ಪ್ರಮುಖ ಅವಕಾಶದಿಂದ ವಂಚಿತಳಾಗಿದ್ದೇನೆ ಎಂದು ಮಹಿಳೆ ತನ್ನ ಅಳಲು ತೋಡಿಕೊಂಡಿದ್ದಾಳೆ.ಪತಿ ಮತ್ತು ಪತ್ನಿ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಬಲವಾದ ಸಂಬಂಧವನ್ನು ಬೆಳೆಸಲು ಹನಿಮೂನ್ ಸಹಾಯ ಮಾಡುತ್ತದೆ . ಆದರೆ ಕುಟುಂಬ ಸದಸ್ಯರು ಪ್ರವಾಸದ ಉದ್ದಕ್ಕೂ ಅವರೊಂದಿಗೆ ಇರುವುದರಿಂದ, ವೈಯಕ್ತಿಕ ಸಮಯ ಕಳೆಯಲು ಅವಕಾಶ ಇರುವುದಿಲ್ಲ ಎನ್ನುವ ವಾದ ಪತ್ನಿಯದ್ದು.
ಹನಿಮೂನ್ ವಿಚಾರದಲ್ಲಿ ಮೂಡಿದ ನಿರಾಶೆ ಕ್ರಮೇಣ ಪುನರಾವರ್ತಿತ ವಾದಗಳಾಗಿ ಬದಲಾಯಿತು. ಅಂತಿಮವಾಗಿ ದಂಪತಿಗಳು ವೃತ್ತಿಪರ ಸಮಾಲೋಚನೆ ಪಡೆಯುವಂತೆ ಸೂಚಿಸಲಾಯಿತು. ಆದರೆ, ಪತಿ ತಾನು ಮಾಡಿರುವ ಕೆಲಸವನ್ನು ಸಮರ್ಥಿಸಿಕೊಂಡಿದ್ದು, ತನ್ನ ಕುಟುಂಬವನ್ನು ಕರೆದುಕೊಂಡು ಹೋಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾನೆ.
ಸಲಹೆಗಾರರ ಪ್ರಕಾರ, ಎಲ್ಲರೂ ಪ್ರವಾಸವನ್ನು ಆನಂದಿಸಬೇಕು ಎನ್ನುವುದು ಪತಿಯ ಬಯಕೆಯಾಗಿತ್ತು. ಇಲ್ಲಿ ಅವರ ನಿರ್ಧಾರವು ತಪ್ಪಿಗಿಂತ ಕೌಟುಂಬಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆದರೆ ನಿರೀಕ್ಷೆಗಳಲ್ಲಿನ ಈ ವ್ಯತ್ಯಾಸವು ದಂಪತಿ ನಡುವಿನ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ.ಇಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳಿಗೆ ಬದ್ದರಾಗಿ ನಿಂತಿದ್ದಾರೆ.
ಈ ವಿಷಯವು ಈಗಾಗಲೇ ಮೂರು ಸಲಹಾ ಅವಧಿಗಳನ್ನು ದಾಟಿದೆ. ಆದರೆ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕೌನ್ಸಿಲರ್ಗಳು ಇತ್ತೀಚೆಗೆ ಮತ್ತೊಂದು ಸಭೆ ನಡೆಸಿ, ಎರಡೂ ಕಡೆಯವರು ತಮ್ಮ ಸಂಬಂಧದ ಭವಿಷ್ಯದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹಲವಾರು ಬಾರಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ, ರಾಜಿ ಇನ್ನೂ ಹೊರಹೊಮ್ಮಿಲ್ಲ.
ಮಹಿಳೆ ಮೀರತ್ ಜಿಲ್ಲೆಯ ರಾಮರಾಜ್ ಪ್ರದೇಶದವರಾಗಿದ್ದರೆ, ಪುರುಷ ದೆಹಲಿಯ ಪಟೇಲ್ ನಗರದವರು. ಮಹಿಳೆ ಪದವೀಧರೆಯಾಗಿದ್ದು, ಪತಿ ಸಿಂಗಾಪುರದಲ್ಲಿ ಹಾಸ್ಪಟಾಲಿಟಿ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದಾರೆ. ಅವರ ವಿವಾಹವನ್ನು ವೈವಾಹಿಕ ವೆಬ್ಸೈಟ್ ಮೂಲಕ ಏರ್ಪಡಿಸಲಾಗಿದೆ.
ಹೊಸ ಭರವಸೆಯ ಅಧ್ಯಾಯವಾಗಿ ಆರಂಭವಾದದ್ದು ಈಗ ಹೊಂದಾಣಿಕೆಯ ಪರೀಕ್ಷೆಯಾಗಿ ಮಾರ್ಪಟ್ಟಿದೆ.ವಿಚ್ಛೇದನ ಪ್ರಕ್ರಿಯೆಗಳತ್ತ ಸಾಗುವ ಮೊದಲು ಸಂಬಂಧವನ್ನು ಉಳಿಸಲು ಸಲಹೆಗಾರರು ಅಂತಿಮ ಪ್ರಯತ್ನವನ್ನು ಮಾಡುತ್ತಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications