ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಕ್ರಿಕೆಟ್ ದೇವರ 'ಆ' ಮಹತ್ವದ ಸಲಹೆ ಸ್ಮರಿಸಿದ ಜೆಮಿಮಾ ರಾಡ್ರಿಗಸ್
Jemimah Rodrigues: ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿ ಶುಕ್ರವಾರ (ಜೂನ್ 12)ದಿಂದ ಆರಂಭವಾಗಲಿದೆ. ಟೀಮ್ ಇಂಡಿಯಾ ಜೂನ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಕಳೆದ ಬಾರಿ ಭಾರತ ಫೈನಲ್ ತಲುಪಲು ಪ್ರಮುಖ ಕಾರಣಕರ್ತೆಯಾಗಿದ್ದ ಸ್ಟಾರ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಸಚಿನ್ ತೆಂಡೂಲ್ಕರ್ ನೀಡಿದ ಮಹತ್ವದ ಸಲಹೆಯನ್ನು ನೆನೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯಾವುದೇ ಒಬ್ಬ ಕ್ರೀಡಾಪಟುವಿನ ವೃತ್ತಿಜೀವನದಲ್ಲಿ ಅತ್ಯುನ್ನತ ಯಶಸ್ಸು ಸಿಕ್ಕಾಗ ಬೀಗುವುದು ಸಹಜ. ಆದರೆ ಆ ಯಶಸ್ಸಿನ ಗುಂಗಲ್ಲಿ ತೇಲಾಡದೆ ಗುರಿ ಕಡೆಗೆ ಗಮನಹರಿಸಲು ಸಚಿನ್ ತೆಂಡೂಲ್ಕರ್ ನೀಡಿದ ಒಂದು ಅತ್ಯಮೂಲ್ಯ ಸಂದೇಶ ತಮಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಜೆಮಿಮಾ ರಾಡ್ರಿಗಸ್ ನೆನಪಿಸಿಕೊಂಡಿದ್ದಾರೆ. ಇದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಕಳೆದ ವರ್ಷ ಮಿಂಚಿದ್ದ ಜೆಮಿಮಾ
ಕಳೆದ ವರ್ಷ 2025ರಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಜೆಮಿಮಾ ರಾಡ್ರಿಗಸ್ ಅಜೇಯ 127 ರನ್ಗಳ ಅದ್ಭುತ ಇನಿಂಗ್ಸ್ ಆಡಿದ್ದರು. ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದಿಂದಾಗಿ ಭಾರತ ತಂಡವು ಆಸೀಸ್ ಪಡೆಯನ್ನು ಸೋಲಿಸಿ ಫೈನಲ್ ತಲುಪಿತ್ತು. ಈ ಐತಿಹಾಸಿಕ ಜಯದ ನಂತರ ಜೆಮಿಮಾ ಅವರ ಮೇಲೆ ದೇಶಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತ್ತು. ಇದರಿಂದ ಅವರ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಅದೇ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ದೂರದೃಷ್ಟಿಯ ನಡೆ ಜೆಮಿಮಾ ಅವರಿಗೆ ನೆರವಾಯಿತು. ಈ ಬಗ್ಗೆ ಸ್ವತಃ ಜೆಮಿಯಾ ಅವರೇ ಹೇಳಿಕೊಂಡಿದ್ದಾರೆ.
ಕೋಚ್ ಮೂಲಕ ಕ್ರಿಕೆಟ್ ದೇವರ ಸಂದೇಶ
ಜಿಯೋ ಹಾಟ್ಸ್ಟಾರ್ನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಮಿಮಾ, ಆಸ್ಟ್ರೇಲಿಯಾ ವಿರುದ್ಧದ ದೊಡ್ಡ ಗೆಲುವಿನ ನಂತರ ತಮಗೆ ಎದುರಾದ ಮಾನಸಿಕ ಸ್ಥಿತಿಯ ಸವಾಲುಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ಸೆಮಿಫೈನಲ್ ಮುಗಿದ ಮರುದಿನವೇ ಸಚಿನ್ ಸರ್ ನನ್ನ ಕೋಚ್ ಪ್ರಶಾಂತ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು. ಕಳೆದ ಒಂದೆರಡು ದಿನಗಳಿಂದ ನನ್ನ ಸುತ್ತ ನಡೆಯುತ್ತಿರುವ ಸಂಭ್ರಮ, ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಹರ್ಷ ಮತ್ತು ನನ್ನ ಇನಿಂಗ್ಸ್ನ ಮೇಲಿನ ಅತಿಯಾದ ಪ್ರಶಂಸೆಗಳು ನನ್ನ ಮೇಲೆ ತೀವ್ರ ಮಾನಸಿಕ ಪ್ರಭಾವ ಬೀರಿರಬಹುದು ಎಂಬುದು ಸಚಿನ್ ಸರ್ಗೆ ಅರ್ಥವಾಗಿತ್ತು,' ಎಂದು ಹೇಳಿದ್ದಾರೆ.
'ಆಗ ಸಚಿನ್ ತೆಂಡೂಲ್ಕರ್ ತಮ್ಮ ಕೋಚ್ ಮೂಲಕ ನನಗೆ ಮಹತ್ವದ ಸಂದೇಶವನ್ನು ರವಾನಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಗಿದಿದೆ. ಆ ಸಂಭ್ರಮವನ್ನು ಈಗಲೇ ಪಕ್ಕಕ್ಕಿಟ್ಟುಬಿಡು. ಫೈನಲ್ ಪಂದ್ಯಕ್ಕಾಗಿ ಕ್ರೀಸ್ಗೆ ಇಳಿಯುವಾಗ ಮತ್ತೊಮ್ಮೆ ಶೂನ್ಯದಿಂದ ಹೊಸದಾಗಿ ಆರಂಭಿಸು,' ಎಂದು ಸಚಿನ್ ತೆಂಡೂಲ್ಕರ್ ಅವರು ತಿಳಿಸಿದ್ದರು ಅಂತಾ ಹೇಳಿಕೊಂಡಿದ್ದಾರೆ.
'ಆಟದ ಶೈಲಿ ಮತ್ತು ಮನಸ್ಥಿತಿ ಬದಲಿಸಿದ ಸಚಿನ್ ಸಲಹೆ'
'ಸಚಿನ್ ಸರ್ ಅವರ ಆ ಒಂದು ಸಂದೇಶ ನನ್ನ ಮನಸ್ಸನ್ನು ಹಗುರವಾಗುವಂತೆ ಸಹಾಯ ಮಾಡಿತು. ಹಿಂದೆ ನೀವು ಎಷ್ಟೇ ರನ್ ಗಳಿಸಿದ್ದರೂ ಅದು ಮುಂದಿನ ಪಂದ್ಯದಲ್ಲಿ ಗೆಲುವು ತಂದುಕೊಡುವುದಿಲ್ಲ ಎಂಬ ಕಟು ಸತ್ಯ ನನಗೆ ಅರ್ಥವಾಯಿತು. ಪ್ರತಿ ಪಂದ್ಯವನ್ನೂ ಹೊಸ ಆರಂಭದಂತೆ ನೋಡಬೇಕು ಎಂಬ ಸಲಹೆ ಫೈನಲ್ ಪಂದ್ಯಕ್ಕೂ ಮುನ್ನ ನನ್ನ ಗೊಂದಲಗಳನ್ನೆಲ್ಲ ನಿವಾರಿಸಿ ಸ್ಪಷ್ಟತೆ ನೀಡಿತು,' ಎಂದು ಜೆಮಿಮಾ ಸ್ಮರಿಸಿದ್ದಾರೆ.
ಫೈನಲ್ನಲ್ಲಿ ಮಿಂಚಿದ ಶಫಾಲಿ ವರ್ಮಾ
ಸೆಮಿಫೈನಲ್ನಲ್ಲಿ ಜೆಮಿಮಾ ಹೀರೋ ಆಗಿ ಮಿಂಚಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಆಕ್ರಮಣಕಾರಿ ಆಟ ಆಡಿ ಗಮನ ಸೆಳೆದಿದ್ದರು. ಶಫಾಲಿ ಅಬ್ಬರದ ಬ್ಯಾಟಿಂಗ್ ಮಾಡಿ 87 ರನ್ ಗಳಿಸಿದ್ದಲ್ಲದೆ, 2 ಪ್ರಮುಖ ವಿಕೆಟ್ ಕಬಳಿಸಿ ಭಾರತ ಚೊಚ್ಚಲ ವಿಶ್ವಕಪ್ ಮುಕುಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಫೈನಲ್ಗೂ ಮುನ್ನ ತಮಗಿದ್ದ ಒತ್ತಡದ ಬಗ್ಗೆ ಮಾತನಾಡಿದ ಶಫಾಲಿ ವರ್ಮಾ, 'ಪಂದ್ಯಕ್ಕೂ ಮುನ್ನ ನನ್ನ ತಂದೆ ಕಳುಹಿಸಿದ್ದ ವಾಯ್ಸ್ ಮೆಸೇಜ್ ನನಗೆ ಆನೆಬಲ ತಂದಿತು. ಮೈದಾನದಲ್ಲಿ ನಿನ್ನ ಅತ್ಯುತ್ತಮ ಪ್ರದರ್ಶನ ನೀಡು, ಭಾರತ ವಿಶ್ವಕಪ್ ಗೆಲ್ಲಲು ಶಫಾಲಿ ವರ್ಮಾ ಕಾರಣರಾದರು ಎಂಬುದು ಇತಿಹಾಸದ ಪುಟಗಳಲ್ಲಿ ಬರೆಯುವಂತಾಗಬೇಕು ಎಂದು ಅವರು ಹೇಳಿದ್ದರು. ಆ ಮಾತುಗಳು ನನ್ನಲ್ಲಿ ಕಿಚ್ಚು ಹೊತ್ತಿಸಿದವು,' ಎಂದು ಹೇಳಿದ್ದಾರೆ. ಪ್ರಸ್ತುತ ಏಕದಿನ ವಿಶ್ವ ಚಾಂಪಿಯನ್ ಆಗಿರುವ ಭಾರತೀಯ ಮಹಿಳಾ ತಂಡವು ಮುಂಬರುವ ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಕ್ಷಣಕ್ಕಾಗಿ ಬರೀ ಭಾರತ ಅಷ್ಟೇ ಅಲ್ಲದೆ, ವಿಶ್ವವೇ ಕಾತರದಿಂದ ಕಾಯುತ್ತಿದೆ.












Click it and Unblock the Notifications