ಕ್ರೈಂ ರೌಂಡಪ್: ದೇವರ ಪಾದ ಸೇರಿದ ಭಕ್ತರು
ಬೆಂಗಳೂರು, ಅ.8: ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದ ಭಕ್ತರು ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾಗಿ ಐವರು ದೇವರ ಪಾದ ಸೇರಿದರೆ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬೇವೂರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಚೆಲ್ಲಾಪುರ ಗ್ರಾಮದ ಮಲ್ಲಪ್ಪ ಸೋಮಣ್ಣ ಎಂಬುವರು ಸುಮಾರು 40 ಜನರನ್ನು ಟ್ರ್ಯಾಕ್ಟರ್ ನಲ್ಲಿ ಹುಲಿಗೆಮ್ಮ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರು. ರಾತ್ರಿ 10.30ಕ್ಕೆ ಗ್ರಾಮ ಬಿಟ್ಟ ಟ್ರ್ಯಾಕ್ಟರ್ ನಸುಕಿನ ವೇಳೆ 3 ಗಂಟೆಗೆ ಮಾರ್ಗ ಮಧ್ಯೆ ಡೀಸೆಲ್ ತುಂಬಿಸಿಕೊಂಡಿದೆ. ನಂತರ ಪ್ರಯಾಣ ಮುಂದುವರೆದಿದ್ದು, 4.45ರ ಸುಮಾರಿಗೆ ಯಲಬುರ್ಗದ ಗುನ್ನಾಳ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿ ಹೊಡೆದಿದೆ.
ಟ್ರ್ಯಾಕ್ಟರ್ ಪಲ್ಟಿಯಿಂದಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಅಪಘಾತದಲ್ಲಿ 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು(40 ಜನ) ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದು,ಹಾಗೂ ಚಾಲಕ ಅತಿವೇಗವಾಗಿ ಚಾಲನೆ ಮಾಡುತ್ತಿದ್ದರಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇವೂರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ
ಬೆಳಗಾವಿ
ಬೆಳಗಾವಿಯ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸ್ಪರ್ಶವಾಗಿದೆ. ಅವರನ್ನು ಬಚಾವ್ ಮಾಡಲು ಹೋದ ಇನ್ನಿಬ್ಬರಿಗೂ ವಿದ್ಯುತ್ ಹರಿದು ಸಾವನ್ನಪ್ಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಕ್ರೈಂ
ಶಿರಾಳಕೊಪ್ಪದ ಸರ್ಕಾರಿ ಹಿರಿಯ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಾಲಿನ ಪುಡಿ ಕಳ್ಳತನವಾಗಿದೆ.
ಶಿರಾಳಕೊಪ್ಪದ ಸರ್ಕಾರಿ ಹಿರಿಯ ಬಾಲಕಿಯರ ಪ್ರೌಢ ಶಾಲೆ ಬಾಗಿಲು ಮುರಿದು ಒಳಗೆ ಅಕ್ರಮ ಪ್ರವೇಶ ಮಾಡಿ, 60 ಹಾಲಿನ ಪುಡಿ ಪ್ಯಾಕೇಟ್, 50 ಕೆ.ಜಿ. ಬೇಳೆ, ಒಂದು ಯು.ಪಿ.ಎಸ್. ಬ್ಯಾಟರಿ, 5 ತೂಕದ ಬಟ್ಟುಗಳನ್ನು ಯಾರೋ ಕದ್ದಿದ್ದಾರೆ. ಇವುಗಳ ಮೌಲ್ಯ ಒಟ್ಟು 15,200/- ರು ಈ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವವರ ಈ ಬಗ್ಗೆ ಪಿರ್ಯಾದಿ ಆನಂದಸ್ವಾಮಿ, ಹಿರಿಯ ಸಹ-ಶಿಕ್ಷಕರು, ಸರ್ಕಾರಿ ಹಿರಿಯ ಬಾಲಕಿಯರ ಪ್ರೌಢ ಶಾಲೆ, ಶಿರಾಳಕೊಪ್ಪ ರವರು ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ, ಕೊಲೆ ಯತ್ನ, ಪ್ರಕರಣ
ಹಿರಿಯೂರು: ಪಂಚಾಯ್ತಿ ವತಿಯಿಂದ ಕಾಮಗಾರಿ ವಿಷಯಕ್ಕಾಗಿ ಒಂದು ಗುಂಪು ಸೇರಿಕೊಂಡು ಮಾರಕಾಸ್ತ್ರಗಳಿಂದ ಮೂವರು ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಸೂರಗೊಂಡನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಗ್ರಾಮದ ಪರಶುರಾಂ, ನಿಂಗರಾಜ, ಮುತ್ತುರಾಜ ಎಂಬುವವರು ನಾಟಕ ನೋಡಲು ಹೋಗಿದ್ದಾಗ ಅದೇ ಗ್ರಾಮದವರಾದ ಮಹೇಶ, ಪ್ರಕಾಶ, ಸುರೇಶ ಹಾಗೂ ಇತರೆ ಹನ್ನೆರಡು ಜನರು ಗುಂಪು ಕಟ್ಟಿಕೊಂಡು ಬಂದು ಕೈಗಳಲ್ಲಿ ಮಚ್ಚು, ಕೊಡಲಿ, ದೊಣ್ಣೆ ಹಿಡಿದುಕೊಂಡು ಬಂದು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ ಎಂದು ಹೇಳಿಕೆ ದೂರು ಇದ್ದ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
ಹಿರಿಯಡ್ಕ: ಉಡುಪಿ ತಾಲೂಕಿನ ಭೈರಂಪಳ್ಳಿ ಗ್ರಾಮದ ಪಾಲ್ ಜಡ್ಡು ನಿವಾಸಿ ಶಿವಣ್ಣ ಶೆಟ್ಟಿ (60) ಕಳೆದ 2 ವರ್ಷಗಳಿಂದ ವಿಪರೀತ ಮೊಣಗಂಟಿನ ನೋವಿನಿಂದ ಬಳಲುತ್ತಿದ್ದರು. ಅ.7 ರಂದು ಮನೆಯಲ್ಲಿ ಊಟ ಮಾಡಿ ತೋಟದ ಕಡೆಗೆ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಹೋದವರು ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಸಮೀಪ ಇರುವ ಆವರಣ ಇಲ್ಲದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಠಲ ಶೆಟ್ಟಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 22/13 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಲಾರಿ ಬೈಕ್ ಗೆ ಡಿಕ್ಕಿ ಬೈಕ್ ಸವಾರನ ಸಾವು
ದಿನಾಂಕ : 07-10-2013 ಮಧ್ಯಾಹ್ನ 12-30 ಗಂಟೆಗೆ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ನಾಗನಹಳ್ಳಿ ಗ್ರಾಮದ ಲೋಕೇಶ ತನ್ನ ಸ್ನೇಹಿತ ಶಶಿಕುಮಾರನ ಬಾಬ್ತು ಕೆಎ-09-ಇಕ್ಯೂ-4850 ರ ಪಲ್ಸರ್ ಬೈಕಿನಲ್ಲಿ ಕೆಲಸದ ನಿಮಿತ್ತ ಸಿಂಗಪಟ್ಟಣ ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಹಾಸನ ಹೊರವಲಯದ ಬೈಪಾಸ್ ಬಿ.ಎಂ ರಸ್ತೆ ರಿಲಾಯನ್ಸ್ ಪೆಟ್ರೋಲ್ ಬಂಕ್ ಮುಂಭಾಗ ಹೋಗುತ್ತಿದ್ದಾಗ ಕೆಎ-03-ಸಿ-2824 ಲಾರಿ ಚಾಲಕ ತನ್ನ ಲಾರಿಯನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಕೊಟ್ಟಿದೆ. ಲೋಕೇಶರನ್ನು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ, 22 ವರ್ಷ ರವರು ಮೃತಪಟ್ಟಿರುತ್ತಾರೆ ಶ್ರೀ ವಿಶ್ವನಾಥ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹೆಂಗಸು ಕಾಣೆ
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿರುತ್ತದೆ. ದಿನಾಂಕ: 30/09/2013 ರಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಮುಳಬಾಗಿಲು ತಾಲ್ಲೂಕು ಅನಗೊಂಡಹಳ್ಳಿ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ರವರ ಮಗಳಾದ ಮಮತ (20) ರವರು ಕೋಲಾರಿಗೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ. ಈ ಬಗ್ಗೆ ನಾರಾಯಣಸ್ವಾಮಿ ರವರು ದಿನಾಂಕ: 07/10/2013 ರಂದು ದೂರ ದಾಖಲು ಮಾಡಿರುತ್ತಾರೆ.