ಟೆರೆಸ್ ಗಾರ್ಡನ್ನಲ್ಲಿರುವ ಸಸ್ಯ ಬೇಸಿಗೆಯಲ್ಲಿ ಸಾಯುತ್ತಿವೆಯೇ? ಶಾಖದ ಹೊಡೆತದಿಂದ ಈ ಗಿಡಗಳ ರಕ್ಷಣೆ ಹೀಗಿರಲಿ
ಈ ಬಾರಿ ಬೇಸಿಗೆ ತಾಪಮಾನ ಮಿತಿ ಮೀರುತ್ತಿದೆ. ಬೆಳಗ್ಗೆಯೇ ಬಿಸಿಲ ಧಗೆ ಸಹಿಸುವುದು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಬಿಸಿಲು ನಿತ್ಯದ ಕೆಲಸವನ್ನೇ ಏರುಪೇರು ಮಾಡುತ್ತಿದೆ. ಮನೆಯೊಳಗೆ ಬಂದರೂ ಫ್ಯಾನ್, ಕೂಲರ್, ಎಸಿ ಇಲ್ಲದೆ ಇರುವುದು ಸಾಧ್ಯವೇ ಇಲ್ಲ. ಮನುಷ್ಯರ ಕತೆ ಇದಾದರೆ ಸಸ್ಯಗಳು ಕೂಡಾ ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿವೆ. ಸೂರ್ಯನ ಹೊಡೆತಕ್ಕೆ ಬಾಡುತ್ತಿವೆ.
ಬಿಸಿಲಿನ ಕಾರಣದಿಂದ ಸಸ್ಯಗಳ ಎಲೆಗಳು ಉದುರಿಹೋಗುತ್ತವೆ. ಮಣ್ಣು ಬೇಗನೆ ಒಣಗುತ್ತದೆ. ಸೊಂಪಾಗಿ ಬೆಳೆದಿರುವ ಸಸ್ಯಗಳ ಎಲೆಗಳು ಕೂಡಾ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದರರ್ಥ ಸಸ್ಯಕ್ಕೆ ಬೀಳುತ್ತಿರುವ ಶಾಖ ಮಿತಿ ಮೀರುತ್ತಿದೆ ಎಂದು. ಇನ್ನು ಶಾಖದ ಹೊಡೆತ ತೆಗೆದುಕೊಳ್ಳುವುದು ಆ ಸಸ್ಯಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಕೂಡಾ ಇಲ್ಲಿ ಗಮನಿಸಬೇಕು.ಮನೆಯ ತಾರಸಿಯ ಮೇಲಿರುವ ಗಿಡಗಳ ಸ್ಥಿತಿಯಂತೂ ಬೇಸಿಗೆಯಲ್ಲಿ ಹೇಳತೀರದು.

ಟೆರೆಸ್ ಗಾರ್ಡನ್ ಸಾಮಾನ್ಯ ತೋಟಗಳ ಮಿನಿ ಆವೃತ್ತಿಗಳಲ್ಲ. ಟೆರೆಸ್ನಲ್ಲಿ ಅವುಗಳನ್ನು ಪಾಟ್ಗಳಲ್ಲಿ ಹಾಕಿ ನೆಡಲಾಗುತ್ತದೆ. ನೆಲದ ಮಣ್ಣಿಗೆ ವಿರುದ್ಧವಾಗಿ ಪಾಟ್ ವೇಗವಾಗಿ ಬಿಸಿಯಾಗುತ್ತವೆ. ಹೀಗಾಗಿ ಮಣ್ಣು ತೇವಾಂಶವನ್ನು ತ್ವರಿತವಾಗಿ ಕಳೆದುಕೊಳ್ಳುತ್ತವೆ. ಬೇರಿಗೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗುವುದಿಲ್ಲ.
ಟೆರೆಸಿನ ಕಾಂಕ್ರೀಟ್ ಗೋಡೆಗಳು, ನೆಲಹಾಸುಗಳು ಮತ್ತು ರೇಲಿಂಗ್ಗಳಿಂದ ಪ್ರತಿಫಲಿಸುವ ಶಾಖ, ಬಿಸಿ, ಶುಷ್ಕ ಗಾಳಿ ಸೇರಿ ಟೆರೆಸಿನ ಶಾಖ ಹೆಚ್ಚುತ್ತದೆ. ಹೀಗಾಗಿ ಟೆರೆಸ್ ಗಾರ್ಡನ್ ನಲ್ಲಿರುವ ಸಸ್ಯಗಳು ಕೂಡಾ ಬಿಸಿಲ ಶಾಖಕ್ಕೆ ನಲುಗಿ ಹೋಗುತ್ತವೆ.
ಪಾಟ್ಗಳು ಅಕ್ಷರಶಃ ಬೇರುಗಳನ್ನು ಸುಡುತ್ತವೆ: ಬೇಸಿಗೆಯಲ್ಲಿ, ಪಾಟ್ ಬಿಸಿಯಾಗುವ ಮೂಲಕ ಮಣ್ಣಿನ ಉಷ್ಣತೆಯು ಬೇರುಗಳಿಗೆ ಅತಿಯಾಗಿ ಹಾನಿಯನ್ನು ಉಂಟು ಮಾಡುತ್ತವೆ. ಟೆರೆಸ್ ಗಾರ್ಡನ್ನಲ್ಲಿರುವ ಪಾಟ್ಗಳು, ಲೋಹದ ರಿಲೀಂಗ್ಗಳು, ಟ್ಯಾರೆಸಿನ ನೆಲ ಬಿಸಿಲಿನ ಶಾಖವನ್ನು ಹೀರಿಕೊಳ್ಳುತ್ತವೆ. ಮಾತ್ರವಲ್ಲ ಆ ಶಾಖವನ್ನು ಮತ್ತೆ ಸಸ್ಯಗಳಿಗೆ ಹೊರ ಸೂಸುತ್ತವೆ. ಹೀಗಾಗುವಾಗ ಚೆನ್ನಾಗಿ ನೀರು ಹಾಕಿದ ಸಸ್ಯಗಳು ಕೂಡಾ ಒಣಗಲು ಶುರುವಾಗುತ್ತವೆ. ಇದಕ್ಕೆ ಕಾರಣ ಸಸ್ಯದ ಬೇರುಗಳು ಅತಿಯಾಗಿ ಬಿಸಿಯಾಗುವುದು. ಬಿಸಿಯಾದ ಬೇರುಗಳು ತೇವಾಂಶವನ್ನು ಸರಿಯಾಗಿ ಹೀರಿಕೊಳ್ಳಲು ಹೆಣಗಾಡುತ್ತವೆ.
ಇದಕ್ಕೆ ಪರಿಹಾರ ಎಂದರೆ ತಿಳಿ ಬಣ್ಣದ ಅಥವಾ ಟೆರಾಕೋಟಾ ಪಾಟ್ಗಳನ್ನು ಬೇಸಿಗೆಯಲ್ಲಿ ಬಳಸುವುದು. ಈ ಪಾಟ್ಗಳು ಶಾಖವನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದಿಲ್ಲ. ಇವು ತಂಪಾದ ತಾಪಮಾನವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ,. ಪಾಟ್ಗಳನ್ನು ಬಿಸಿ ಮೇಲ್ಮೈಗಳಿಂದ ಸ್ವಲ್ಪ ಮೇಲಕ್ಕೆತ್ತುವುದರಿಂದ ನೇರ ಶಾಖ ವರ್ಗಾವಣೆಯಾಗುವುದನ್ನು ತಡೆಯಬಹುದು. ಒಣ ಎಲೆಗಳು ಅಥವಾ ಕೊಕೊಪೀಟ್ನಂತಹ ಮಲ್ಚ್ ಪದರವನ್ನು ಮಣ್ಣಿಗೆ ಸೇರಿಸುವುದರಿಂದ ಬೇರುಗಳನ್ನು ತೀವ್ರ ಶಾಖದಿಂದ ರಕ್ಷಿಸಬಹುದು.
ಹೆಚ್ಚು ಬಿಸಿಲು ಸಸ್ಯಗಳನ್ನು ಸುಡುತ್ತದೆ: ಸೂರ್ಯನ ಪ್ರಖರ ಬಿಸಿಲು ಸಸ್ಯದ ಎಲೆಗಳನ್ನು ಸುಟ್ಟುಹಾಕಬಹುದು.ತೇವಾಂಶವನ್ನು ಬಹಳ ಬೇಗನೆ ಹೀರಿಕೊಳ್ಳಬಹುದು. ಆಗ ಸಸ್ಯಕ್ಕೆ ನೀರಿನ ಕೊರತೆ ಉಂಟಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ಎಂದರೆ ಸಸ್ಯಗಳು ಮಧ್ಯಾಹ್ನದ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಬದಲು ಬೆಳಗಿನ ಸೂರ್ಯನ ಬೆಳಕನ್ನು ಪಡೆಯುವ ಸ್ಥಳದಲ್ಲಿ ಇರಿಸಿ. ಬಲೆಗಳು, ಬಿದಿರಿನ ಪರದೆಗಳ ಮೂಲಕ ಗಿಡಗಳಿಗೆ ನೆರಳು ಬೀಳುವಂತೆ ನೋಡಿಕೊಳ್ಳಿ. ರಿಲಿಂಗ್ಗಳಿಂದ ಸ್ವಲ್ಪ ದೂರ ಹೋದರೂ ಸಹ ಸಸ್ಯಗಳು ಎದುರಿಸುವ ಶಾಖದ ತೀವ್ರತೆಯನ್ನು ಕಡಿಮೆ ಮಾಡಬಹುದು.
ತಪ್ಪಾದ ರೀತಿಯಲ್ಲಿ ಸಸ್ಯಕ್ಕೆ ನೀರು ಹಾಕುವುದು: ಬೇಸಿಗೆಯಲ್ಲಿ ಸಸ್ಯಗಳಿಗೆ ನೀರು ಹಾಕುವುದೇ ಒಂದು ಸವಾಲು. ತುಂಬಾ ಕಡಿಮೆ ನೀರು ಹಾಕಿದರೆ ಎಲೆಗಳು ಒಣಗಿ, ಸುಲಭವಾಗಿ ಒಡೆಯುತ್ತವೆ. ಹೆಚ್ಚು ನೀರು ಹಾಕಿದರೆ ಬೇರುಗಳು ಉಸಿರುಗಟ್ಟಿ ಹಳದಿ ಬಣ್ಣಕ್ಕೆ ತಿರುಗಬಹುದು. ಗರಿಷ್ಠ ಶಾಖದ ಸಮಯದಲ್ಲಿ ನೀರು ಹಾಕುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುತ್ತದೆ. ಏಕೆಂದರೆ ನಾವು ಹಾಕುವ ನೀರಿನ ಪ್ರಮಾಣದಲ್ಲಿ ಹೆಚ್ಚಿನವು ಬೇರುಗಳನ್ನು ತಲುಪುವ ಮೊದಲೇ ಆವಿಯಾಗುತ್ತದೆ.
ಈ ಸಮಸ್ಯೆಗೆ ಪರಿಹಾರ ಏನು ಎಂದು ನೋಡುವುದಾದರೆ, ಗಿಡಗಳಿಗೆ ಬೆಳಗಿನ ಜಾವ ನೀರು ಹಾಕುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಬೆಳ್ಳಗ್ಗಿನ ವೇಳೆ ಗಿಡಗಳಿಗೆ ನೀರು ಹಾಕಿದರೆ ತಾಪಮಾನ ಹೆಚ್ಚಾಗುವ ಮೊದಲು ಸಸ್ಯಗಳು ತೇವಾಂಶವನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀರು ಹಾಕುವ ಮೊದಲು ಮಣ್ಣಿನ ತೇವಾಂಶದ ಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ. ಪಾಟ್ಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಕೂಡಾ ಇಲ್ಲಿ ಬಹಳ ಅಗತ್ಯವಾಗಿರುತ್ತದೆ.
ಶಾಖದ ಒತ್ತಡ: ನಿಮ್ಮ ಸಸ್ಯಗಳು ಮಧ್ಯಾಹ್ನದ ಸಮಯದಲ್ಲಿ ಒಣಗಿ ಸಂಜೆಯ ವೇಳೆಗೆ ಚೇತರಿಸಿಕೊಂಡರೆ, ಆ ಗಿಡ ಸಾಯುತ್ತಿಲ್ಲ ಎನ್ನುವುದು ಗಮನಾರ್ಹ.ಅವು ಶಾಖದ ಒತ್ತಡಕ್ಕೆ ಪ್ರತಿಕ್ರಿಯಿಸುತ್ತಿವೆ. ತಾಪಮಾನವು ಗರಿಷ್ಠವಾದಾಗ ನೀರಿನ ನಷ್ಟವನ್ನು ಕಡಿಮೆ ಮಾಡಲು ಸಸ್ಯಗಳು ಬಸಳಸುವ ನೈಸರ್ಗಿಕ ರಕ್ಷಣಾ ಕಾರ್ಯವಿಧಾನ ಇದಾಗಿದೆ.
ಸಸ್ಯಗಳು ಬಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ತಕ್ಷಣ ನೀರು ಹಾಕುವ ಬದಲು ಸಸ್ಯಗಳ ಮಾದರಿಗಳನ್ನು ಗಮನಿಸಿ. ಗರಿಷ್ಠ ಶಾಖದ ಸಮಯದಲ್ಲಿ ನೀರು ಹಾಕಲು ಹೋಗಲೇಬೇಡಿ. ಸಸ್ಯಕ್ಕೆ ಹೆಚ್ಚು ನೀರು ಹಾಕುವ ಬದಲು ಶಾಖದ ಪ್ರಮಾಣವನ್ನು ಕಡಿಮೆ ಮಾಡುವತ್ತ ಗಮನಹರಿಸಿ.
ನಗರ ಬಾಲ್ಕನಿಗಳು ಅಥವಾ ಟೆರೆಸ್ ಪ್ರತಿಫಲಿತ ಮೇಲ್ಮೈಗಳು, ಸೀಮಿತ ಗಾಳಿಯ ಹರಿವು ಮತ್ತು ಸೀಮಿತ ಸ್ಥಳಗಳಿಂದಾಗಿ ಶಾಖವನ್ನು ಹೆಚ್ಚಿಸುತ್ತವೆ. ಸಣ್ಣ ಪಾಟ್ಗಳು, ಒಂದಕ್ಕೊಂದು ಒತ್ತಿ ಕೊಂಡಿರುವಂತೆ ಇಡುವ ಪಾಟ್ಗಳು ಬೇರಿನ ಬೆಳವಣಿಗೆ ಮತ್ತು ಗಾಳಿಯ ಪ್ರಸರಣವನ್ನು ಮತ್ತಷ್ಟು ನಿರ್ಬಂಧಿಸುತ್ತವೆ. ಇದು ಸಸ್ಯಗಳಿಗೆ ತೊಂದರೆ ಉಂಟು ಮಾಡುತ್ತವೆ.
ಸಸ್ಯಗಳ ನಡುವೆ ಸೂಕ್ತ ಅಂತರ ಇಡುವ ಮೂಲಕ ಉತ್ತಮ ಗಾಳಿಯ ಹರಿವನ್ನು ಸೃಷ್ಟಿಸುವುದು ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಸ್ಯಗಳನ್ನು ಗುಂಪು ಮಾಡುವುದರಿಂದ ಶಾಖವನ್ನು ಕಡಿಮೆ ಮಾಡಬಹುದು. ಅವುಗಳನ್ನು ಪದರಗಳಲ್ಲಿ ಜೋಡಿಸುವುದರಿಂದ ಎತ್ತರದ ಸಸ್ಯಗಳು ನೈಸರ್ಗಿಕವಾಗಿ ಹೆಚ್ಚು ಸೂಕ್ಷ್ಮವಾದವುಗಳಿಗೆ ನೆರಳು ನೀಡಲು ಅನುವು ಮಾಡಿಕೊಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications