ರಾಜ್ಯ ಕಾಂಗ್ರೆಸ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಸುಳ್ಳು ಆರೋಪ
ಬೆಂಗಳೂರು, ಆಗಸ್ಟ್ 06: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗೇ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡುವುದನ್ನು ಮುಂದುವರೆಸಿದ್ದಾರೆ. ಅವರು ಈ ಬಗ್ಗೆ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಮಂತ್ರಿಗಳು ದೇಶದ ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಬೆಲೆ ಏರಿಕೆಯಾಗಿ ಡಬಲ್ ಅಂಕಿ ಬೆಲೆ ಏರಿಕೆ, ಸಿಂಗಲ್ ಅಂಕಿ ಆರ್ಥಿಕ ಬೆಳವಣಿಗೆ ಆಗಿತ್ತು. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಆರೋಪ ಯುಪಿಎ ಸರ್ಕಾರದ ಮೇಲಿತ್ತ, ಎಲ್ಲೆಡೆ ಹಗರಣಗಳು ನಡೆದಿದ್ದವು ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಆರ್ಥಿಕತೆ ಸದೃಡತೆ ತಂದಿದ್ದಾರೆ. ಪ್ರಧಾನಿ ಕಾಲದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ನಿಧಿ ಇದೆ. 573 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಫಂಡ್ ಇದೆ. 543 ಬಿಲಿಯನ್ ಡಾಲರ್ ಗೋಲ್ಡ್ ನಿಧಿ ಇದೆ.
ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ. ಇದು ಭಾರತದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ ಎಂದರು.
ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಆಗಿದೆ. ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ 130 ಕೋಟಿ ಭಾರತಿಯರಿಗೆ ಮೂರು ಬಾರಿ ಲಸಿಕೆ ಕೊಡಿಸಿ ಆರ್ಥಿಕ ಸದೃಢತೆ ರಕ್ಷಣೆ ಮಾಡಿರುವುದನ್ನು ಯಾರೂ ಮರೆಯುವಂತಿಲ್ಲ.

ಕೊವಿಡ್ ಸಂದರ್ಭದಲ್ಲಿ ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಮೋದಿಯವರು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಲ್ಲ, ರಾಹುಲ್ ಗಾಂಧಿಯಲ್ಲ. ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸಿದ್ದರಾಮಯ್ಯನವರು ಸುಳ್ಳು ಹೇಳಿದರೆ ಅದು ಸತ್ಯವಾಗಲ್ಲ
ಸಿದ್ದರಾಮಯ್ಯನವರು ಪದೇ ಪದೆ ಸುಳ್ಳು ಹೇಳಿದರೆ ಅದು ಸತ್ಯವಾಗಲ್ಲ. ನಮ್ಮ ಸರ್ಕಾರ ಇದ್ದಾಗ ಸರ್ ಪ್ಲಸ್ ಬಜೆಟ್ ಮಂಡನೆ ಮಾಡಿದ್ದೇವು ನೀವು ಬಂದು ಮೂರೇ ತಿಂಗಳಲ್ಲಿ ಕೊರತೆ ಬಜೆಟ್ ಮಾಡಿದ್ದೀರಿ. 58 ಸಾವಿರ ಕೋಟಿ ದಲಿತರ ಹಣವನ್ನು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದೀರಿ. ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ದಿ ಅಭಿವೃದ್ದಿಗೆ ಹಣ ಮೀಸಲಿಟ್ಟಿಲ್ಲ ಎಂದು ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಭಿವೃದ್ಧಿಗೆ ಹಣ ಇಲ್ಲ ಅಂತ ನೀವೇ ಶಾಸಕರಿಗೆ ಹೇಳಿದ್ದೀರಿ, ನಮ್ಮ ಉಪ ಮುಖ್ಯಮಂತ್ರಿ ಕೂಡ ಅಭಿವೃದ್ಧಿ ಗೆ ಹಣ ಕೇಳಬೇಡಿ ಅಂತ ಹೇಳಿದ್ದಾರೆ. ನಮ್ಮ ಸರ್ಕಾರ ಸದೃಢ ಆರ್ಥಿಕತೆ ಮಾಡಿದ್ದರಿಂದ ನೀವು ಗ್ಯಾರೆಂಟಿ ಗಳನ್ನು ಕೊಟ್ಟಿದ್ದೀರಿ. ಅವುಗಳಲ್ಲಿಯೂ ಕೂಡ ಕಂಡಿಷನ್ ಹಾಕಿದ್ದೀರಿ, ಅಕ್ಕಿ ಕೊಡುತ್ತೇವೆಂದು ಕೊಡದೇ ನಿಮ್ಮ ವೈಫಲ್ಯ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದೀರಿ.
ಗ್ಯಾರಂಟಿ ಮೂಲಕ ಜನರಿಗೆ ಮೋಸ
ಗೃಹಜ್ಯೋತಿ ಯಲ್ಲಿ 200 ಯುನಿಟ್ ಕೊಡುತ್ತೇವೆ ಅಂತ ಹೇಳಿ ಸರಾಸರಿ ಅಂತ 43 ಯುನಿಟ್ ನೀಡುವುದಾಗಿ ಹೇಳಿದ್ದೀರಿ. ಇದು ಜನರಿಗೆ ಮಾಡಿದ ಮೋಸ ಅಲ್ಲವಾ? ಗೃಹಲಕ್ಷ್ಮೀ ಇನ್ನೂ ಜಾರಿಗೆ ತರಲಿಕ್ಕೆ ಆಗಿಲ್ಲ. ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ ಆರ್ಟಿಸಿ ಸಿಬ್ಬಂದಿಗೆ ಪೂರ್ಣ ಸಂಬಳ ಕೊಡಲಾಗುತ್ತಿಲ್ಲ. ಪೊಲಿಸರಿಗೆ ಸಂಬಳ ಕೊಡಲಿಕ್ಕೆ ಆಗುತ್ತಿಲ್ಲ ಎಂದು ವಿವರಿಸಿದರು.
ನಾವು ಕೊವಿಡ್ ಸಂದರ್ಭದಲ್ಲೂ ಎಲ್ಲ ಉದ್ಯೋಗಿಗಳಿಗೆ ಪೂರ್ಣ ಸಂಬಳ ಕೊಟ್ಟಿದ್ದೇವು, ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ರಾಜ್ಯವನ್ನು ಹೇಗೆ ದಿವಾಳಿ ಮಾಡುತ್ತಿದ್ದು, ಇದನ್ನು ರಾಜ್ಯದ ಜನರೆಲ್ಲ ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.












Click it and Unblock the Notifications