ಧನುರ್ ಮಾಸ ಎಫೆಕ್ಟ್ : ಕೈ-ತೆನೆ ಸಂಪುಟ ವಿಸ್ತರಣೆ ಹೊಸ ವರ್ಷಕ್ಕೆ
ಬೆಂಗಳೂರು, ನವೆಂಬರ್ 16: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಯಾಕೋ ಮುಹೂರ್ತ ಕೂಡಿ ಬರುತ್ತಿಲ್ಲ. ಹಬ್ಬ, ಹರಿದಿನ, ಶುಭದಿನ, ವಾರ, ತಿಥಿ, ನಕ್ಷತ್ರ ಎಣಿಕೆ ಜತೆಗೆ ಐದಾರು ಸ್ಥಾನಕ್ಕೆ ಐವತ್ತು ಮಂದಿ ಲಾಬಿ ನಡೆಸಿರುವ ಪರಿಣಾಮ, ಸಚಿವ ಸಂಪುಟ ವಿಸ್ತರಣೆ ಎಂಬುದು ಕೈ ತೆನೆ ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಸಂಪುಟ ವಿಸ್ತರಣೆ ನವೆಂಬರ್ ತಿಂಗಳ ಅಂತ್ಯಕ್ಕೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಆದರೆ, ಧನುರ್ ಮಾಸ, ಚಳಿಗಾಲದ ಅಧಿವೇಶನ ಕಾರಣ, ಸಂಪುಟ ವಿಸ್ತರಣೆ ಜನವರಿ 15ರ ತನಕ ಸಾಧ್ಯವಿಲ್ಲ ಎಂಬ ಸುದ್ದಿ ಬಂದಿದೆ.
ಜಾರಕಿಹೊಳಿ ಸಹೋದರ ಗಲಾಟೆ, ಸಿದ್ದರಾಮಯ್ಯ ಅವರ ವಿದೇಶಿ ಪ್ರವಾಸ, ಬೆಳಗಾವಿ ಆಡಳಿತ ವಿಕೇಂದ್ರಿಕರಣ, ಡಿಕೆ ಶಿವಕುಮಾರ್ ಸವಾಲ್, ಎಂಎಲ್ಸಿ ಚುನಾವಣೆ, ಪಿತೃಪಕ್ಷ, ಅಕಾಂಕ್ಷಿಗಳ ಅಸಮಾಧಾನ ಹೀಗೆ ನಾನಾ ಕಾರಣಗಳನ್ನು ಹುಡುಕಬಹುದು. ಎಚ್ ಡಿ ಕುಮಾರಸ್ವಾಮಿ ಸಚಿವ ಸಂಪುಟದ ಒಟ್ಟು 8 ಸ್ಥಾನಗಳನ್ನು ತುಂಬಬೇಕಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಭೆ ನಡೆಸಿ ಸಂಪುಟ ಸೇರುವ ಶಾಸಕರ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

ಕುತೂಹಲಕಾರಿಯಾಗಿದೆ ಸಂಪುಟ ವಿಸ್ತರಣೆ
ಸೆಪ್ಟೆಂಬರ್ ತಿಂಗಳಿನಲ್ಲೇ ನಡೆಯಬೇಕಿದ್ದ ಸಂಪುಟ ವಿಸ್ತರಣೆಗೆ ಅನೇಕ ವಿಘ್ನಗಳು ಕಂಡು ಬಂದಿತ್ತು. 8 ಸ್ಥಾನಗಳಿಗಾಗಿ 22ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಕಾಣಿಸಿಕೊಂಡಿದ್ದಾರೆ.ಕಾಂಗ್ರೆಸ್ಸಿನಿಂದ 6 ಸ್ಥಾನ ಹಾಗೂ ಜೆಡಿಎಸ್ ನಿಂದ 2 ಸ್ಥಾನ ತುಂಬಬೇಕಿದೆ. ಎಲ್ಲಾ 6 ಸ್ಥಾನಗಳನ್ನು ಭರ್ತಿ ಮಾಡಲು ಕಾಂಗ್ರೆಸ್ ಇಚ್ಛಿಸಿದೆ. ಆದರೆ, ಒಂದೆರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.

ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲದ ಅಧಿವೇಶನ
ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತದೆ. ಡಿಸೆಂಬರ್ 10ರಿಂದ 20ರ ತನಕ ಅಧಿವೇಶನ ನಡೆಯಲಿದ್ದು, ಅಧಿವೇಶನ ಮುಗಿದ ನಂತರವೇ ಸಂಪುಟ ವಿಸ್ತರಣೆ ಮಾಡುವಂತೆ ಕೆಲ ಹಿರಿಯ ನಾಯಕರು ಕೆಪಿಸಿಸಿಗೆ ಸಲಹೆ ನೀಡಿದ್ದಾರೆ ಎಂಬ ಸುದ್ದಿಯಿದೆ. ಒಂದು ವೇಳೆ ಮುಂಚಿತವಾಗಿದೆ ಸಂಪುಟ ವಿಸ್ತರಣೆಯಾದದರೆ, ಭಿನ್ನಮತೀಯರು ತಕರಾರು ತೆಗೆಯಬಹುದು ಎಂಬ ಶಂಕೆಯಿದೆ. ಅಧಿವೇಶನದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ನಿರ್ಧಾರಿಸಿದೆ.

ಧನುರ್ ಮಾಸ, ಮಕರ ಸಂಕ್ರಾಂತಿ ಕಾರಣ
ಡಿಸೆಂಬರ್ 16ರಿಂದ ಜನವರಿ 14ರ ಅವಧಿಯಲ್ಲಿ ಸೂರ್ಯನು ಧನುರ್ ರಾಶಿಯಿಂದ ಮಕರರಾಶಿಗೆ ಚಲಿಸುತ್ತಾನೆ. ನಂತರ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ಧನುರ್ ಮಾಸ ಅಶುಭವಲ್ಲದಿದ್ದರೂ ಕೆಲ ನಂಬಿಕೆಯಂತೆ ಶುಭ ಕಾರ್ಯ ಮಾಡುವುದಿಲ್ಲ. ಶಾಸಕರ ಪೈಕಿ ಅನೇಕರು ಈ ಅವಧಿಯಲ್ಲಿ ಸಂಪುಟ ಸೇರಲು ಬಯಸಿಲ್ಲ. ಒಂದು ವೇಳೆ ಸಂಪುಟ ಸೇರಿದರೂ ಕಾಂಗ್ರೆಸ್ ಶಾಸಕರು ಸೇರಬಹುದೇ ಹೊರತೂ, ಜೆಡಿಎಸ್ ಶಾಸಕರು, ಸಂಕ್ರಾಂತಿ ಬಳಿಕವೇ ಸಂಪುಟ ಸೇರಲು ಮುಂದಾಗಿದ್ದಾರೆ.

ಜೆಡಿಎಸ್ ನ ಎರಡು ಸ್ಥಾನಕ್ಕೆ ಲಾಬಿ
ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್ ಎರಡು ಸ್ಥಾನ ಉಳಿಸಿಕೊಂಡಿದೆ. ಈ ಎರಡು ಸ್ಥಾನಕ್ಕೆ ಮುರ್ನಾಲ್ಕು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಎಂಎಲ್ಸಿ ಬಸವರಾಜ ಹೊರಟ್ಟಿ, ಎಚ್ ಕೆ ಕುಮಾರಸ್ವಾಮಿ, ಶರವಣ ಹಾಗೂ ಬಿಎಂ ಫಾರೂಕ್ ಅವರು ಸಚಿವ ಸಂಪುಟ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಎಂಎಲ್ಸಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ ಎನ್ನಲಾಗಿದೆ. ಸಭಾಪತಿ ಸ್ಥಾನವು ಕಾಂಗ್ರೆಸ್ಸಿಗೆ ಸಿಕ್ಕಿದ್ದರಿಂದ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಒಟ್ಟಾರೆ, ಹೊರಟ್ಟಿ ಹಾಗೂ ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ.

ಕಾಂಗ್ರೆಸ್ಸಿನಲ್ಲಿ 6 ಸ್ಥಾನಕ್ಕೆ ಭಾರಿ ಲಾಬಿ
ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ತುಕಾರಾಂ, ನಾಗೇಂದ್ರ, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ಈಗಾಗಲೇ ದೆಹಲಿ ಮಟ್ಟದಲ್ಲಿ ಲಾಬಿ ಕೂಡ ನಡೆಸಿದ್ದರು. ಜೊತೆಗೆ ಆನಂದ್ ಸಿಂಗ್, ಸುಧಾಕರ್, ಮುನಿಯಪ್ಪ ಇನ್ನೂ ಹಲವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಒಟ್ಟಿಗೆ ಮಾಡಬೇಕೆಂದು ಕೆಪಿಸಿಸಿ ನಿರ್ಣಯಿಸಿದೆ ಹಾಗಾಗಿ ಸಂಪುಟ ವಿಸ್ತರಣೆ ಆಗುವವರೆಗೂ ನಿಗಮ ಮಂಡಳಿಗಳಿಗೂ ನೇಮಕ ಅಸಾಧ್ಯ. ಇದು ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಹುಟ್ಟಿಸಿದೆ ಎನ್ನಲಾಗಿದೆ.












Click it and Unblock the Notifications