ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಅವಧಿಯಲ್ಲೇ ತೃತೀಯ ಭಾಷೆಯಾದ ಹಿಂದಿ ಪರೀಕ್ಷೆಯನ್ನು 'ನ್ಯೂಟ್ರಲ್' (ಗ್ರೇಡಿಂಗ್) ಮಾಡಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು "ರಾಜಕೀಯ ಪ್ರೇರಿತ" ಎಂದು ಕರೆದಿದ್ದಾರೆ.
ಭಾಷಾ ಸಮನ್ವಯ ಅಗತ್ಯ
ಕನ್ನಡ ನಮ್ಮ ಉಸಿರಿನ ಭಾಷೆ ಮತ್ತು ಇಂಗ್ಲಿಷ್ ಸಂವಹನಕ್ಕೆ ಅನಿವಾರ್ಯವಾದ ಭಾಷೆಯಾಗಿದೆ. ಆದರೆ, ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನು ಕಲಿಯುವುದು ಅತ್ಯಗತ್ಯ. ಮಕ್ಕಳ ಕಲಿಕೆಯ ವಿಷಯದಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಶ್ರೀರಾಮುಲು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿರುವಾಗಲೇ ಹಿಂದಿ ಪರೀಕ್ಷೆಯ ಮಹತ್ವವನ್ನು ಕುಗ್ಗಿಸಿರುವುದು ವಿದ್ಯಾರ್ಥಿಗಳ ಓದಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಈ ಹಠಾತ್ ನಿರ್ಧಾರವು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಚೆಲ್ಲಾಟವಾಡಿದಂತಿದೆ ಎಂದು ಅವರು ದೂರಿದ್ದಾರೆ. ನಿಮ್ಮದು ಹಿಂದಿ ಭಾಷೆಯ ಮೇಲಿನ ಕೋಪವೋ ಅಥವಾ ಪ್ರಧಾನಿ ಮೋದಿಯವರ ಮೇಲಿನ ಸಿಟ್ಟೋ?" ಎಂದು ಪ್ರಶ್ನಿಸಿರುವ ಶ್ರೀರಾಮುಲು, ಹಿಂದಿ ಭಾಷೆಯು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ, ಅದು ಕೂಡ ನಮ್ಮ ದೇಶದ ಭಾಷೆಯೇ ಆಗಿದೆ ಎಂದು ನೆನಪಿಸಿದ್ದಾರೆ. ಅಲ್ಲದೆ, "ನಿಮಗೆ ಉರ್ದು ಭಾಷೆಯ ಮೇಲೆ ಇರುವ ಪ್ರೀತಿ ಹಿಂದಿ ಭಾಷೆಯ ಮೇಲೆ ಏಕಿಲ್ಲ?" ಎಂದು ಕೇಳುವ ಮೂಲಕ ಸರ್ಕಾರದ ವಿರುದ್ಧ ತೀಕ್ಷ್ಣವಾದ ಸವಾಲು ಎಸೆದಿದ್ದಾರೆ. ರಾಜ್ಯ ಸರ್ಕಾರದ ಈ ಭಾಷಾ ನೀತಿಯು ಶೈಕ್ಷಣಿಕ ಹಿತದೃಷ್ಟಿಗಿಂತ ಹೆಚ್ಚಾಗಿ ರಾಜಕೀಯ ಉದ್ದೇಶ ಹೊಂದಿದೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ತೃತೀಯ ಭಾಷೆಯ ಹೊರೆ ಇನ್ನು ಇರುವುದಿಲ್ಲ
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಅವರನ್ನು ಮುಕ್ತಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇಂದು ಐತಿಹಾಸಿಕ ತೀರ್ಮಾನಗಳನ್ನು ಪ್ರಕಟಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕ್ರಾಂತಿಕಾರಿ ಬದಲಾವಣೆಗಳ ಕುರಿತು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಹೊಸ ನಿರ್ಧಾರದಂತೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಾದ ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ ಇತರೆ ಭಾಷಾ ವಿಷಯಗಳಿಗೆ ಇನ್ಮುಂದೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ತೃತೀಯ ಭಾಷೆಯಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಈ ಹಿಂದೆ ಲಕ್ಷಾಂತರ ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗಿ ಶೈಕ್ಷಣಿಕ ವರ್ಷವನ್ನೇ ಕಳೆದುಕೊಳ್ಳುತ್ತಿದ್ದರು. ಈಗ ಆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
ಕೇವಲ ಅಂಕ ಗಳಿಕೆಯಷ್ಟೇ ಶಿಕ್ಷಣದ ಗುರಿಯಾಗಬಾರದು ಎಂಬ ಉದ್ದೇಶದಿಂದ, ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ನೈತಿಕ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಸರ್ಕಾರದಿಂದಲೇ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬದಲಾವಣೆಗಳು ರಾಜ್ಯದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಮಕ್ಕಳ ಮೇಲೆ ಬೀರುತ್ತಿದ್ದ ಪರೀಕ್ಷಾ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ ಎಂದು ಶಿಕ್ಷಣ ಇಲಾಖೆ ಆಶಯ ವ್ಯಕ್ತಪಡಿಸಿದೆ.












Click it and Unblock the Notifications