ಕೊರೊನಾ ಆತಂಕದ ನಡುವೆಯೂ ಕರ್ನಾಟಕದಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ
ಚಿಕ್ಕಮಗಳೂರು, ಜುಲೈ 19: ಕೊರೊನಾ ಸೋಂಕು ಆತಂಕದ ನಡುವೆ 10ನೇ ತರಗತಿ ಮಕ್ಕಳಿಗೆ ಪರೀಕ್ಷೆ ಬೇಕೋ? ಬೇಡವೋ ಎಂಬ ಚರ್ಚೆ ಮಧ್ಯೆಯೂ ರಾಜ್ಯ ಸರ್ಕಾರ ಪರೀಕ್ಷೆಗೆ ಮುಂದಾಗಿದೆ.
ಕರ್ನಾಟಕ ಹೈಕೋರ್ಟ್ ಕೂಡ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಘಟ್ಟವಾಗಿರುವುದರಿಂದ ಪರೀಕ್ಷೆ ನಡೆಸಬೇಕು ಎಂದಿತ್ತು. ಹಾಗಾಗಿ, ಭಯದ ಮಧ್ಯೆಯೂ ಸರ್ಕಾರ ಪರೀಕ್ಷೆಗೆ ಮುಂದಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ಧತೆ ನಡೆಸಿದೆ.
ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರೀಕ್ಷೆಗೆ ಮುಂದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 14,116 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಕ್ರಮಗಳು
* ಒಂದು ಟೇಬಲ್ಗೆ ಓರ್ವ ವಿದ್ಯಾರ್ಥಿಯನ್ನು ಕೂರಿಸಲಾಗಿದೆ
* ಪ್ರತಿ ಮಕ್ಕಳಿಗೂ ಸ್ಯಾನಿಟೈಸ್ ಹಾಕಿ, ದೈಹಿಕ ಉಷ್ಣತೆ ಟೆಸ್ಟ್ ಮಾಡಿ ಒಳ ಬಿಡಲಾಗುತ್ತದೆ.
* ಪರೀಕ್ಷಾ ಕೇಂದ್ರದಲ್ಲಿ ನಾಲ್ಕೈದು ಕಡೆ ಹಾಲ್ ಟಿಕೆಟ್ ನಂಬರ್ ಹಾಕಲಾಗಿದೆ.
* ಮಕ್ಕಳು ಗುಂಪು ಸೇರದಂತೆ ಎಚ್ಚರ ವಹಿಸಲಾಗಿದೆ.
ಎಂದಿನಂತೆ ಕೆಎಸ್ಆರ್ಟಿಸಿ ಬಸ್ ಸೇವೆಯನ್ನು ಸಹ ಒದಗಿಸಲಾಗಿದ್ದು, ಮುಖ್ಯವಾಗಿ ಮಲ್ಲಂದೂರು ಮಾರ್ಗದಲ್ಲಿ ಭಾರೀ ಮಳೆಯಿಂದ ಧರೆ ಕುಸಿತ ಉಂಟಾದ ಪರಿಣಾಮ ಬದಲಿ ಮಾರ್ಗದಲ್ಲಿ ಬಸ್ ಸಂಚಾರ ಕಲ್ಪಿಸಿ, ಆ ಭಾಗದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ 8 ಜನ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಆಯಾ ತಾಲೂಕು ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರದಲ್ಲಿ ವಿಶೇಷ ಕೊಠಡಿ ತೆರೆಯಲಾಗಿದೆ.
"ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಲಾಗಿದೆ,'' ಎಂದು ತಾಲೂಕು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ- ವಿಜಯನಗರ ಎಸ್ಎಸ್ಎಎಲ್ಸಿ ಪರೀಕ್ಷೆ
ಅವಳಿ ಜಿಲ್ಲೆಗಳಾದ ವಿಜಯನಗರ ಮತ್ತು ಬಳ್ಳಾರಿಗಳಲ್ಲಿ ಜುಲೈ 19 ಸೋಮವಾರ ದಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಅವಳಿ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಬರದ ಸಿದ್ಧತೆ ಮಾಡಿಕೊಂಡಿದ್ದು, ಅವಳಿ ಜಿಲ್ಲೆಗಳಲ್ಲಿ ಒಟ್ಟು 42,989 SSLC ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಅದರಲ್ಲಿ ಹೆಣ್ಣು 20,069, ಗಂಡು 22,920 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.
ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸುವುದಕ್ಕೆ ಶಿಕ್ಷಣ ಇಲಾಖೆ 5,728 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಒಟ್ಟು 222 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದೇ ದಿನದಲ್ಲಿ ಮೂರು ವಿಷಯಗಳ ಪರೀಕ್ಷೆಯನ್ನು ಬರೆಯುತ್ತಿರುವುದು ವಿಶೇಷವಾಗಿದ್ದು, ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ.
ಇಂದು ಮೂರು ವಿಷಯಗಳು ಮತ್ತು ಜುಲೈ 22 ರಂದು ಮೂರು ವಿಷಯಗಳ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಒಂದೇ ಕಡೆ ಸೇರಬಾರದು ಎನ್ನುವ ಕಾರಣಕ್ಕೆ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ನೋಡಿಕೊಳ್ಳಲು ನಾಲ್ಕು ಕಡೆ ಬೋರ್ಡ್ಗಳನ್ನು ಹಾಕಲಾಗಿದೆ.
ಪರೀಕ್ಷಾ ಕೆಂದ್ರಗಳಲ್ಲಿ ಕೊರೊನಾ ನಿಯಮ ಪಾಲನೆ ಮಾಡುವ ಸಲುವಾಗಿ ಪ್ರತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಗುರುತುಗಳನ್ನು ಹಾಕಲಾಗಿದೆ ಮತ್ತು ಶಾಲೆಯ ಆವರಣದಲ್ಲಿಯೂ ಸಹ ಮಾರ್ಕ್ಗಳನ್ನು ಮಾಡಲಾಗಿದೆ.
ಪರೀಕ್ಷಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಒಂದೆಡೆ ಸೇರದ ಹಾಗೆ ಅಲ್ಲಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಸ್ಯಾನಿಟೈಸರ್ ಇರಿಸಲಾಗಿತ್ತು.
Recommended Video
"ಬಳ್ಳಾರಿ ಮತ್ತು ವಿಜಯನಗರಗಳಲ್ಲಿ ಒಟ್ಟು 42,989 SSLC ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ, ಅದರಲ್ಲಿ ಹೆಣ್ಣು 20,069, ಗಂಡು 22,920 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಪರೀಕ್ಷೆಯನ್ನು ನಡೆಸುವುದಕ್ಕೆ 572 ಸಿಬ್ಬಂದಿಗಳು, ಪರೀಕ್ಷಾ ಕೇಂದ್ರಗಳು 222, ಒಂದೇ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿ ಕೊಡಲಾಗಿದೆ,'' ಎಂದು ಬಳ್ಳಾರಿ ಡಿಡಿಪಿಐ ರಾಮಪ್ಪ ತಿಳಿಸಿದರು.












Click it and Unblock the Notifications