ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ 454 ವಿದ್ಯಾರ್ಥಿಗಳಿಗೆ ಉಚಿತ ಕಿಟ್ ವಿತರಣೆ
ಚಿಕ್ಕಬಳ್ಳಾಪುರ: ಬಡ ಹಾಗೂ ಗ್ರಾಮೀಣ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಅಡೆತಡೆ ಉಂಟಾಗಬಾರದು ಎಂಬ ಉದ್ದೇಶದಿಂದ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ವತಿಯಿಂದ ಜಿಲ್ಲೆಯ ವಿವಿಧ ಕ್ಯಾಂಪಸ್ಗಳಲ್ಲಿ 454 ವಿದ್ಯಾರ್ಥಿಗಳಿಗೆ ಉಚಿತ 'ಜಾಯಿನಿಂಗ್ ಕಿಟ್'ಗಳನ್ನು ವಿತರಿಸಲಾಯಿತು.
ತಾಲ್ಲೂಕಿನ ಮುದ್ದೇನಹಳ್ಳಿ ಕ್ಯಾಂಪಸ್ನಲ್ಲಿ 250 ವಿದ್ಯಾರ್ಥಿಗಳಿಗೆ, ಪಿಬಿಎಂ ಕ್ಯಾಂಪಸ್ನಲ್ಲಿ 115 ಹಾಗೂ ಎನ್ಕೆಹೆಚ್ ಕ್ಯಾಂಪಸ್ನಲ್ಲಿ 89 ವಿದ್ಯಾರ್ಥಿಗಳಿಗೆ ಕಿಟ್ಗಳನ್ನು, ಹೀಗೆ ರಾಜ್ಯದ 24 ಕ್ಯಾಂಪಸ್ಗಳಲ್ಲಿ ಒಟ್ಟು 2,377 ವಿದ್ಯಾರ್ಥಿಗಳಿಗೆ ಕಿಟ್ಗಳನ್ನು ವಿತರಿಸಲಾಗಿದೆ.

ಈ ವರ್ಷ ಕ್ರಿಕೆಟ್ ಅಕಾಡೆಮಿಗೆ ಹೊಸದಾಗಿ 14 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಒಟ್ಟು 32 ಕ್ರೀಡಾ ವಿದ್ಯಾರ್ಥಿಗಳಿಗೆ ಹಾಗೂ ವೇದ ಗುರುಕುಲದ 16 ವಿದ್ಯಾರ್ಥಿಗಳಿಗೂ ಕಿಟ್ ವಿತರಿಸಲಾಯಿತು. ಮುದ್ದೇನಹಳ್ಳಿ ಕ್ಯಾಂಪಸ್ನಲ್ಲಿ 6ನೇ ತರಗತಿಗೆ 20 ವಿದ್ಯಾರ್ಥಿಗಳು ಹಾಗೂ ಪಿಬಿಎಂ ಕ್ಯಾಂಪಸ್ನಲ್ಲಿ 23 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದಿದ್ದಾರೆ.
ಸಂಸ್ಥೆಯ ವಾರ್ಡನ್ ಶಿವಕೋಟಿ ಸಾಯಿ ಕೌಶಲ್ ಮಾತನಾಡಿ, 'ಪೋಷಕರು ತಮ್ಮ ಮಕ್ಕಳನ್ನು ಎರಡು ಜೋಡಿ ಬಟ್ಟೆಯೊಂದಿಗೆ ಗುರುಕುಲಕ್ಕೆ ಕಳುಹಿಸಿದರೆ ಸಾಕು. ಉಳಿದ ಎಲ್ಲ ಅಗತ್ಯ ವಸ್ತುಗಳನ್ನು ಗುರುಕುಲವೇ ನೀಡುತ್ತದೆ' ಎಂದು ಹೇಳಿದರು.
'ನನ್ನ ಮಗ ಶಣವ್ಗೆ ಈ ಗುರುಕುಲದಲ್ಲಿ ಪ್ರವೇಶ ದೊರೆತಿರುವುದು ತುಂಬಾ ಸಂತೋಷ ತಂದಿದೆ. ಇಲ್ಲಿನ ಮೌಲ್ಯಯುತ ಉಚಿತ ಶಿಕ್ಷಣದ ಬಗ್ಗೆ ಕಳೆದ 15 ವರ್ಷಗಳಿಂದ ಕೇಳುತ್ತಿದ್ದೆ. ನನ್ನ ಕನಸು ಇಂದು ನನಸಾಗಿದೆ' ಎಂದು ವಿದ್ಯಾರ್ಥಿಯ ಪೋಷಕಿ ತೀರ್ಥಕುಮಾರಿ ಹೇಳಿದರು.
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುದ್ದೇನಹಳ್ಳಿ ಗುರುಕುಲದ ಚೇರ್ಮನ್ ಡಾ. ನಿಕೇತನ್ ಟಿ.ಸಿ. ವಾರ್ಡನ್ ಶಿವಕೋಟಿ ಸಾಯಿ ಕೌಶಲ್, ಚಿಕ್ಕಬಳ್ಳಾಪುರದ ಜೈ ಫೌಂಡೇಶನ್ ಅಧ್ಯಕ್ಷ ಜಯಕುಮಾರ್ ಹಾಗೂ ತ್ಯಾಗಜೀವಿ ವಾಸುದೇವ್ ಅವರು ಉಪಸ್ಥಿತರಿದ್ದರು.
ಬ್ರಶ್ನಿಂದ ಬೆಡ್ ತನಕ: 48 ಅಗತ್ಯ ವಸ್ತುಗಳು
ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಿಟ್ನಲ್ಲಿ ಐದು ಜೋಡಿ ಶಾಲಾ ಸಮವಸ್ತ್ರ, ಟಿ-ಶರ್ಟ್, ಟ್ರಾಲಿ ಬ್ಯಾಗ್, ಸ್ವೆಟರ್, ಬ್ಲಾಂಕೆಟ್, ಹಾಸಿಗೆ, ಬೆಡ್ಶೀಟ್, ಬ್ರಶ್, ಜಮಖಾನಾ, ಶೂ ಹಾಗೂ ಮೂರು ಜೋಡಿ ಜುಬ್ಬಾ-ಪೈಜಾಮ್ ಸೇರಿದಂತೆ ಹಾಸ್ಟೆಲ್ ಜೀವನಕ್ಕೆ ಅಗತ್ಯವಾದ ಒಟ್ಟು 48 ವಸ್ತುಗಳಿವೆ. ಒಂದು ಕಿಟ್ನ ಮೌಲ್ಯ ₹21,200 ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications