ರಾಜ್ಯದಲ್ಲಿ ಕ್ರೀಡೆ ಅಭಿವೃದ್ಧಿಗಾಗಿ ಹೊಸ ಕ್ರೀಡಾ ನೀತಿ ಜಾರಿ
ಉಡುಪಿ, ಮಾರ್ಚ್ 12: ರಾಜ್ಯದ ಕ್ರೀಡಾ ಗುಣಮಟ್ಟ ಸುಧಾರಿಸಲು ಕರ್ನಾಟಕದ ಮೊದಲ ಕ್ರೀಡಾ ನೀತಿಯನ್ನು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಭಾನುವಾರ (ಮಾರ್ಚ್ 11) ರಂದು ಇಲ್ಲಿ ಬಿಡುಗಡೆ ಮಾಡಿದರು.
'ಕ್ರೀಡಾ ನೀತಿಗೆ ರಾಜ್ಯ ಸಚಿವ ಸಂಪುಟ ಇದೇ 8ರಂದು ಒಕ್ಕೂರಲ ಅನುಮೋದನೆ ದೊರೆತಿದ್ದು. ತಕ್ಷಣದಿಂದಲೇ ಕ್ರೀಡಾ ನೀತಿ ಜಾರಿಯಾಗಲಿದೆ. ಎಲ್ಲಾ ಇಲಾಖೆಯವರನ್ನು ಪರಿಗಣನೆಗೆ ತೆಗೆದುಕೊಂಡು ಈ ನೀತಿಯನ್ನು ರೂಪಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಕ್ರೀಡಾ ನೀತಿಗಾಗಿ ಪ್ರತ್ಯೇಕ ಹಣ ಸಹ ಕಾಯ್ದಿರಿಸಲಾಗುತ್ತದೆ' ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಪ್ರತಿಭಾನ್ವೇಷಕ್ಕೆ ಕ್ರೀಡಾ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದ ಅವರು ಪ್ರಾಥಮಿಕ ಶಾಲೆಯ ಹಂತದಲ್ಲೇ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದು ಶಾಲಾ ಹಂತದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ತಾಲ್ಲೂಕು ಮಟ್ಟದಲ್ಲಿ ತರಬೇತುಗೊಳಿಸಿ, ಅಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡುವುದು. ಅಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉನ್ನತಮಟ್ಟದ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ ಮತ್ತು ತರಬೇತಿಯನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದು ಅವರು ಹೇಳಿದರು. ಅಷ್ಟೆ ಅಲ್ಲದೆ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದರು.
ಇಲಾಖೆಗಳ ಸಹಭಾಗಿತ್ವ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಶೇಷ ಚೇತನ ಸಬಲೀಕರಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ತಮ್ಮ ಅನುದಾನದಲ್ಲಿ ಶೇ 2ರಷ್ಟನ್ನು ಕ್ರೀಡಾ ಅಭಿವೃದ್ಧಿಗೆ ನೀಡಲಿದೆ ಎಂದು ಕ್ರೀಡಾ ಸಚಿವರು ಹೇಳಿದರು.

ಅರಣ್ಯ, ಪೊಲೀಸ್ ಇಲಾಖೆಗಳ ನೇಮಕಾತಿಯಲ್ಲಿ ಮೀಸಲಾತಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಕ್ರೀಡಾಪಟುಗಳಿಗೆ ಆದ್ಯತೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು ಕ್ರೀಡೆಯನ್ನು ಉದ್ಯಮವಾಗಿ ಬೆಳೆಸಬೇಕು. ಸಾಹಸ ಕ್ರೀಡೆಗಳನ್ನು ಪ್ರವಾಸೋದ್ಯಮ ಇಲಾಖೆ ನಡೆಸಬೇಕು. ಗ್ರಾಮೀಣಾಭಿವೃದ್ಧಿ - ಪೌರಾಡಳಿತ ಇಲಾಖೆಗಳು ಅಗತ್ಯ ಮೈದಾನದ ಸೌಕರ್ಯ ಒದಗಿಸಬೇಕು ಎಂದು ಕ್ರೀಡಾ ನೀತಿಯಲ್ಲಿ ಕಡ್ಡಾಯಗೊಳಿಸಲಾಗಿದೆ.












Click it and Unblock the Notifications