ವಿದ್ಯುತ್ ತಂತಿಯಲ್ಲಿ ಬಟ್ಟೆ ಒಣಗಿಸಲು ಸರಕಾರದ ಅನುಮತಿ!
ಬೆಂಗಳೂರು, ಸೆ 4: ಬೆಂಗಳೂರು ಮಹಾನಗರ ವಿಶಾಲವಾಗಿ ಬೆಳೆಯುತ್ತಿರುವುದರಿಂದ ಟ್ರಾಫಿಕ್ ಜಾಮ್, ನೀರು, ಕರೆಂಟ್ ಸಮಸ್ಯೆಯ ಜೊತೆಗೆ ಸಾರ್ವಜನಿಕರಿಗೆ ಬಟ್ಟೆ ಒಣಗಿಸಲೂ ಜಾಗ ಸಿಗದೇ ಇರುವುದನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ.
ಈ ಸಂಬಂಧ ಸ್ತ್ರೀ ಶಕ್ತಿ ಸಂಘಟನೆ (ಹೆಸರು ಬದಲಾಯಿಸಲಾಗಿದೆ) ಈ ಹಿಂದೆ ನೀಡಿದ್ದ ಮನವಿಗೆ ಕ್ಯಾಬಿನೆಟ್ ನಲ್ಲಿ ಅನುಮತಿ ನೀಡಲಾಗಿದೆ. ಇದರಂತೆ ಇನ್ನು ಮುಂದೆ ಅಂದರೆ ಸರಕಾರದ ಮುಂದಿನ ಅಧಿಸೂಚನೆಯ ತನಕ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ವಿದ್ಯುತ್ ಕಂಬದಲ್ಲಿ ಸಾರ್ವಜನಿಕರು ಬಟ್ಟೆ ಒಣಗಿ ಹಾಕಬಹುದಾಗಿದೆ. (ಬೆಸ್ಕಾಂನಿಂದ ಮತ್ತೆ ಶಾಕ್)
ಈ ಸಂಬಂಧ ಬೆಸ್ಕಾಂ ಸೇರಿದಂತೆ ರಾಜ್ಯದ ಇತರ ನಾಲ್ಕು ಎಸ್ಕಾಂ (ಇಲೆಕ್ಟ್ರಿಕಲ್ ಸಪ್ಲೈ ಕಂಪೆನಿ) ಮುಖ್ಯ ಇಂಜಿನಿಯರುಗಳಿಗೆ ಇಂಧನ ಸಚಿವರು ಸಹಿ ಹಾಕಿರುವ ಆದೇಶದ ಪ್ರತಿಯನ್ನು ಕಳುಹಿಸಿ ಕೊಡಲಾಗಿದೆ.
ಈಗಾಗಲೇ ಎಗ್ಗಿಲ್ಲದೇ ಸಾಗುತ್ತಿರುವ ಲೋಡ್ ಶೆಡ್ಡಿಂಗ್ ನಿಂದಾಗಿ ವಿದ್ಯುತ್ ಕಂಬ ಅಥವಾ ತಂತಿಯನ್ನು ಸಾರ್ವಜನಿಕರು ಬಟ್ಟೆ ಒಣಗಿಸಲು ಉಪಯೋಗಿಸಿ ಕೊಂಡರೆ ಇದರಿಂದ ಸರಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ.
ಬದಲಿಗೆ ಇದನ್ನು ನಮ್ಮ ಸರಕಾರದ ಸಾಧನೆಯೆಂದು ಮುಂಬರುವ ಚುನಾವಣೆಗಳಲ್ಲಿ ಹೇಳಿಕೊಳ್ಳಬಹುದಾಗಿದೆ. ಜೊತೆಗೆ, ಕರೆಂಟ್ ಶಾಕ್ ಹೊಡೆದು ಸಾಯಿಯುವವರ ಸಂಖ್ಯೆಯೂ ಕಮ್ಮಿಯಾಗಿದೆ ಎಂದು ನಾವು ಪ್ರಚಾರ ಗಿಟ್ಟಿಸಿಕೊಳ್ಳಬಹುದಾಗಿದೆ ಎನ್ನುವುದು ಸರಕಾರದ ದೂರಾಲೋಚನೆ ಎನ್ನಲಾಗುತ್ತಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಗಂಟೆ, ರಾಜ್ಯದ ಇತರ ನಗರಗಳಲ್ಲಿ ನಾಲ್ಕರಿಂದ ಆರು ಗಂಟೆ ಮತ್ತು ಗ್ರಾಮೀಣ ಭಾಗದಲ್ಲಿ ಹತ್ತರಿಂದ ಹನ್ನೆರಡು ಗಂಟೆಯ ಕಾಲ ವಿದ್ಯುತ್ ಕಂಬದಲ್ಲಿ ಧಾರಾಳವಾಗಿ ಬಟ್ಟೆ ಒಣಗಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ಮುಂದೆ ತಂತಿಯ ಮೇಲೆ ಕುಳಿತ ಕಾಗೆಗಳನ್ನು ಓಡಿಸಿ ಧಾರಾಳವಾಗಿ ಬಟ್ಟೆ ಒಣಗಿ ಹಾಕಿಕೊಳ್ಳಬಹುದಾಗಿದೆ. ಸರಕಾರದ ಈ ಅಪರೂಪದ ಮತ್ತು ಐತಿಹಾಸಿಕ ನಿರ್ಧಾರಕ್ಕೆ ರಾಜ್ಯದೆಲ್ಲಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. (ಕಾಲ್ಪನಿಕ ಲೇಖನ)