ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ
ಬೆಂಗಳೂರು, ಜೂನ್ 29: ಮುಂಗಾರು ಕರ್ನಾಟಕಕ್ಕೆ ಆಗಮಿಸಿ ಒಂದು ತಿಂಗಳೇ ಆಗುತ್ತಾ ಬಂದಿದ್ದರೂ ನಿರೀಕ್ಷಿಸಿದ ಮಳೆಯಾಗಿಲ್ಲ. ಕರಾವಳಿ, ಉತ್ತರ ಕರ್ನಾಟಕದ ಕೆಲ ಭಾಗ ಹಾಗೂ ಮಲೆನಾಡಿನಲ್ಲಿ ಸ್ವಲ್ಪ ಮಳೆಯಾಗಿದೆ. ಅದನ್ನು ಹೊರತುಪಡಿಸಿ ಉಳಿದ ಕಡೆ ಸ್ವಲ್ಪವೇ ಸ್ವಲ್ಪ ಮಳೆಯಾಗಿದೆ.
ಕಳೆದ 100 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿರುವ ವರ್ಷ ಇದಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಹಾನಗರಿ ಮುಂಬೈನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ
ದೇಶಾದ್ಯಂತ ಜೂನ್ನಲ್ಲಿ ಬಿದ್ದಿರುವ ಮಳೆ ಸಾಮಾನ್ಯಕ್ಕಿಂತ ಶೇ.35ರಷ್ಟು ಕಡಿಮೆಯಿದೆ. ಈ ತಿಂಗಳಲ್ಲಿ ಇನ್ನೆರಡೇ ದಿನಗಳು ಉಳಿದಿದ್ದು ಈ ಕೊರತೆ ತುಂಬುವಂತೆ ಮಳೆಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ.
2009 ಮತ್ತು 2014ರಲ್ಲಿ ಎಲ್ನಿನೋ ಕಾರಣಕ್ಕೆ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿತ್ತು. ಈ ವರ್ಷದಂತೆ ಆಗಲೂ ಪೂರ್ವ ಮತ್ತು ಮಧ್ಯ ಪೆಸಿಫಿಕ್ ಸಮುದ್ರದಲ್ಲಿ ತಾಪಮಾನ ಹೆಚ್ಚಿದ್ದರಿಂದ ಎಲ್ನಿನೋ ಉಂಟಾಗಿತ್ತು. ಇದರಿಂದಾಗಿ ಭಾರತದ ಮುಂಗಾರು ಮಾರುತಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿತ್ತು.
ಜುಲೈನಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಜುಲೈ ಮಳೆ ಅತ್ಯಂತ ಅಗತ್ಯವಾಗಿದೆ.
ಜೂನ್ ತಿಂಗಳಲ್ಲಿ ಇದುವರೆಗೆ 87.9 ಮಿಲಿಮೀಟರ್ ಮಳೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣವೆಂದರೆ 151.1 ಮಿಲಿಮೀಟರ್ ಮಳೆ ಬೀಳಬೇಕಿತ್ತು. ಇನ್ನು ಉಳಿದಿರುವ ಎರಡು ದಿನಗಳಲ್ಲಿ ಬೀಳುವ ಮಳೆಯನ್ನೂ ಗಣನೆಗೆ ತೆಗೆದುಕೊಂಡರೆ ಅಂದಾಜು 106 ರಿಂದ 112 ಎಂಎಂ ಮಳೆ ನಿರೀಕ್ಷಿಸಬಹುದು.
ಈ ವರ್ಷವೂ ಎಲ್ನಿನೋ ಹಾವಳಿಯಿಂದಾಗಿ ಮುಂಗಾರು ವಿಳಂಬವಾಗುತ್ತಿದೆ. ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಹೊನ್ನಾವರದಲ್ಲಿ 11 ಸೆಂ.ಮೀ, ಕಾರವಾರ 9 ಸೆಂಮೀ, ಅಂಕೋಲಾ 6, ಯಲ್ಲಾಪುರ 5, ಬೆಳ್ತಂಗಡಿ, ಉಪ್ಪಿನಂಗಡಿ, ಕಾರ್ಕಳ, ಸಿದ್ದಾಪುರ, ಸಾಗರ, ತಾಳಗುಪ್ಪ, ಆಗುಂಬೆ, ಕೊಟ್ಟಿಗೆಹಾರ, ಮೂಡಬಿದಿರೆ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕೋಟಾ, ಶಿರಾಲಿ, ಭಟ್ಕಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.