ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ 'ಡೆಂಗ್ಯೂ' ರುದ್ರ ನರ್ತನ
ಬೆಂಗಳೂರು, ಜುಲೈ 19: ಎಂದಿಗಿಂತ ಈ ಬಾರಿ ದಕ್ಷಿಣ ಭಾರತದಲ್ಲಿ ಡೆಂಗ್ಯೂ ಮಹಾಮಾರಿಯ ಆರ್ಭಟ ತುಸು ಜೋರಾಗಿಯೇ ಇದೆ. ಅದರಲ್ಲೂ ಪಕ್ಕದ ಕೇರಳ ಡೆಂಗ್ಯೂ ಜ್ವರಕ್ಕೆ ಬಳಲಿ ಬೆಂಡಾಗಿದೆ. ಅಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಜನರು ಡೆಂಗ್ಯೂ ಜ್ವರಕ್ಕೆ ಅಸುನೀಗಿದ್ದಾರೆ.
ದಕ್ಷಿಣ ಭಾರತದಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದಂತೆ ಎಲ್ಲೆಡೆ ಡೆಂಗ್ಯೂ ವ್ಯಾಪಿಸಿಕೊಳ್ಳಲು ಆರಂಭಿಸಿದೆ. ದಕ್ಷಿಣ ಭಾರತವೊಂದರಲ್ಲೇ 23,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದರೆ, ಇದರಲ್ಲಿ ಸುಮಾರು 32 ಜನರು ಸಾವನ್ನಪ್ಪಿದ್ದಾರೆ.
ಅದರಲ್ಲೂ ಕೇರಳ ರಾಜ್ಯವೊಂದರಲ್ಲೇ 11,581 ಪ್ರಕರಗಳು ವರದಿಯಾಗಿವೆ. ಇಲ್ಲೇ 20 ಜನರು ಸಾವಿಗೀಡಾಗಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ಇಲ್ಲಿ ಡೆಂಗ್ಯೂ ವ್ಯಾಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಬೆಂಗಳೂರು ಹಾಗೂ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಹೆಚ್ಚಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ. ಈ ವರ್ಷ ಇಲ್ಲಿಯವರೆಗೆ 2,911 ಪ್ರಕರಣಗಳು ವರದಿಯಾಗಿದ್ದರೆ, 5 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ದೇಶದ ಅತೀ ಹೆಚ್ಚು ಡೆಂಗ್ಯೂ ವರದಿಯಾದ ರಾಜ್ಯಗಳಲ್ಲಿ ನಾಲ್ಕು ದಕ್ಷಿಣ ಭಾರತದಲ್ಲೇ ಇದೆ. ಡೆಂಗ್ಯೂ ಜ್ವರ ಹರಡುವ ಏಡಿಸ್ ಈಜಿಪ್ಟಿ ಮಾಸ್ಕಿಟೋಸ್ ದಕ್ಷಿಣ ಭಾರತದಲ್ಲೇ ಹಚ್ಚಾಗಿ ಇರುವುದುರಿಂದ ಇಲ್ಲಿ ಈ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಐತಿಹಾಸಿಕವಾಗಿ ನೋಡಿದರೂ ದಕ್ಷಿಣ ಭಾರತದಲ್ಲೇ ಈ ಜ್ವರ ಹೆಚ್ಚಾಗಿ ಕಂಡು ಬಂದಿದೆ.
ಹಾಗೆ ನೋಡಿದರೆ ಉತ್ತರ ಭಾರತದಲ್ಲಿ ದೆಹಲಿ ಮತ್ತು ಗುಜಾರಾತ್ ಬಿಟ್ಟರೆ ಬೇರೆಲ್ಲೂ ಅಷ್ಟಾಗಿ ಡೆಂಗ್ಯೂ ಪ್ರಕರಣಗಳು ವರದಿಯಾಗಿಲ್ಲ.
ಇನ್ನು 2016ರಲ್ಲಿ ದೇಶಾದ್ಯಂತ 1.30 ಲಕ್ಷ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು ಇದಕ್ಕೆ 245 ಜನರು ಬಲಿಯಾಗಿದ್ದಾರೆ. ಆದರೆ ಇದೇ ನಿಜವಾದ ಲೆಕ್ಕವಲ್ಲ ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಮನೆಯಲ್ಲೇ ಗುಣವಾಗುವ ಡೆಂಗ್ಯೂ ಜ್ವರಗಳು ಲೆಕ್ಕಕ್ಕೇ ಸಿಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಕೇವಲ ಶೇಕಡಾ 1 ಡೆಂಗ್ಯೂ ಜ್ವರಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ವರ್ಷ ದೇಶಾದ್ಯಂತ ವರದಿಯಾದ ಪ್ರಕರಣಗಳನ್ನು ನೋಡುವುದಾದರೆ,
1. ಕೇರಳ - 11,581 ಪ್ರಕರಣಗಳು, 20 ಸಾವು
2. ತಮಿಳುನಾಡು - 4,654 ಪ್ರಕರಣಗಳು, 1 ಸಾವು
3. ಕರ್ನಾಟಕ - 2,911 ಪ್ರಕರಣಗಳು, 5 ಸಾವು
4. ಆಂಧ್ರ ಪ್ರದೇಶ - 658 ಪ್ರಕರಣಗಳು
5. ಗುಜರಾತ್ - 630 ಪ್ರಕರಣಗಳು