South First pre-poll survey: ಸೌತ್ ಫಸ್ಟ್ನ ಮೂರು ಸಮೀಕ್ಷೆಗಳಲ್ಲಿಯೂ ಸಿಎಂ ಆಗಿ ಸಿದ್ದರಾಮಯ್ಯಗೆ ಅಗ್ರಸ್ಥಾನ!
ಬೆಂಗಳೂರು, ಮೇ. 07: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನವು ನಡೆಯಲಿದೆ ಈ ಹಿನ್ನೆಲೆ ಪಕ್ಷಗಳು ಕೊನೆಯ ಹಂತದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ. ಇದರ ಬೆನ್ನಲ್ಲೆ ಮೇ 1 ಮತ್ತು 5 ರ ನಡುವೆ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಅಂತಿಮ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜನಪ್ರಿಯ ಆಯ್ಕೆಯಾಗಿದ್ದು, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 42 ರಷ್ಟು ಜನರು ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆಯೂ ಸಂಸ್ಥೆ ನಡೆಸಿದ ಎರಡು ಸಮೀಕ್ಷೆಗಳಲ್ಲಿಯೂ ಸಿಎಂ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರೆ ಆಯ್ಕೆಯಾಗಿದ್ದರು.

ಇನ್ನು, ಕರ್ನಾಟಕದಲ್ಲಿ ಸೌತ್ ಫಸ್ಟ್ಗಾಗಿ ಪೀಪಲ್ಸ್ ಪಲ್ಸ್ ನಡೆಸಿದ ಅಂತಿಮ ಚುನಾವಣಾ ಪೂರ್ವ ಸಮೀಕ್ಷೆಯು ಕರ್ನಾಟಕದಲ್ಲಿ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ 105 ರಿಂದ 117 ಸ್ಥಾನಗಳನ್ನು ಗೆಲ್ಲಬಹುದು ಎಂದಿದೆ. ಈ ಮೂಲಕ ಕಾಂಗ್ರೆಸ್ ಸರಳ ಬಹುಮತ ಪಡೆಯುವುದು ಖಚಿತವಾಗಿದೆ. ಇನ್ನು, ಅಧಿಕಾರದಲ್ಲಿರುವ ಬಿಜೆಪಿ 81 ರಿಂದ 93 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಜೆಡಿಎಸ್ 24 ರಿಂದ 29 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಸ್ವತಂತ್ರ ಮತ್ತು ಇತರ ಪಕ್ಷದ ಅಭ್ಯರ್ಥಿಗಳು ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
*ಮುಖ್ಯಮಂತ್ರಿ ಅಭ್ಯರ್ಥಿಗೆ ಸಿದ್ದರಾಮಯ್ಯ ಅಗ್ರಸ್ಥಾನ*
ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ನಡೆಸಿದ ಎಲ್ಲಾ ಮೂರು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ, ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇತರರನ್ನು ಮೀರಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಆಯ್ಕೆಯಲ್ಲಿ ಮೇ 1 ರಿಂದ ಮೇ 5 ರವರೆಗೆ ನಡೆದ ಅಂತಿಮ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ, ಪ್ರತಿಕ್ರಿಯಿಸಿದವರಲ್ಲಿ 42 ಪ್ರತಿಶತದಷ್ಟು ಜನರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶೇ 24ರಷ್ಟು ಮತದಾರರು ಆಯ್ಕೆ ಮಾಡಿದರೆ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಶೇ 17ರಷ್ಟು ಮತದಾರರು ಆಯ್ಕೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ, ಶೇಕಡಾ 14 ಪ್ರತಿಶತದಷ್ಟು ಜನರು ಆಯ್ಕೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಶೇಕಡಾ ಮೂರರಷ್ಟು ಮಂದಿ ಮಾತ್ರ ಆಯ್ಕೆ ಮಾಡಿದ್ದಾರೆ.
ಇನ್ನು, ಕರ್ನಾಟಕದ ಅಭಿವೃದ್ಧಿಗೆ ಯಾವ ಪಕ್ಷ ಉತ್ತಮ ಎಂಬ ಪ್ರಶ್ನೆಗೆ ಶೇಕಡಾ 46 ರಷ್ಟು ಜನರು ಕಾಂಗ್ರೆಸ್, ಶೇಕಡಾ 34 ರಷ್ಟು ಬಿಜೆಪಿ ಮತ್ತು ಶೇಕಡಾ 14 ರಷ್ಟು ಜೆಡಿಎಸ್ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಬೇಕೇ ಎಂಬ ಪ್ರಶ್ನೆಗೆ, 53 ಪ್ರತಿಶತ ಮಂದಿ ಇಲ್ಲ ಎಂದು ಹೇಳಿದ್ದಾರೆ. 41% ಜನರು ಹೌದು ಎಂದಿದ್ದು, ಆರು ಪ್ರತಿಶತ ಜನರು "ಹೇಳಲು ಸಾಧ್ಯವಿಲ್ಲ" ಎಂದು ತಿಳಿಸಿರುವುದಾಗಿ ಸಮೀಕ್ಷೆ ವರದಿ ಮಾಡಿದೆ.












Click it and Unblock the Notifications