ಸೋನಿಯಾ, ರಾಹುಲ್ ವಿದೇಶಕ್ಕೆ: ಸದ್ಯಕ್ಕಂತೂ ಮಲ್ಲಿಕಾರ್ಜುನ ಖರ್ಗೆ 'ಕೈ' ಖಾಲಿ
ರಾಜಕೀಯದಲ್ಲಿ ಅವರಿಗಿದ್ದ ಅನುಭವದ ಲಾಭವನ್ನು ಪಡೆದುಕೊಳ್ಲದ, ಪಕ್ಷ ಮತ್ತು ಹೈಕಮಾಂಡ್ ನಿಷ್ಟರಾಗಿದ್ದರೂ, ಮಲ್ಲಿಕಾರ್ಜುನ ಖರ್ಗೆಗೆ, ಏನು ಅರ್ಹವಾಗಿ ಸಿಗಬೇಕಿತ್ತೋ, ಅದು ಸಿಕ್ಕಿಲ್ಲ ಎನ್ನುವುದು ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿರುವ ಮಾತು.
ಕರ್ನಾಟಕ ರಾಜ್ಯ ಕಾಂಗ್ರೆಸ್ ನಲ್ಲಿ ಪಕ್ಷವನ್ನು ಮುನ್ನಡೆಸುವವರು ಯಾರು, ಸಿಎಂ ಯಾರಾಗಬೇಕು ಎನ್ನುವ ವಿಚಾರ ಬಂದಾಗ, ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಬಹಳಷ್ಟು ಬಾರಿ ಕೇಳಿಬಂದಿದ್ದು ಹೌದು. ಅಷ್ಟೇ ವೇಗದಲ್ಲಿ ಅದು ಠುಸ್ ಆಗಿದ್ದೂ ನಿಜ ಕೂಡಾ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗಾದ ದೊಡ್ಡ ಸೆಟ್ ಬ್ಯಾಕ್ ಅಂದರೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಆದ ಸೋಲು. ಆದರೂ, ಅಂತಹ ಹಿರಿಯ ನಾಯಕರ ಅನುಭವ ನಮಗೆ ಬೇಕು ಎಂದು ಸೋನಿಯಾ ಗಾಂಧಿ ವಿಶೇಷ ಮುತುವರ್ಜಿ ತೋರಿಸಿ, ಖರ್ಗೆ ಹೆಸರನ್ನು ರಾಜ್ಯಸಭೆಗೆ ಸೂಚಿಸಿದ್ದರು.
ಗಮನಿಸಬೇಕಾದ ಅಂಶವೇನಂದರೆ, ಇತ್ತ, ಕೆಪಿಸಿಸಿ ಕಚೇರಿಯಲ್ಲಿ ಅಭ್ಯರ್ಥಿ ಸಂಬಂಧ ಚರ್ಚೆ ನಡೆಯುತ್ತಿದ್ದರೆ, ಅತ್ತ, ಸೋನಿಯಾ, ಖರ್ಗೆ ಸಾಹೇಬ್ರ ಹೆಸರನ್ನು ಘೋಷಿಸಿಯಾಗಿತ್ತು. ಪಕ್ಷ ನಿಷ್ಠೆಗೆ, ಖರ್ಗೆಗೆ ಹೈಕಮಾಂಡ್ ಸೂಕ್ತ ಮರ್ಯಾದೆಯನ್ನು ಕೊಟ್ಟಿತು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ, ಎಐಸಿಸಿ ಪುನರ್ ರಚನೆಯಲ್ಲಿ ಆಗಿದ್ದೇನು?

ನಾಯಕತ್ವ ಬದಲಾವಣೆ, ಪಕ್ಷದ 23 ಮುಖಂಡರು ಪತ್ರ
ನಾಯಕತ್ವ ಬದಲಾವಣೆ, ಕುಟುಂಬ ರಾಜಕಾರಣದಿಂದ ಹೊರಬರಬೇಕೆಂದು, ಪಕ್ಷದ 23 ಮುಖಂಡರು ಪತ್ರ ಬರೆದ ನಂತರ, ಸೋನಿಯಾ ಗಾಂಧಿ, ಎಐಸಿಸಿಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡಿದ್ದರು. ಅದರಲ್ಲಿ, ಅಚ್ಚರಿಯ ವಿಷಯವೆಂದರೆ, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊರಗಿಟ್ಟಿದ್ದು.

ರಾಜ್ಯಸಭೆಯಲ್ಲಿ ಪಕ್ಷದ ನಾಯಕ
ಪತ್ರ ವ್ಯವಹಾರ ಮತ್ತು ಖರ್ಗೆಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಹೈಕಮಾಂಡ್ ನಿಷ್ಠರಾಗಿದ್ದ ಖರ್ಗೆಯವರನ್ನು ಹೊರಗಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಬಂದಾಗ, ಆ ವೇಳೆ, ಸಿಕ್ಕ ಉತ್ತರ, ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಮಾಡಲಾಗುವುದು ಎನ್ನುವುದು. ಈ ಸಂಬಂಧ ಖರ್ಗೆಯವರಿಗೆ ಖಚಿತ ಭರವಸೆ ಸಿಕ್ಕಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕಾಂಗ್ರೆಸ್ಸಿನ ನಾಯಕರಾಗಿರುವ ಗುಲಾಂನಬಿ ಆಜಾದ್
ಸದ್ಯ, ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ನಾಯಕರಾಗಿರುವ ಗುಲಾಂನಬಿ ಆಜಾದ್ ಅವರ ಅವಧಿ 15.02.2021ಕ್ಕೆ ಮುಕ್ತಾಯಗೊಳ್ಳಲಿದೆ. ಗುಲಾಂನಬಿ, ಹೈಕಮಾಂಡ್ ಗೆ ಪತ್ರ ಬರೆದ ಪ್ರಮುಖರಲ್ಲಿ ಒಬ್ಬರು. ಅವರನ್ನೂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಹಾಗಾಗಿ, ಖರ್ಗೆ ಅವರನ್ನು ರಾಜ್ಯಸಭೆಯ ಕಾಂಗ್ರೆಸ್ ನಾಯಕರಾಗಿ ನೇಮಿಸಬಹುದು ಎನ್ನುವ ಮಾತು ಸದ್ಯಕ್ಕಂತೂ ಸುಳ್ಳಾಗಿದೆ. ಒಂದು ವೇಳೆ, ಆ ರೀತಿ ಮಾಡಿದರೆ, ಗುಲಾಂನಬಿ ಅಸಮಾಧಾನಕ್ಕೆ ಕಾರಣವಾಗಬಹುದು.
Recommended Video

ಸೋನಿಯಾ, ರಾಹುಲ್ ವಿದೇಶಕ್ಕೆ: ಸದ್ಯಕ್ಕಂತೂ ಖರ್ಗೆ ಖಾಲಿ 'ಕೈ'
ಆರೋಗ್ಯ ತಪಾಸಣೆಗಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರನ ಸಮೇತ ವಿದೇಶಕ್ಕೆ ಹೋಗಿದ್ದಾರೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಸುಮಾರು ಒಂದು ತಿಂಗಳು ಅವರು ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಕಮ್ಮಿ. ಸಂಸತ್ತಿನ ಅಧಿವೇಶನ ನಾಳೆಯಿಂದ (ಸೆ 14) ಆರಂಭವಾಗಲಿದೆ. ಹಾಗಾಗಿ, ಸದ್ಯಕ್ಕಂತೂ ಕಾಂಗ್ರೆಸ್ಸಿಗೆ ಗುಲಾಂನಬಿ ಆಜಾದ್ ಅವರೇ ದಿಕ್ಕು. ಇನ್ನು, ಮುಂದಿನ ಬದಲಾವಣೆ ಆಗುವವರೆಗೆ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರದ್ದು, ರಾಜ್ಯಸಭಾ ಸದಸ್ಯ ಎನ್ನುವುದನ್ನು ಬಿಟ್ಟರೆ, ಖಾಲಿ ಕೈ ಮಾತ್ರ..












Click it and Unblock the Notifications