Land Acquisition: ಸ್ವಿಫ್ಟ್ ಸಿಟಿ ವಿರೋಧಿಸಿದ ರೈತರಿಗೆ ಲಾಠಿ ಏಟಿನ ಉತ್ತರ: ಇದು ಸರ್ಕಾರದ 6ನೇ ಗ್ಯಾರಂಟಿ: ವಿಪಕ್ಷ ನಾಯಕ
ಬೆಂಗಳೂರು: ಬಿಡದಿ ರೈತರ ಹೋರಾಟದಂತೆ ಆನೇಕಲ್ ತಾಲೂಕಿನ ಸರ್ಜಾರಪುರ ಭಾಗದಲ್ಲಿ ಸ್ವಿಫ್ಟ್ ಸಿಟಿ ವಿರೋಧಿದ ಸ್ಥಳೀಯರ ರೈತರು ಹೋರಾಟ ಮುಂದುವರಿಸಿದ್ದಾರೆ. ಅವರ ಪ್ರತಿಭಟನೆ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ನೂರಾರು ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ವಿಪಕ್ಷ ಖಂಡಿಸಿದ್ದು, ರೈತಪರ ಹೋರಾಟದ ಎಚ್ಚರಿಕೆ ನೀಡಿದೆ.
ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿದ್ದಾರೆ. 'ಕರ್ನಾಟಕದಲ್ಲಿ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನ್ನದಾತನಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ರೈತರ ಹೊಟ್ಟೆಗೆ ಹೊಡೆದು, ಅವರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದೆ ಈ ದರಿದ್ರ ಸರ್ಕಾರ. ಅನ್ಯಾಯವನ್ನು ಪ್ರಶ್ನಿಸಿದ ಅಮಾಯಕ ರೈತರು ಹಾಗೂ ಮಹಿಳಾ ಹೋರಾಟಗಾರರ ಮೇಲೆ ಪೊಲೀಸರನ್ನು ಬಿಟ್ಟು ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದೆ' ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಆನೇಕಲ್ ಭಾಗದಲ್ಲಿ ಉದ್ದೇಶಿಸಿರುವ ಸ್ವಿಫ್ಟ್ ಸಿಟಿ ಯೋಜನೆಗಾಗಿ ಭೂಸ್ವಾಧೀನಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ರೈತರು ಸುಮಾರು 400 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕಾರಣಕ್ಕೆ ಬುಧವಾರ ಕೆಐಎಡಿಬಿ ಕಚೇರಿ ಮುತ್ತಿಗೆ ಯತ್ನ ನಡೆಸಿದಾಗ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. 'ಭೂಸ್ವಾಧೀನ ವಿರೋಧಿಸಿದರೆ ಲಾಠಿ ಏಟು ಗ್ಯಾರೆಂಟಿ, ಇದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರೆಂಟಿ' ಎಂದು ಕಾಂಗ್ರೆಸ್ ಆಡಳಿತವನ್ನು ಲೇವಡಿ ಮಾಡಿದ್ದಾರೆ.
ಆನೇಕಲ್ನಲ್ಲಿ ನಡೆದದ್ದು ಕೇವಲ ಲಾಠಿ ಪ್ರಹಾರವಲ್ಲ, ಅದು ಪ್ರಜಾಪ್ರಭುತ್ವದ ಕಗ್ಗೊಲೆ!. ಸರ್ಜಾಪುರ ಹೋಬಳಿಯ 11 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಕಳೆದ 400 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರೂ ಈ ಅಹಂಕಾರಿ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಘಟನೆ ಬಳಿಕ ಹತ್ತಾರು ಮಂದಿ ಆಸ್ಪತ್ರೆಗೆ ದಾಖಲು
ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ 600ಕ್ಕೂ ಹೆಚ್ಚು ರೈತರನ್ನು ಮಡಿವಾಳ ಚೆಕ್ ಪೋಸ್ಟ್ ಬಳಿ ತಡೆಯಲಾಗಿದೆ. ಬಲವಂತವಾಗಿ ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ಈ ದೌರ್ಜನ್ಯದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳನ್ನು, ವೃದ್ಧ ತಾಯಂದಿರನ್ನು ರಸ್ತೆಯಲ್ಲಿ ಎಳೆದಿದ್ದಾಡಿ ಅಮಾನವೀಯವಾಗಿ ಹೊಡೆಯಲಾಗಿದೆ.
ಸಿಎಂ "ದೌರ್ಜನ್ಯ ಗ್ಯಾರೆಂಟಿ"ಗೆ ಉತ್ತರಿಸಿ?
ರೈತ ದೇವರಾಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದರೂ ಅವರಿಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸದಷ್ಟು ಈ ಸರ್ಕಾರದ ಹೃದಯ ಕಲ್ಲಾಗಿದೆಯೇ? ಖಾಸಗಿ ವಾಹನದಲ್ಲಿ ಕರೆದೊಯ್ಯಬೇಕಾದ ಪರಿಸ್ಥಿತಿ ತಂದಿಟ್ಟ ನಿಮ್ಮ ಆಡಳಿತಕ್ಕೆ ಧಿಕ್ಕಾರವಿರಲಿ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ನಿಮ್ಮ ಈ "ದೌರ್ಜನ್ಯ ಗ್ಯಾರೆಂಟಿ"ಗೆ ಉತ್ತರಿಸಿ ಎಂದು ಅವರು ಆಗ್ರಹಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆಕೋರರಿಂದ ಕಮಿಷನ್?
ಸ್ಮಾರ್ಟ್ ಸಿಟಿ ನಿರ್ಮಾಣದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ರೈತರ ಫಲವತ್ತಾದ ಜಮೀನನ್ನು ಧಾರೆ ಎರೆಯಲು ಯಾರಿಂದ ಕಮಿಷನ್ ಪಡೆದಿದ್ದೀರಿ?. ಗ್ಯಾರೆಂಟಿ ಅಂತ ಹೇಳಿ ಅಧಿಕಾರಕ್ಕೆ ಬಂದು, ಈಗ ಹಗಲು-ರಾತ್ರಿ ಕಷ್ಟಪಟ್ಟು ಅನ್ನ ಕೊಡುವ ರೈತರ ಮೇಲೆ ಬೂಟುಗಾಲಿನಿಂದ ತುಳಿಯುವುದು, ಲಾಠಿಯಿಂದ ಬಡಿಯುವುದೇ ನೀವು ಕೊಡುವ ಆರನೇ ಗ್ಯಾರೆಂಟಿನಾ?.
400 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಷ್ಟು ನೀವು ಸೊಕ್ಕಿನಿಂದ ಬೀಗುತ್ತಿದ್ದೀರಾ? ಎಂದು ಅವರು ಸಾಲು ಸಾಲು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಭೂಸ್ವಾಧೀನ ಸರ್ಕಾರಕ್ಕೆ ವಿಪಕ್ಷ ನಾಯಕ ನೇರ ಎಚ್ಚರಿಕೆ
ರೈತರ ಮೇಲಿನ ಈ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಿ, ಆನೇಕಲ್ನ ಸರ್ಜಾಪುರ ಭಾಗದ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಕೂಡಲೇ ಕೈಬಿಡಬೇಕು. ಅಮಾಯಕ ರೈತರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಮತ್ತು ಅದಕ್ಕೆ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು.
ಗಾಯಗೊಂಡ ಹಾಗೂ ಅನಾರೋಗ್ಯಕ್ಕೆ ಒಳಗಾದ ಪ್ರತಿಭಟನಾಕಾರರಿಗೆ ಸರ್ಕಾರವೇ ಸಂಪೂರ್ಣ ವೈದ್ಯಕೀಯ ವೆಚ್ಚ ಮತ್ತು ಸೂಕ್ತ ಪರಿಹಾರವನ್ನು ನೀಡಬೇಕು. ಅನ್ನದಾತನ ಕಣ್ಣೀರು ಮತ್ತು ರಕ್ತ ಈ ನೆಲದ ಮೇಲೆ ಬಿದ್ದರೆ ನಿಮ್ಮ ಇಡೀ ಸರ್ಕಾರ ಸರ್ವನಾಶವಾಗುವುದು ಗ್ಯಾರೆಂಟಿ. ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ವಿರುದ್ಧ ಬಿಜೆಪಿ ನೊಂದ ರೈತರ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.














Click it and Unblock the Notifications