ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡವರಲ್ಲಿ ತಮಿಳಿಗರೇ ಹೆಚ್ಚು, ಕನ್ನಡಿಗರ ವಾದವೇನು ?
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ತಮಿಳುನಾಡಿನಿಂದ ಬಂದು ಅಥವಾ ತಮಿಳು ವ್ಯಾಪಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೆಲವು ಕನ್ನಡಿಗರು ಆರೋಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಬೀದಿ ಬದಿ - ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿಕೊಂಡಿರುವ ಬೀದಿ ವ್ಯಾಪಾರಿಗಳು - ಅನಧಿಕೃತ ಅಂಗಡಿ, ಶೆಡ್ಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ಆದರೆ ಇದಕ್ಕೆ ಪರ - ವಿರೋಧ ವ್ಯಕ್ತವಾಗುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವವರಲ್ಲಿ ತಮಿಳಿಗರೇ ಹೆಚ್ಚು ಎನ್ನುವ ವಾದವೊಂದು ಶುರುವಾಗಿದೆ.
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೃಹತ್ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಇದಕ್ಕೆ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಬೆಂಬಲ ಸೂಚಿಸುತ್ತಿದ್ದಾರೆ. ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದು, ಈ ಬರಹವು ಇದೀಗ ವೈರಲ್ ಆಗುತ್ತಿದೆ. "ಬೆಂಗಳೂರು ಪುಟ್ಬಾತ್ ಬಿಡಲ್ಲ, ಅದು ನಮ್ಮ ಆಸ್ತಿ ಅಂತ ಹಠ ಮಾಡುತ್ತಿರುವವರು ತಮಿಳುನಾಡಿನಲ್ಲೂ ವೋಟ್ ಮಾಡುತ್ತಾರೆ. ಬೆಂಗಳೂರಿನ ಅರ್ಧ ಕಾಲುದಾರಿಗಳು ಇವರಿಂದ ಸ್ಲಮ್ಗಳಾಗಿವೆ. ಇವರಲ್ಲಿ ಕೆಲವರ ಕನ್ನಡ ದ್ವೇಷ, ರೌಡಿಸಂ ಕಡಿಮೆಯಾಗಿಲ್ಲ. ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬಾರದು" ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರು ಹೇಳಿದ್ದೇನು
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಇದು ಸರಿಯಾದ ನಿರ್ಧಾರ ಎಂದಿದ್ದಾರೆ. ಶಶಿಕುಮಾರ್ ಡಿ ಎನ್ನುವವರು, ಕೃಷ್ಣಬೈರೇಗೌಡ ಅವರೇ ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆಯನ್ನ ನಿಲ್ಲಿಸಬೇಡಿ. ಒಳ್ಳೆಯ ಕೆಲಸ ಮಾಡ್ತಿದ್ದೀರಿ ಮುಂದುವರೆಸಿ ಎಂದಿದ್ದಾರೆ.
ಕರಿಸ್ವಾಮಿ ಕೆ ಎಂಬವರು, ಇದನ್ನು ನಾನೂ ಗಮನಿಸಿದ್ದೇನೆ. ನಿಮ್ಮ ಅಭಿಪ್ರಾಯಕ್ಕೆ ಅಖಂಡ ಬೆಂಬಲ ಎಂದರೆ, ಸದಾನಂದ ಸಿ. ಗಂಗನಬೀಡು ಎನ್ನುವವರು ಕೃಷ್ಣರಾಜಪುರ, ಗಾಂಧಿನಗರ ಇಲ್ಲೆಲ್ಲ ಕನ್ನಡಿಗರೇ ಫುಟ್ಪಾತ್ ವ್ಯಾಪಾರಿಗಳು. ಇದಕ್ಕೇನು ಪರಿಹಾರ ? ಸರ್ಕಾರವೊಂದು ಪ್ರತಿಯೊಬ್ಬ ನಾಗರಿಕ ಜೀವನ ಹಕ್ಕು ಖಾತರಿಗೊಳಿಸುವ ಸಾಂವಿಧಾನಿಕ ಜವಾಬ್ದಾರಿ ಹೊಂದಿದೆ. ಇದೊಂದು ಮಾನವೀಯ ಸಮಸ್ಯೆಯಾಗಿದ್ದು, ಪರ್ಯಾಯ ಅವಕಾಶ ಕಲ್ಪಿಸುವುದು ಯಾವುದೇ ನಾಗರಿಕ ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.
ಕೆಬಿ ಗಂಗೇಗೌಡ ಎನ್ನುವವರು ಸುಮ್ಮನೆ ಏಕೆ ಕನ್ನಡದವರು, ತಮಿಳಿನವರು, ಮುಸ್ಲಿಂರು, ಇತರರು ಅಂತ ಬೆಂಕಿ ಹಚ್ಚುತ್ತಿರುತ್ತಾರೆ. ಸುಮ್ನನೇ ಇರಿ ಸರ್ಕಾರ ಮಾಡುವ ಕ್ರಮ ಮಾಡುತ್ತೆ, ಒತ್ತುವರಿ ಮಾಡಿಕೊಂಡವರಲ್ಲಿ ಎಲ್ಲ ಜನರು ಸಹ ಇದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications