ರಾಜ್ಯದಲ್ಲಿ ಧಾರಾಕಾರ ಮಳೆ; ಸಿಡಿಲಿಗೆ ಇಬ್ಬರು ಬಲಿ
ಬೆಂಗಳೂರು, ನವೆಂಬರ್ 16: ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಮುಂತಾದೆಡೆ ಬಿರುಸಿನ ಮಳೆಯಾಗಿದೆ. ಸಿಡಿಲಿನಿಂದ ಹಾವೇರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಹಿರೇಕೆರೂರ ತಾಲ್ಲೂಕಿನ ಹೊಸವೀರಾಪುರ ಗ್ರಾಮದ ಶಾಮಣ್ಣ ಭರಮಪ್ಪ ಕುಡವಲ್ಲಿ (62) ಸಿಡಿಲಿಗೆ ಬಲಿಯಾಗಿದ್ದಾರೆ. ಹಾಗೆಯೇ ಸವಣೂರು ತಾಲ್ಲೂಕಿನ ಚಿಲ್ಲೂರಬಡ್ನಿ ಗ್ರಾಮದ ಈರಣ್ಣ ಚಕ್ರಸಾಲಿ (19) ಮಂಗಳವಾರ ಸಿಡಿಲು ಬಡಿದು ಸಾವಿಗೀಡಾಗಿದ್ದು, ಇವರ ತಂದೆ ಲವಪ್ಪ ಚಕ್ರಸಾಲಿ (40) ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.
ಹಿರೇಕೆರೂರ ತಾಲ್ಲೂಕಿನ ಮಡ್ಲೂರು, ದೀವಿಗಿಹಳ್ಳಿ ವ್ಯಾಪ್ತಿಯಲ್ಲಿ, ಅಂದಾಜು 10 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಯ ಮೆದೆಗೆ ರಾಶಿ ಸಿಡಿಲು ಬಡಿದುದರಿಂದ ನಾಶವಾಗಿದೆ. ಬೆಳಗಾವಿಯಲ್ಲಿ ಅರ್ಧತಾಸು ಗುಡುಗು-ಸಿಡಿಲು ಸಹಿತ ಮಳೆಯಾಗಿದೆ.ಕುಂದಗೋಳ ತಾಲ್ಲೂಕು ಕಮಡೊಳ್ಳಿಯಲ್ಲಿ ಅರ್ಧತಾಸು ಆಲಿಕಲ್ಲು ಮಳೆಯಾಗಿದೆ ಬೈಲಹೊಂಗಲದಲ್ಲಿ ಮಳೆ ಸಾಧಾರಣ. ಧಾರವಾಡ ನಗರ ಸೇರಿದಂತೆ ಹುಬ್ಬಳ್ಳಿ, ಕಲಘಟಗಿಯಲ್ಲೂ ಸಾಧಾರಣ ಮಳೆಯಾಗಿದೆ.[ಕೊಡಗಿನ ಸುಂಟಿಕೊಪ್ಪದಲ್ಲಿ ಸುರಿದ ಮೊದಲ ಬೇಸಿಗೆ ಮಳೆ]
ಶಿವಮೊಗ್ಗ ಜಿಲ್ಲೆಯಾದ್ಯಂತ ಮಂಗಳವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಶಿವಮೊಗ್ಗ ನಗರ, ಭದ್ರಾವತಿ, ಶಿಕಾರಿಪುರ, ಸಾಗರ, ಹೊಸನಗರ, ಸೊರಬ ತಾಲ್ಲೂಕು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಿತು. ಸಾಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರದಲ್ಲಿ ಸ್ವಲ್ಪ ಹೊತ್ತು ಮಳೆ ಸುರಿಯಿತು. ಇಲ್ಲಿ ಹಿಂದಿನ ದಿನವೂ ಗುಡುಗು ಸಹಿತ ಮಳೆಯಾಗಿದೆ. ಸಿದ್ದಾಪುರದ ತಗ್ಗುಪ್ರದೇಶದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಮಳೆಯಿಂದ ಒಂದು ಮನೆಗೆ ತೊಂದರೆಯಾಗಿದ್ದು, ಇನ್ನೊಂದು ಮನೆಯ ಕಂಪೌಂಡ್ ಕುಸಿದಿದೆ.[10 ಜಿಲ್ಲೆಗಳಲ್ಲಿ ಅಧಿಕ ಮಳೆ, ಕೆಲವೆಡೆ ಹಾನಿ]
ಮಳೆಯೆ ಇಲ್ಲ ಎಂದು ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ವೇಳೆ ಅಲ್ಲಲ್ಲಿ ಮಳೆಯಾಗಿರುವುದು ಸಂತಸವೇ ಅದರೂ, ಮಳೆ ರೈತರಿಗೆ ಅನುಕೂಲವಾಗಿಲ್ಲ ಎಂಬುದು ಸಂಕಷ್ಟವಾಗಿದೆ.