Breaking: ಭಾರತದಲ್ಲಿ ಸಂಜೆ 6.30ಕ್ಕೆ ಸೂರ್ಯಗ್ರಹಣ ಅಂತ್ಯ
ಬೆಂಗಳೂರು, ಅಕ್ಟೋಬರ್ 25: ದೀಪಾವಳಿ ಅಮಾವಾಸ್ಯೆ ದಿನವೇ ಸಂಭವಿಸಿದ ಸೂರ್ಯಗ್ರಹಣ ಸಂಜೆ 6.30ರ ಹೊತ್ತಿಗೆ ಅಂತ್ಯಗೊಂಡಿದೆ. ಅಕ್ಟೋಬರ್ 25ರ ಮಂಗಳವಾರ ಮಧ್ಯಾಹ್ನವೇ ಪ್ರಾರಂಭಗೊಂಡ ಸೂರ್ಯಗ್ರಹಣವು ಸಂಜೆ ವೇಳೆಗೆ ಮೋಕ್ಷ ಕಾಲವನ್ನು ತಲುಪಿತು.
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಅಡ್ಡಲಾಗಿ ಬಂದ ಸಂದರ್ಭದಲ್ಲಿ ಈ ಭಾಗಶಃ ಸೂರ್ಯಗ್ರಹಣವು ಸಂಭವಿಸಿತು. ಭಾರತದಲ್ಲಿ ಮಧ್ಯಾಹ್ನದ ಸೂರ್ಯಾಸ್ತದ ಮೊದಲು ಕಾಣಿಸಿಕೊಳ್ಳಲಿರುವ ಗ್ರಹಣವು, ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಮಂಗಳವಾರ ಸೂರ್ಯಗ್ರಹಣವು ಗೋಚರಿಸಿತು.
ಈ ಬಾರಿಯ ಗ್ರಹಣದ ಗರಿಷ್ಠ ಗೋಚರತೆಯು ರಷ್ಯಾ ಮತ್ತು ಖಜಕಿಸ್ತಾನ್ನಲ್ಲಿ ಹೆಚ್ಚಾಗಲಿದ್ದು, ಶೇ.80 ರಷ್ಟು ಕಾಣಿಸಿಕೊಳ್ಳಲಿದೆ. ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ ಶೇ.44 ಮತ್ತು ಶೇ.24 ಇತ್ತು. ದೇಶದ ಇತರ ಭಾಗಗಳಲ್ಲಿ ಶೇಕಡಾವಾರು ವ್ಯಾಪ್ತಿಯು ಮೇಲಿನ ಮೌಲ್ಯಗಳಿಗಿಂತ ಕಡಿಮೆ ಇತ್ತು.
ಸಂಜೆ 6.30ಕ್ಕೆ ಮೋಕ್ಷಕಾಲ ತಲುಪಿದ ಗ್ರಹಣ:
*ಸೂರ್ಯಗ್ರಹಣದ ಸೂತಕವು 12 ಗಂಟೆಗೂ ಮೊದಲು ಪ್ರಾರಂಭವಾಗಿತ್ತು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:15ಕ್ಕೆ ಸೂರ್ಯಗ್ರಹಣ ಆರಂಭವಾಗಿದ್ದು, ಸಂಜೆ 6.30ಕ್ಕೆ ಮೋಕ್ಷ ಕಾಲವನ್ನು ತಲುಪಿತು.
ಕರ್ನಾಟಕದಲ್ಲಿ ಸೂರ್ಯಗ್ರಹಣ ಗೋಚರ:
ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೂರ್ಯಗ್ರಹಣ ಗೋಚರಿಸಿತು. ಮಧ್ಯಾಹ್ನ 2.15ರ ಹೊತ್ತಿಗೆೆ ಸೂರ್ಯಗ್ರಹಣದ ಸ್ಪರ್ಶಕಾಲ ಶುರುವಾಗಿದ್ದು, ಮಧ್ಯಾಹ್ನ 4.18ಕ್ಕೆ ಗ್ರಹಣದ ಮಧ್ಯಕಾಲವನ್ನು ತಲುಪಿತು. ಸಂಜೆ 6.30ರ ಹೊತ್ತಿಗೆ ಗ್ರಹಣದ ಮೋಕ್ಷ ಕಾಲವನ್ನು ಮುಟ್ಟಿತ್ತು.
ಬೆಂಗಳೂರು, ಹಾಸನ, ಮೈಸೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಸೇರಿದಂತೆ ಎಲ್ಲ ನಗರಗಳಲ್ಲೂ ಸೂರ್ಯಗ್ರಹಣ ಗೋಚರಿಸಿತು.
ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ:
ದೇಶಾದ್ಯಂತ ಗೋಚರಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದೇವಸ್ಥಾನಗಳ ಬಾಗಿಲು ಹಾಕಲಾಗಿತ್ತು. ಸೂರ್ಯಗ್ರಹಣ ಅಂತ್ಯಗೊಂಡ ನಂತರದಲ್ಲಿ ದೇವಸ್ಥಾನಗಳ ಬಾಗಿಲನ್ನು ತೆರೆದು, ಶುದ್ಧೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಜನರು ಸಹ ಸೂರ್ಯಗ್ರಹಣ ಮೋಕ್ಷ ಕಾಲದ ನಂತರದಲ್ಲಿ ಸ್ನಾನ ಮಾಡಿಕೊಂಡು ದೇವಸ್ಥಾನಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.