Get Updates
Get notified of breaking news, exclusive insights, and must-see stories!

ಪೋಷಕರ ಚಿಂತೆಗೆ ಕಾರಣವಾದ 6 ವರ್ಷ ಕಡ್ಡಾಯ ನಿಯಮ: ಸಚಿವರು ಹೇಳಿದ್ದೇನು?

ಬೆಂಗಳೂರು, ಮಾರ್ಚ್‌ 30: ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಪೋಷಕರ ಚಿಂತೆಗೆ ಕಾರಣವಾಗಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಪ್ರವೇಶಕ್ಕೆ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ಆದರೆ ಈ ನಿಯಮವನ್ನು ಸಡಿಲಗೊಳಿಸಬೇಕು ಎಂದು ಚರ್ಚೆಗಳು ನಡೆಯುತ್ತಿವೆ. ಪೋಷಕರು ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪಗೂ ಮನವಿ ಮಾಡದ್ದಾರೆ.

ಈ ಕುರಿತು ಮಾತನಾಡಿರುವ ಸಚಿವರು, "ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸಿನ ಆಧಾರದ ಮೇಲೆ ಒಂದನೇ ತರಗತಿ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತು ತೀರ್ಮಾನಿಸಲಾಗುತ್ತದೆ" ಎಂದು ಹೇಳಿದ್ದಾರೆ. ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಕೆಲವು ತಿಂಗಳು ಬಾಕಿ ಇದ್ದು, ಪೋಷಕರು ಸರ್ಕಾರದ ತೀರ್ಮಾನಕ್ಕಾಗಿ ಕಾದು ಕುಳಿತಿದ್ದಾರೆ.

Six Years Age For Children To Get Admission For Class 1 Demand For Rule Relaxation

ಕರ್ನಾಟಕದಲ್ಲಿ ಆಡಳಿತ ನಡೆಸಿದ ಹಿಂದಿನ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಭಾಗವಾಗಿ ಶಾಲಾ ಪ್ರವೇಶದ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿಗೊಳಿಸಿದೆ. ಕಾಂಗ್ರೆಸ್ ಪಕ್ಷ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಇಪಿ ರದ್ದುಗೊಳಿಸುವ ಭರವಸೆಯನ್ನು ಕೊಟ್ಟಿತ್ತು. ಅಲ್ಲದೇ ಕಾಂಗ್ರೆಸ್ ಸರ್ಕಾರ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸಲು ಆಯೋಗವನ್ನು ರಚನೆ ಮಾಡಿದೆ.

ಪೋಷಕರ ಚಿಂತೆಗೆ ಕಾರಣವಾದ ನಿಯಮ: ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ. ಹಲವು ಶಾಲೆಗಳಲ್ಲಿ 6 ವರ್ಷ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕಾಗಿಯೇ ಮಕ್ಕಳ ಪ್ರವೇಶ ನಿರಾಕರಿಸಲಾಗುತ್ತಿದೆ. ಎಲ್‌ಕೆಜಿ, ಯುಕೆಜಿ ಪೂರ್ಣಗೊಳಿಸಿದ ಮಕ್ಕಳು 6 ವರ್ಷ ತುಂಬದ ಕಾರಣ ಒಂದು ವರ್ಷ ಮನೆಯಲ್ಲಿಯೇ ಇರಬೇಕೆ? ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಸಚಿವ ಮಧು ಬಂಗಾರಪ್ಪ ಮಾತನಾಡಿ, "1ನೇ ತರಗತಿ ಪ್ರವೇಶಕ್ಕೆ 2025-26ನೇ ಶೈಕ್ಷಣಿಕ ವರ್ಷದಿಂದ 6 ವರ್ಷ ಕಡ್ಡಾಯಗೊಳಿಸಲಾಗಿದೆ. ವಯೋಮಿತಿ ಸಡಿಲಿಕೆ ಮಾಡುವಂತೆ ಹಲವು ಪೋಷಕರು ಮನವಿ ಮಾಡಿದ್ದಾರೆ. ರಾಜ್ಯ ಶಿಕ್ಷಣ ನೀತಿ ಆಯೋಗ ವರದಿ ನೀಡಿದ ಬಳಿಕ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

2022ರ ನವೆಂಬರ್‌ನಲ್ಲಿಯೇ ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿತ್ತು. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು ಜೂನ್‌ 1, 2025ರೊಳಗೆ 6 ವರ್ಷ ಪೂರ್ಣಗೊಳಿಸಿರಬೇಕು ಎಂದು ಹೇಳಿತ್ತು. ಈ ಆದೇಶ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರಿಗೆ ಪತ್ರ: ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಸಹ ಧ್ವನಿಯನ್ನು ಎತ್ತಿದೆ. ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಈ ಕುರಿತು ಸಚಿವ ಮಧು ಬಂಗಾರಪ್ಪಗೆ ಪತ್ರವನ್ನು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ರಾಜ್ಯದಲ್ಲಿ ಸರ್ಕಾರಿ ಶಾಲೆ ಅಥವಾ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಇದರಿಂದ ಕೇವಲ ಒಂದು ದಿನ ಅಥವಾ ಒಂದು ತಿಂಗಳ ವಯಸ್ಸು ಕಡಿಮೆ ಇರುವ ಮಕ್ಕಳು ಒಂದು ವರ್ಷ ಒಂದನೇ ತರಗತಿ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ ಎಂದು ಹಲವಾರು ಪಾಲಕರಿಂದ ದೂರುಗಳು ಬಂದಿವೆ' ಎಂದು ಹೇಳಿದ್ದಾರೆ.

'ಈ ಕುರಿತು ಸದರಿ ನಿಯಮವನ್ನು ಸಡಿಲಗೊಳಿಸಿ, 5 ವರ್ಷ 6 ತಿಂಗಳ ಮಿತಿಯನ್ನು ಜಾರಿಗೊಳಿಸಬೇಕೆಂದು ಕೋರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ನನ್ನ ಕೋರಿಕೆಗೆ ಸ್ಪಂದಿಸಿ ರಾಜ್ಯಸರ್ಕಾರ ಶೀಘ್ರವೇ ನಿಯಮವನ್ನು ಜಾರಿಗೊಳಿಸುವುದು ಎಂಬ ನಿರೀಕ್ಷೆ ನನ್ನದು' ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಅರವಿಂದ್ ಬೆಲ್ಲದ್ ಪತ್ರ ರಾಜ್ಯಾದ್ಯಂತ ಸರ್ಕಾರಿ/ ಖಾಸಗಿ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ ಜೂನ್ 1ಕ್ಕೆ ಇದ್ದಂತೆ ಮಗುವಿಗೆ 6 ವರ್ಷ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ 5 ವರ್ಷ 6 ತಿಂಗಳ ಮಿತಿಯನ್ನು ಜಾರಿಗೊಳಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ವಿನಂತಿಸುವುದೇನೆಂದರೆ ರಾಜ್ಯಾದ್ಯಂತ ಸರ್ಕಾರಿ/ ಖಾಸಗಿ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ ಪ್ರತಿ ವರ್ಷ ಜೂನ್ 1ಕ್ಕೆ ಇದ್ದಂತೆ ಮಗುವಿಗೆ 6 ವರ್ಷ ವಯಸ್ಸಿನ ಮಿತಿಯ ಬಗ್ಗೆ ಹಲವಾರು ಪಾಲಕರಿಂದ ಸಾಕಷ್ಟು ಆಕ್ಷೇಪಣೆಗಳು/ ದೂರುಗಳ ಕೇಳಿಬಂದಿದ್ದು, ಕೇವಲ ಒಂದು ದಿನ/ ಒಂದು ತಿಂಗಳ ವಯಸ್ಸು ಕಡಿಮೆ ಇರುವ ಮಕ್ಕಳು ಒಂದನೇ ತರಗತಿ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ ಎಂದು ಮಗುವಿನ ಹಲವಾರು ಪಾಲಕರು ನನ್ನ ಗಮನಕ್ಕೆ ತಂದಿರುತ್ತಾರೆ.

ಆದ್ದರಿಂದ ಸದರಿ ನಿಯಮವನ್ನು ಸಡಿಲಗೊಳಿಸಿ 5 ವರ್ಷ 6 ತಿಂಗಳ ಮಿತಿಯನ್ನು ಜಾರಿಗೊಳಿಸಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+