ವಯಸ್ಸಿನ ಕಾರಣ 6 ಸಾವಿರ ಬಿಸಿಯೂಟ ನೌಕರರ ವಜಾ, ಸರ್ಕಾರಕ್ಕೆ ಛೀಮಾರಿ!
ಬೆಂಗಳೂರು, ಆ. 17: ರಾಜಧಾನಿ ಬೆಂಗಳೂರು ಎರಡು ಹೋರಾಟಗಳಿಗೆ ಸಾಕ್ಷಿಯಾಗಿದೆ. ಪೋಷಣ್ ಅಭಿಯಾನ ಯೋಜನೆ ಅಡಿ ನೇಮಕಗೊಂಡಿದ್ದ 200 ಸಮನ್ವಯ ಅಧಿಕಾರಿಗಳನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿರುವ ಆದೇಶ ವಿರೋಧಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಾಯಂಮೇತರರ ನೌಕರರ ಒಕ್ಕೂಟ ಸ್ವಾತಂತ್ರ ಉದ್ಯಾನವದಲ್ಲಿ ಹೋರಾಟ ಹಮ್ಮಿಕೊಂಡಿದೆ. ವಯಸ್ಸಿನ ಕಾರಣ ನೀಡಿ ಏಕಾಏಕಿ 6 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಕ್ರಮ ಖಂಡಿಸಿ 'ಬಿಸಿಯೂಟ ಬಂದ್' ಅನಿರ್ಧಿಷ್ಟ ಹೋರಾಟವನ್ನು ಕರ್ನಾಟಕ ಅಕ್ಷರ ದಾಸೋಹ ನೌಕರರ ಒಕ್ಕೂಟ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರದಿಂದ ಆರಂಭಿಸಿದೆ.
ವಯಸ್ಸಿನ ಕಾರಣ ನೀಡಿ 6 ಸಾವಿರ ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ನಾಲ್ಕು ಸಾವಿರ ಬಿಸಿಯೂಟ ನೌಕರರು ಮಂಗಳವಾರದಿಂದ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಹೀಗೊಂದು ಪ್ರಸ್ತಾಪ: ಹಿಂದೂ ರಾಷ್ಟ್ರವಾದರೆ ಭಾರತ, ವಾರಣಾಸಿಯೇ ರಾಜಧಾನಿ!
ನಗರದ ಸ್ವಾತಂತ್ರ್ಯ ಉದ್ಯಾನವದಲ್ಲಿ ನಾಲ್ಕು ಸಾವಿರ ಬಿಸಿಯೂಟ ನೌಕರರು ಜಮಾಯಿಸಿದ್ದು, ಎರಡು ದಿನದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದ ವಿವಿಧ ಶಾಲೆಗಳಲ್ಲಿ ಹಲವು ವರ್ಷಗಳಿಂದ ಬಿಸಿಯೂಟ ಮಾಡುವ ಸೇವೆಯಲ್ಲಿ ತೊಡಗಿದ್ದ 6 ಸಾವಿರ ನೌಕರರನ್ನು ಶಿಕ್ಷಣ ಇಲಾಖೆ ಏಕಾಏಕಿ ವಜಾ ಮಾಡಿದೆ. 60 ವರ್ಷ ತುಂಬಿದ ಕಾರಣ ನೀಡಿ ಏಕಾಏಕಿ ಸೇವೆಯಿಂದ ವಜಾ ಮಾಡಿ ಶಿಕ್ಷಣ ಇಲಾಖೆ ಅನ್ಯಾಯ ಮಾಡಿದೆ. ಶಿಕ್ಷಣ ಇಲಾಖೆ ಈ ಕೂಡಲೇ ಆದೇಶವನ್ನು ವಾಪಸು ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ತಿಳಿಸಿದ್ದಾರೆ.
ಬಿಸಿಯೂಟ ನೌಕರರಿಗೆ ಐದು ಪೈಸೆ ಪರಿಹಾರ
ಅಕ್ಷರ ದಾಸೋಹ ಕಾರ್ಯಕ್ರಮದಡಿ ಹಲವು ವರ್ಷಗಳಿಂದ ಬಿಸಿಯೂಟ ನೌಕರರು ಕೇವಲ 3500 ರೂ.ಗೆ ಸೇವೆ ಸಲ್ಲಿಸಿದ್ದಾರೆ.
ಹಲವಾರು ವರ್ಷದಿಂದ ಕೆಲಸ ಮಾಡಿದ ಬಿಸಿಯೂಟ ನೌಕರರಿಗೆ ಐದು ಪೈಸೆ ಪರಿಹಾರ ನೀಡದೇ ಸೇವೆಯಿಂದ ವಜಾ ಮಾಡಲಾಗಿದೆ. ಇವರುಗಳಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾದಲ್ಲಿ ನಾಯಿ ಸಾವಿನ ಬಗ್ಗೆ ಕಣ್ಣೀರು ಹಾಕುತ್ತಾರೆ. ಸಾವಿರಾರು ನೌಕರರ ಕಷ್ಟ ಕೇಳುವ ವ್ಯವದಾನ ಬೊಮ್ಮಾಯಿ ಅವರಿಗೆ ಇಲ್ಲದಂತಾಗಿದೆ. ಮುಖ್ಯಮಂತ್ರಿಯಾಗಲೀ, ಸಚಿವರಾಗಲೀ ಬಿಸಿಯೂಟ ನೌಕರರ ಕಷ್ಟ ಕೇಳಲು ಬರದಿರುವುದು ಅವರ ಕಾರ್ಮಿಕ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಸಿಯೂಟ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಷ್ಕರ ನಿರತ ಹೋರಾಟಗಾರರು ಎಚ್ಚರಿಕೆ
ವಯಸ್ಸಿನ ಕಾರಣ ನೀಡಿ ಸೇವೆಯಿಂದ ತೆಗೆದು ಹಾಕಿರುವ 6 ಸಾವಿರ ನೌಕರರಿಗೆ ತಲಾ ಒಂದು ಲಕ್ಷ ರೂ. ನಂತೆ ಪರಿಹಾರ ನೀಡಬೇಕು. ವರ್ಷಗಳಿಂದ ಸೇವೆ ಸಲ್ಲಿಸಿದ ಬಿಸಿಯೂಟ ನೌಕರರಿಗೆ ಬಾಕಿ ಇರುವ ಎರಡೂವರೆ ತಿಂಗಳ ವೇತನವನ್ನು ಪಾವತಿ ಮಾಡಬೇಕು. ನಮ್ಮ ಸಮಸ್ಯೆ ಈಡೇರಿಸದ ಹೊರತೂ ಸ್ವಾತಂತ್ರ್ಯ ಉದ್ಯಾನವನದಿಂದ ಹೊರ ಹೋಗುವುದಿಲ್ಲ ಎಂದು ಮುಷ್ಕರ ನಿರತ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ವಯಸ್ಸಿನ ಕಾರಣ ನೀಡಿ 6 ಸಾವಿರ ನೌಕರರನ್ನು ಸೇವೆಯಿಂದ ವಜಾ ಮಾಡಿರುವುದು ನ್ಯಾಯ ಸಮ್ಮತವಲ್ಲ. ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿದವರಿಗೆ ಗ್ರಾಚ್ಯುಯಿಟಿ ನೀಡಬೇಕು. ಕನಿಷ್ಠ ಒಂದು ಲಕ್ಷ ರೂ. ಪರಿಹಾರ ನೀಡಬೇಕು. ನೌಕರರ ಬೇಡಿಕೆ ಈಡೇರಿಸದ ಹೊರತು ಮುಷ್ಕರ ಕೈ ಬಿಡುವುದಿಲ್ಲ ಎಂದು ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ಎಚ್ಚರಿಕೆ ನೀಡಿದ್ದಾರೆ.
ಅಂಗನವಾಡಿ ನೌಕರರಿಗೆ ತರಬೇತಿ
ಪೋಷಣ್ ಅಭಿಯಾನದಡಿ 2018 ಮಾರ್ಚ್ ನಲ್ಲಿ 450 ವಿದ್ಯಾವಂತರನ್ನು ಸಮನ್ವಯ ಅಧಿಕಾರಿಗಳನ್ನಾಗಿ ನೇಮಕಮಾಡಿಕೊಳ್ಳಲಾಗಿತ್ತು. ಪೋಷಣ್ ಅಭಿಯಾನದಡಿ ಅಪೌಷ್ಠಿಕತೆ ತಡೆಯಲು ಮತ್ತು ಅಂಗನವಾಡಿಗಳಲ್ಲಿ ಸಮುದಾಯ ಆಧಾರಿತ ಅನ್ನಪ್ರಾಶನ, ಸೀಮಂತ, ಸುಪೋಷಣ್ ದಿವಸ್, ಶಾಲಾ ಪೂರ್ವ ಚಟುವಟಿಕೆಗಳನ್ನು ಆನ್ಲೈನ್ ನಲ್ಲಿ ದಾಖಲಿಸುವ ಸಂಬಂಧ ಅಂಗನವಾಡಿ ನೌಕರರಿಗೆ ತರಬೇತಿ ನೀಡಲು ಈ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಎಂಬಿಎ, ಎಂಎಸ್ ಡಬ್ಲೂ ಮಾಡಿದ ಪ್ರತಿಭಾನ್ವಿತರು ಪೋಷಣ್ ಅಭಿಯಾನದಡಿ ಕೆಲಸಕ್ಕೆ ನೇಮಕಗೊಂಡಿದ್ದರು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಕೋ ಆರ್ಡಿನೇಟರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನೇಮಕಗೊಂಡ ತಿಂಗಳಿನಿಂದಲೂ ಸರಿಯಾಗಿ ವೇತನ ಸಹ ನೀಡಿರಲಿಲ್ಲ.
ಕೋ ಆರ್ಡಿನೇಟರ್ ಹುದ್ದೆಗಳನ್ನು ರದ್ದು ಪಡಿಸಿ
ಇದೀಗ ಕೇಂದ್ರ ಸರ್ಕಾರ ಮಿಷನ್ ಸಕ್ಷಮ್ ಅಂಗನವಾಡಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಸಹಾಯಕ ಕೋ ಆರ್ಡಿನೇಟರ್ ಹುದ್ದೆಗಳನ್ನು ರದ್ದು ಪಡಿಸಿದೆ ಎಂದು ಹೇಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಆಖೆಯ ನಿರ್ದೇಶಕರು ಏಕಾಏಕಿ 200 ಕ್ಕೂ ಹೆಚ್ಚು ನೌಕರರನ್ನು ಸೇವೆಯಿಂದ ವಜಾ ಮಾಡಿ ಆದೇಶ ಮಾಡಿದ್ದಾರೆ. ಉಪ ನಿರ್ದೇಶಕರ ಈ ಅವೈಜ್ಞಾನಿಕ ಆದೇಶದಿಂದ 200 ಪ್ರತಿಭಾವಂತ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ಕ್ರಮ ಖಂಡಿಸಿ ಪೋಷನ್ ಅಭಿಯಾನದಡಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮುಷ್ಕರ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಕಾಯಂಯೇತರ ನೌಕರರ ಒಕ್ಕೂಟದ ವತಿಯಿಂದ ಹೋರಾಟ ನಡೆಸುತ್ತಿದ್ದಾರೆ.
ಮಾಸಿಕ ಸರಿಯಾಗಿ ವೇತನ ನೀಡಬೇಕು
ಪೋಷಣ್ ಅಭಿಯಾನದಡಿ ನೇಮಕಗೊಂಡಿದ್ದ ನೌಕರರನ್ನು ವಾಪಸು ಸೇವೆಯಲ್ಲಿ ಮುಂದುವರೆಸಬೇಕು. ಮಿಷನ್ ಸಕ್ಷಮ ಯೋಜನೆಯಲ್ಲಿ ನೌಕರರನ್ನು ಕಡಿತಗೊಳಿಸುವುದನ್ನು ಸರ್ಕಾರ ವಿರೋಧಿಸಬೇಕು. ಈಗಿರುವ ನೌಕರರಿಗೆ ಮಾಸಿಕ ಸರಿಯಾಗಿ ವೇತನ ನೀಡಬೇಕು. ಪೋಷಣ್ ಅಭಿಯಾನದಡಿ ಕೆಲಸ ಮಾಡಿದ ನೌಕರರಿಗೆ ಶಾಸನಬದ್ಧ ವೇತನ ಹಾಗೂ ಸೌಲಭ್ಯ ನೀಡಬೇಕು ಎಂದ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.