ನಾಗರಮಡಿ ಜಲಪಾತದಲ್ಲಿ ಕೊಚ್ಚಿಹೋಗಿದ್ದ 6 ಜನರಲ್ಲಿ ಐವರ ಶವ ಪತ್ತೆ
ಕಾರವಾರ, ಸೆಪ್ಟೆಂಬರ್ 18: ಇಲ್ಲಿನ ನಾಗರಮಡಿ ಜಲಪಾತದಲ್ಲಿ ಭಾನುವಾರ ಕೊಚ್ಚಿ ಹೋಗಿದ್ದ ಗೋವಾ ಮೂಲದ ಪ್ರವಾಸಿಗರಲ್ಲಿ ಐವರು ಶವ ದೊರೆತಿದೆ. ಒಟ್ಟು ಆರು ಜನ ಪ್ರವಾಸಿಗರು ಕೊಚ್ಚಿ ಹೋಗಿದ್ದು ಇನ್ನೊಬ್ಬರ ಶವ ಇನ್ನೂ ದೊರೆತಿಲ್ಲ.
ಕಾರವಾರದಲ್ಲಿ ಜಲಪಾತಕ್ಕೆ ಇಳಿದ ಐವರು ನೀರುಪಾಲು
ಭಾನುವಾರ ಬೆಳಿಗ್ಗೆ ಚೆಂಡಿಯಾ ಗ್ರಾಮದ ನಾಗರಮಡಿ ಜಲಪಾತಕ್ಕೆ ಗೋವಾದ ಮಡಗಾಂವ್ ರಾಯ್ ನ 50ಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಇವರಲ್ಲಿ ಆರು ಜನ ಜಲಪಾತದ ಕೊಳದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದರು. ಈ ವೇಳೆ ಜಲಪಾತದ ತುದಿಯಿಂದ ಏಕಾಏಕಿ ರಭಸವಾಗಿ ನೀರು ನುಗ್ಗಿದ್ದರಿಂದ ಕೊಚ್ಚಿ ಹೋಗಿದ್ದರು.
ನೀರಿನಲ್ಲಿ ಕೊಚ್ಚಿಹೋಗಿದ್ದ ಗೋವಾ ಮೂಲದ ಆರು ಜನ ಪ್ರವಾಸಿಗರಲ್ಲಿ ಭಾನುವಾರ ಫ್ರಾನ್ಸಿಲಾ ಪೀರಿಸ್ ಮತ್ತು ಫಿಯಾನೊ ಪಚಗಾವೋ ಎಂಬುವವರ ಶವ ದೊರೆತಿತ್ತು. ಇದೀಗ ಸೋಮವಾರ ಪೊಂಡಾದ ಸಮೀರ್ ಗಾವಡೆ (28), ವಾಸ್ಕೋದ ಸಿದ್ದು ಚೆರಿ (21), ಮಾರ್ಸಲೀನ ಮೆಕ್ಸಿಕಾ (38)ರ ಮೃತದೇಹ ಸಿಕ್ಕಿದೆ.
ಹೀಗೆ ಆರರಲ್ಲಿ ಐದು ಜನರ ಮೃತದೇಹ ಸಿಕ್ಕಿದ್ದು ರೇಣುಕಾ ಎಂಬುವರ ಶವ ದೊರಕಬೇಕಿದ್ದು ಶೋಧ ಕಾರ್ಯ ಮುಂದುವರೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು, ಸ್ಥಳೀಯ ಈಜುಗಾರರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.