ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ
ಬೆಂಗಳೂರು, ಜುಲೈ 30: ಸಿದ್ಧಾರ್ಥ ಅವರು ತಮ್ಮ ಕಂಪೆನಿ ಉದ್ಯೋಗಿಗಳಿಗೆ ಬರೆದಿದ್ದರು ಎನ್ನಲಾಗುತ್ತಿರುವ 'ವಿದಾಯ ಪತ್ರ' ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಪತ್ರದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
'ನಾನು ವಿಫಲನಾದೆ, ಒಬ್ಬ ಗೆಳೆಯ, ಒಬ್ಬ ಮಾಜಿ ಐಟಿ ಅಧಿಕಾರಿ ನನಗೆ ಒತ್ತಡ ಹೇರುತ್ತಿದ್ದಾರೆ, ವ್ಯವಹಾರ ಸಾಧ್ಯವಾಗದ ಸ್ಥಿತಿ ತಲುಪಿದ್ದೇನೆ' ಎಂದು ಸಿದ್ಧಾರ್ಥ ಅವರು ಜುಲೈ 27 ರಂದು ಸಿಬ್ಬಂದಿಗಳಿಗೆ ಪತ್ರ ಬರೆದಿದ್ದಾರೆ ಎಂದು ಪತ್ರದ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಪತ್ರವನ್ನು ಕೂಲಂಕುಶವಾಗಿ ಗಮನಿಸಿದರೆ ಅದರಲ್ಲಿನ ಸಹಿಯು ಸಿದ್ಧಾರ್ಥ ಅವರ ಸಹಿಗೆ ಹೋಲುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಸಿದ್ಧಾರ್ಥ ಅವರು ವಾರ್ಷಿಕ ವರದಿಗೆ ಮಾಡಿರುವ ಸಹಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರದಲ್ಲಿನ ಸಹಿಗೂ ಹಲವು ವ್ಯತ್ಯಾಸವಿದೆ. ಮೇಲ್ನೋಟಕ್ಕೆ ಒಂದೇ ಎಂಬಂತೆ ಕಾಣುತ್ತಿದೆಯಾದರೂ ಸೂಕ್ಷ್ಮವಾದ ಗಮನಿಕೆಯಿಂದ ಸತ್ಯ ತಿಳಿಯುತ್ತದೆ. ಪತ್ರದಲ್ಲಿನ ಸಹಿಯನ್ನು ಆತುರದಲ್ಲಿ ಮಾಡಿರುವ ಸಾಧ್ಯತೆಯೂ ಇದೆ.

ಡಿ.ಕೆ.ಶಿವಕುಮಾರ್ ಅವರೂ ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪತ್ರದಲ್ಲಿ ದಿನಾಂಕ 27 ಎಂದು ಇದೆ, ಆದರೆ ಸಿದ್ಧಾರ್ಥ ಅವರು ನನಗೆ 28 ರಂದು ಕರೆ ಮಾಡಿದ್ದರು, ಮತ್ತು ಅಂದು ಚೆನ್ನಾಗಿಯೇ ಮಾತನಾಡಿದರು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಖ್ಯಾತ ಉದ್ಯಮಿ ಕಿರಣ್ ಮಜೂಂದಾರ್ ಷಾ ಅವರೂ ಸಹ ಸಿದ್ಧಾರ್ಥ ಅವರ ಕಣ್ಮರೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪತ್ರದ ಬಗ್ಗೆಯೂ ವಿಶೇಷ ಅನುಮಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications