Siddeshwara Swamiji: ತಮ್ಮ ಮರಣದ ಬಗ್ಗೆ 2014ರಲ್ಲೇ ಹೇಳಿದ್ದ ಸಿದ್ದೇಶ್ವರ ಶ್ರೀಗಳು
ವಿಜಯಪುರ, ಜ. 02: ಆಧ್ಯಾತ್ಮಿಕ ಪ್ರವಚನಕಾರ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಅಸ್ತಂಗತರಾಗಿದ್ದಾರೆ. ಅಪಾರ ಭಕ್ತ ಸಮೂಹವನ್ನು ಅನಾಥರನ್ನಾಗಿಸಿ ತೆರಳಿರುವ ಸಿದ್ದೇಶ್ವರ ಶ್ರೀಗಳು ತಮ್ಮ ಮರಣದ ಬಗ್ಗೆ ಎಂಟು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ಹೌದು, ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶ್ರೀಗಳು ತಮ್ಮ ಮರಣ ಯಾವ ರೀತಿ ಇರುತ್ತೆ ಎಂದು 2014ರಲ್ಲೇ ಹೇಳಿದ್ದರು.
ಮರಣದ ಬಗ್ಗೆ ತಿಳಿಸಿದ್ದ ಶ್ರೀಗಳು ನನ್ನನ್ನು ಹೂಳಬೇಡಿ, ಸುಡಬೇಕು, ನನ್ನ ಕುರುಹುಗಳು ಇರಬಾರದು ಎಂದು ತನ್ನ ಭಕ್ತರಿಗೆ ಸೂಚನೆ ನೀಡಿದ್ದರು. ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂಬ ಸೂಚನೆಗಳನ್ನು ನೀಡಿದ್ದರು.

ವೈಕುಂಠ ಏಕಾದಶಿಯ ಪುಣ್ಯದಿನದಂದು ಶ್ರೀಗಳ ಲಿಂಗೈಕ್ಯರಾಗಿದ್ದು, ಇದು ದೇಹತ್ಯಾಗ ಎಂದು ಹಲವರು ನಂಬುತ್ತಾರೆ. ತಮ್ಮ ಮರಣದ ಬಗ್ಗೆ ತಾವೇ ಭವಿಷ್ಯ ನುಡಿದ್ದಿದ್ದ ಅವರು ಈ ಪುಣ್ಯದಿನದಂದು ದೇಹತ್ಯಾಗ ಮಾಡಿದ್ದಾರೆ ಎಂದು ಶ್ರಿಗಳ ಬಗ್ಗೆ ಗೌರವ ಸೂಚಿಸುತಿದ್ದಾರೆ.
ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಶ್ರೀಗಳು ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದವರು. ಶ್ರೀಗಳ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ಬದಲಾವಣೆಗೆ ಕಾರಣವಾಗುತ್ತಿವೆ.
ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮಠದತ್ತ ಭಕ್ತರು ಧಾವಿಸುತ್ತಿದ್ದು, ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಮಂಗಳವಾರ ಬೆಳಗ್ಗಿನ ಜಾವದಿಂದ ಶ್ರೀಗಳ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಲಿದೆ.
ಜನವರಿ 3ರಂದು ಬೆಳಿಗ್ಗೆ 5 ರಿಂದ ಸಂಜೆ 4ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 5ಕ್ಕೆ ಅಂತಿಮ ಯಾತ್ರೆಯು ಸೈನಿಕ ಶಾಲೆಯಿಂದ ಆರಂಭಗೊಂಡು, ಶಿವಾಜಿ ವೃತ್ತ, ಗಾಂಧಿ ಚೌಕಿ, ಸಿದ್ಧೇಶ್ವರ ಗುಡಿ ಮೂಲಕವಾಗಿ ಸಾಗಿ ಆಶ್ರಮ ತಲುಪಲಿದೆ. ಸಂಜೆ 6.5ಕ್ಕೆ ಸರ್ಕಾರದ ಸಕಲ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.
ಕಳೆದ 5 ದಿನಗಳಿಂದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರಿಗಳಿಗೆ ಮಠದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ವೈಕುಂಠ ಏಕಾದಶಿಯ ದಿನವೇ ಶ್ರಿಗಳು ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಮಾಹಿತಿ ನೀಡಿದ್ದಾರೆ.
ಶ್ರೀಗಳ ಅಗಲಿಕೆಗೆ ಇಡೀ ರಾಜ್ಯವೇ ದುಖಃದ ಮಡಿಲಲ್ಲಿದೆ. ಮಠದ ಆವರಣದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.











Click it and Unblock the Notifications