ದೆಹಲಿ ತಬ್ಲಿಘಿ ಸಮಾವೇಶದಿಂದ ಕೊರೊನಾ ಸೋಂಕು ಹರಡಿತ್ತಾ?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಮೇ 13: ಕೊರೊನಾ ವೈರಸ್ ಅಟ್ಟಹಾಸ ಜಗತ್ತಿನಾದ್ಯಂತ ಮುಂದುವರೆದಿದೆ. ಭಾರತದಲ್ಲಿಯೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಜೊತೆಗೆ ಕೊರೊನಾ ವೈರಸ್ ತಂದಿಟ್ಟ ಪರೋಕ್ಷ ಸಮಸ್ಯೆಗಳು ಒಂದೆರಡಲ್ಲ.
Recommended Video
ಕೊರೊನಾ ಸೋಂಕು ಕೇವಲ ಜನರ ಆರೊಗ್ಯದ ಮೇಲೆ ಮಾತ್ರ ದಾಳಿ ಮಾಡಿಲ್ಲ. ಬದಲಿಗೆ ಜನರ ಮೇಲೆ ಮಾನಸಿಕವಾಗಿಯೂ ಪರಿಣಾಮ ಬೀರಿದೆ. ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಧಾರ್ಮಿಕ ಸಮಾವೇಶದಿಂದ ಸೋಂಕು ಹರಡುವುದು ಹೆಚ್ಚಾಯಿತು ಎಂಬ ಆರೋಪ, ಸಹಜವಾಗಿಯೆ ಮತ್ತೊಂದು ಸಮುದಾಯದ ಮೇಲೆ ಪರಿಣಾಮ ಬೀರಿತು.
ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ: ಸಿದ್ದರಾಮಯ್ಯ
ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದವರಿಂದ ಹರಡಿದ ಸೋಂಕಿನ ಕುರಿತು ಅಂಕಿ ಅಂಶಗಳನ್ನು ಇಟ್ಟುಕೊಂಡು ಟ್ವಿಟ್ಟರ್, ಫೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯೂ ನಡೆದಿದೆ. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ತಬ್ಲಿಘಿ ಸಮಾವೇಶದ ಕುರಿತು ಇದೀಗ ಮೂಲಭೂತ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಮಾರ್ಚ್ ನಲ್ಲಿ ನಡೆದಿದ್ದ ತಬ್ಲಿಘಿ ಸಮಾವೇಶ
ಕಳೆದ ಮಾರ್ಚ್ ತಿಂಗಳಿನಲ್ಲಿ ಎರಡು ಹಂತಗಳಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆದಿತ್ತು. ಎರಡು ಹಂತಗಳಲ್ಲಿ ನಡೆದಿದ್ದ ಸಮಾವೇಶದಲ್ಲಿ ದೇಶ-ವಿದೇಶಗಳಿಂದ ಬಂದಿದ್ದ 15 ಸಾವಿರಕ್ಕಿಂತಲೂ ಹೆಚ್ಚು ಜನರು ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು.
ವಿದೇಶಗಳಿಂದ ಬಂದಿದ್ದ ತಬ್ಲಿಘಿ ಕಾರ್ಯಕರ್ತರಿಂದ ಸಮಾವೇಶದಲ್ಲಿ ಭಾಗವಹಿಸಿದ್ದ ಇತರರಿಗೆ ಕೊರೊನಾ ವೈರಸ್ ಸೋಂಕು ಹರಡಿತ್ತು.
ಸಮಾವೇಶ ಮುಗಿಯುತ್ತಿದ್ದಂತೆಯೆ ಲಾಕ್ಡೌನ್ ಜಾರಿ
ತಬ್ಲಿಘಿ ಎರಡನೇ ಸಮಾವೇಶ ಮುಗಿಯುತ್ತಿದ್ದಂತೆಯೆ ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿಗೆ ತರಲಾಯ್ತು. ಜೊತೆಗೆ ಆರಂಭಿಕ ಹಂತದಲ್ಲಿ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದ್ದ ಹೆಚ್ಚಿನವರಲ್ಲಿ ಸೋಂಕು ದೃಢವಾಗಿತ್ತು. ಅದೇ ಸಂದರ್ಭದಲ್ಲಿ ತಬ್ಲಿಘಿಗಳು ಸೋಂಕು ಹರಡುತ್ತಿದ್ದಾರೆ ಎಂದು ಆರೋಪಿಸುವಂತಹ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡಿದ್ದವು. ಅದು ಮತ್ತೊಂದು ಸಮುದಾಯದ ಮೇಲೆ ಪರಿಣಾಮ ಬೀರುವಂತಾಗಿತ್ತು.
ಕೊರೊನಾ ಸಂಬಂಧ ಸಿಎಂ ಮುಂದೆ 15 ಬೇಡಿಕೆಯಿಟ್ಟ ಕಾಂಗ್ರೆಸ್ ನಿಯೋಗ
ತಬ್ಲಿಘಿ ಸಮಾವೇಶಕ್ಕೆ ಅನುಮತಿ ಕೊಟ್ಟಿದ್ಯಾರು?
ಧಾರ್ಮಿಕ ಸಮಾವೇಶಕ್ಕೆ ಅನುಮತಿ ಕೊಟ್ಟವರು ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೂಲಭೂತ ಪ್ರಶ್ನೆ ಎತ್ತಿದ್ದಾರೆ. ತಬ್ಲೀಘ್ಗಳಿಂದ ಸೋಂಕು ಹೆಚ್ಚಾಯಿತು ಎನ್ನುತ್ತಾರೆ. ಹಾಗಾದರೆ ಇಟಲಿ, ಅಮೆರಿಕ, ಸ್ಪೇನ್ ನಲ್ಲಿ ಯಾವ ತಬ್ಲೀಘ್ಗಳಿದ್ದರು. ರಾಜಕೀಯ ಕಾರಣಕ್ಕಾಗಿ ಆರ್ ಎಸ್ಎಸ್ ನವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಇದು ಕೋಮುವಾದಿಗಳ ಹುನ್ನಾರ.
ದೆಹಲಿಯಲ್ಲಿ ತಬ್ಲೀಘ್ ಸಮಾವೇಶಕ್ಕೆ ಪರವಾನಗಿ ಕೊಟ್ಟವರು ಯಾರು ? ಕೇಂದ್ರ ಸರ್ಕಾರವೇ ಪರವಾನಗಿ ಕೊಟ್ಟಿದ್ದು. ಇದು ಮೊದಲನೆಯ ತಪ್ಪು. ಸೋಂಕು ತಡೆಗಟ್ಟದೇ ಹೋಗಿದ್ದು ಎರಡನೇ ತಪ್ಪು. ಯಾರ ಪ್ರಮಾದ ಇದು ? ಕೇಂದ್ರವೇ ಇದಕ್ಕೆ ಹೊಣೆ. ತಬ್ಲೀಘ್ಗಳ ವಿಷಯದಲ್ಲಿ ಕೋಮುವಾದಿಗಳು ನೀಡುತ್ತಿರುವ ಹೇಳಿಕೆ ರಾಜಕೀಯ ಹುನ್ನಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಲಾಕ್ಡೌನ್ ಜಾರಿ
ಮಾರ್ಚ್ 24ರಂದು ಲಾಕ್ಡೌನ್ ಮಾಡುವುದಕ್ಕು ಮುನ್ನ ಸಿದ್ಧತೆಗಳೇ ಇರಲಿಲ್ಲ. ಜನರಿಗೂ ಮೊದಲೇ ತಿಳಿಸಲಿಲ್ಲ. ಒಂದು ವಾರದ ಮೊದಲೇ ಹೇಳಿದ್ದರೆ ವಲಸೆ ಕಾರ್ಮಿಕರು ಈ ರೀತಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪೂರ್ವ ಸಿದ್ಧತೆ, ಮುಂಗಾಗ್ರತೆ ಇಲ್ಲದ ಕಾರಣ ಈ ಎಲ್ಲ ಸಮಸ್ಯೆಗಳು ಉದ್ಭವ ಆಗಿವೆ.
ಕರ್ನಾಟಕದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಉಚಿತವಾಗಿ ಕಳುಹಿಸಬೇಕು. ಅದೇ ರೀತಿ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಇಲ್ಲಿಗೆ ಕರೆತರಬೇಕು. ಆರ್ಥಿಕ ವಲಯಕ್ಕೆ ಕಾರ್ಮಿಕರೇ ಬೆನ್ನೆಲುಬು. ಅವರ ವಿಚಾರದಲ್ಲಿಯೇ ಈ ರೀತಿ ಮೀನಮೇಷ ಎಣಿಸಿದರೆ ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಏನು ಎಂಬುದು ಅರ್ಥವಾಗುತ್ತದೆ ಎಂದು ಸರ್ಕಾರ ವೈಫಲ್ಯವನ್ನು ಸಿದ್ದರಾಮಯ್ಯ ಅವರು ಬಿಚ್ಚಿಟ್ಟಿದ್ದಾರೆ.
ಇಲ್ಲಿಯವರೆಗೆ ಸಹಕಾರ, ಇನ್ಮುಂದೆ ಹೋರಾಟ!
ನಾವು ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಠಿಣ ಶಬ್ದಗಳಿಂದ ಟೀಕೆ ಮಾಡಿರಲಿಲ್ಲ. ಮೊದಲಿನಿಂದಲೂ ನಾವು ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೆ, ನಮ್ಮ ಸಲಹೆ ಸೂಚನೆಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಶ್ರಮಿಕ ವರ್ಗದವರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವಿವರಿಸಿ ಅವರ ಪರವಾಗಿ ಬೇಡಿಕೆಗಳನ್ನು ಮಂಡಿಸಿದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ತೀರ್ಮಾನ ಮಾಡಿದ್ದೇವೆ.
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಏನೂ ಆಗುವುದಿಲ್ಲ. ಅದರ ಬದಲಿಗೆ ಬಡವರು, ಕಾರ್ಮಿಕರನ್ನು ರಕ್ಷಣೆ ಮಾಡಲಿ. ಇಡೀ ಜಗತ್ತಿನಲ್ಲಿ ಮೋದಿಯವರು ಒಬ್ಬರೇ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಬದಲು ಸೃಷ್ಟಿಯಾಗಿರುವ ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.