Get Updates
Get notified of breaking news, exclusive insights, and must-see stories!

ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂಬುದು ಸುಳ್ಳು: ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕ ಶಿಸ್ತು ಮತ್ತು ಗ್ಯಾರಂಟಿ ಯೋಜನೆಗಳ ಕುರಿತಾದ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂಕಿ-ಅಂಶಗಳ ಸಮೇತ ಉತ್ತರ ನೀಡಿದ್ದಾರೆ. "ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು, ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣಕ್ಕಾಗಿ ನಿಯಮದ ಮಿತಿಯಲ್ಲೇ ಸಾಲ ಮಾಡಲಾಗುತ್ತಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಲ ಮಾಡುವುದು ಅನಿವಾರ್ಯ

ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. 2008ರಿಂದ 2013ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೂ ಸಾಲ ಮಾಡಿತ್ತು. ಐದು ವರ್ಷಕ್ಕೊಮ್ಮೆ ಸಾಲದ ಮೊತ್ತ ದುಪ್ಪಟ್ಟಾಗುವುದು ಸಹಜ ಪ್ರಕ್ರಿಯೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಸಾಲ ₹165 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರದ ಸಾಲದ ಪ್ರಮಾಣವನ್ನು ಅವರು ಉಲ್ಲೇಖಿಸಿದರು.

Siddaramaiah

ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ಜಿಡಿಪಿ (GDP) ಬೆಳವಣಿಗೆಗಿಂತ ಕರ್ನಾಟಕದ ಬೆಳವಣಿಗೆ ಉತ್ತಮವಾಗಿದೆ. ದಕ್ಷಿಣ ಭಾರತದ ರಾಜ್ಯಗಳು ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ, ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು. ಗ್ಯಾರಂಟಿಗಳಿಂದಾಗಿ ರಾಜ್ಯದ ಸಾಲ ಹೆಚ್ಚುತ್ತಿದೆ ಎಂಬ ಟೀಕೆಯನ್ನು ತಿರಸ್ಕರಿಸಿದ ಸಿಎಂ, ಇದುವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ₹1.31 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರದಂತಹ ರಾಜ್ಯಗಳು ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತಗೊಳಿಸುತ್ತಿವೆ. ಆದರೆ, ನಮ್ಮ ಸರ್ಕಾರ ಪ್ರತಿ ವರ್ಷ ಒಂದೇ ರೀತಿಯಲ್ಲಿ ಗ್ಯಾರಂಟಿಗಳಿಗೆ ಅನುದಾನ ನೀಡುವ ಮೂಲಕ ಬದ್ಧತೆ ಮೆರೆದಿದೆ ಎಂದರು.

ಜಿಎಸ್‌ಟಿ ಪಾಲು ಮತ್ತು ಕೇಂದ್ರದ ನೀತಿ

ರಾಜ್ಯದ ಜಿಎಸ್‌ಟಿ (GST) ಬೆಳವಣಿಗೆಯು ಶೇ 10ರಷ್ಟಿತ್ತು. ಆದರೆ ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ಕಡಿತಗೊಳಿಸಿದ್ದರಿಂದ ಅದು ಶೇ 4ಕ್ಕೆ ಕುಸಿದಿದೆ. ಕೇಂದ್ರದ ಈ ನೀತಿಯಿಂದಾಗಿ ರಾಜ್ಯಕ್ಕೆ ಆದಾಯದ ನಷ್ಟವಾಗುತ್ತಿದೆ. ಈ ನೀತಿಯನ್ನು ವಿರೋಧಿಸಿ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳು ಕೇಂದ್ರದಿಂದ ಪರಿಹಾರ ಕೇಳಿವೆ" ಎಂದು ಅವರು ಮಾಹಿತಿ ನೀಡಿದರು. ಮುಖ್ಯಮಂತ್ರಿಗಳ ಈ ಉತ್ತರವು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಇರುವ ಆತಂಕಗಳನ್ನು ದೂರ ಮಾಡುವ ಪ್ರಯತ್ನವಾಗಿದ್ದು, ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ರಾಜ್ಯ ಸರ್ಕಾರ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ನಮ್ಮದು ಜನಪರ ಮತ್ತು ಅಭಿವೃದ್ಧಿಪರ ಬಜೆಟ್ ಆಗಿದ್ದು, ವಿರೋಧ ಪಕ್ಷದವರು ಕೇವಲ ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಗುಡುಗಿದರು. ಬುದ್ಧ, ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರೂ ಸಮಾಜದಲ್ಲಿ ಜಾತಿ, ವರ್ಗ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಸರ್ವಜನಾಂಗದ ಶಾಂತಿಯ ತೋಟ ಎಂಬುದು ನಮ್ಮ ಸರ್ಕಾರದ ಸಿದ್ಧಾಂತವಾಗಿದ್ದು, ಎಲ್ಲರನ್ನೊಳಗೊಂಡ ಸಮಸಮಾಜ ನಿರ್ಮಾಣ ನಮ್ಮ ಗುರಿ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಮೂಢನಂಬಿಕೆಗಳನ್ನು ನಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇರಬೇಕು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ನಮ್ಮ ಸರ್ಕಾರ ಶಿಕ್ಷಣಕ್ಕೆ ಭರಪೂರ ಅನುದಾನ ನೀಡಿದೆ. 2026-27ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹72,386 ಕೋಟಿ ಮೀಸಲಿಡಲಾಗಿದೆ. ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿಗೆ ನಾಲ್ಕು ವರ್ಷದಲ್ಲಿ ₹10,435 ಕೋಟಿ ನೀಡಿದ್ದರೆ, ನಮ್ಮ ಸರ್ಕಾರ ನಾಲ್ಕು ವರ್ಷದಲ್ಲಿ ₹20,200 ಕೋಟಿ ನೀಡಿದೆ.

ಸಾಮಾಜಿಕ ಭದ್ರತೆಯ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ₹10,600 ಕೋಟಿ ಮೀಸಲಿಡಲಾಗಿದೆ. ನಮ್ಮದು ಯುನಿವರ್ಸಲ್ ಬೇಸಿಕ್ ಇನ್ಕಮ್ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಈ ಬಾರಿಯ ಬಜೆಟ್ ಬುದ್ಧನ ಕರುಣೆ ಮತ್ತು ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ಆಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಮಾನವಾಗಿ ವೆಚ್ಚ ಮಾಡುತ್ತಿರುವುದಾಗಿ ಸ್ಪಷ್ಟಪಡಿಸುವ ಮೂಲಕ ಅವರು ವಿರೋಧ ಪಕ್ಷದ ಟೀಕೆಗಳಿಗೆ ಉತ್ತರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+